ರಾಹುಲ್ ದ್ರಾವಿಡ್ಗೆ ಕೊರೊನಾ ಪಾಸಿಟಿವ್: ಏಷ್ಯಾಕಪ್ನಲ್ಲಿ ವಿವಿಎಸ್ ಲಕ್ಷ್ಮಣ್ ಮಾರ್ಗದರ್ಶನ
ಜಿಂಬಾಬ್ವೆ ವಿರುದ್ಧ ಮೂರು ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಏಷ್ಯಾಕಪ್ನಲ್ಲಿ ಭರ್ಜರಿ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ಭಾರತ ತಂಡದ ಮುಖ್ಯ ಕೋಚ್ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡದ ಜೊತೆಗಿರುವುದು ಅಸಾಧ್ಯ ಎಂದು ಹೇಳಲಾಗಿದೆ.
ಜಿಂಬಾಬ್ವೆ ಪ್ರವಾಸದಲ್ಲಿ ರಾಹುಲ್ ದ್ರಾವಿಡ್ ಭಾರತದ ತಂಡದ ಭಾಗವಾಗಿರಲಿಲ್ಲ, ವಿವಿಎಸ್ ಲಕ್ಷ್ಮಣ್ ಆಫ್ರಿಕಾದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಸ್ಟ್ಯಾಂಡ್-ಇನ್ ಮುಖ್ಯ ಕೋಚ್ ಆಗಿ ನೇಮಕಗೊಂಡರು ಮತ್ತು ದ್ರಾವಿಡ್ ಕೊರೊನಾ ಸೋಂಕಿಗೆ ತುತ್ತಾಗಿರುವುದರಿಂದ ಏಷ್ಯಾಕಪ್ನಲ್ಲಿ ವಿವಿಎಸ್ ಲಕ್ಷ್ಮಣ್ ತರಬೇತುದಾರರಾಗಿ ಜವಾಬ್ದಾರಿ ಹೊರುವ ಸಾಧ್ಯತೆ ಇದೆ.
ಪಂಜಾಬ್ ಕಿಂಗ್ಸ್ ನಾಯಕ ಸ್ಥಾನದಿಂದ ಕೆಳಗಿಳಿಯಲಿರುವ ಕನ್ನಡಿಗ ಮಯಾಂಕ್: ಯಾರು ಹೊಸ ನಾಯಕ?
ಭಾರತದ ಪ್ರಮುಖ ಬೌಲರ್ ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಗಾಯದ ಸಮಸ್ಯೆಯಿಂದ ಏಷ್ಯಾಕಪ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಭಾರತದ ಬೌಲಿಂಗ್ ವಿಭಾಗದ ಬಗ್ಗೆ ಚಿಂತೆ ಇರುವಾಗಲೇ ಈಗ ರಾಹುಲ್ ದ್ರಾವಿಡ್ ಅವರ ಅನುಭವ, ಮಾರ್ಗದರ್ಶನವನ್ನು ಟೀಂ ಇಂಡಿಯಾ ಕಳೆದುಕೊಂಡಿದೆ. ದ್ರಾವಿಡ್ ಅನುಪಸ್ಥಿತಿ ಖಂಡಿತವಾಗಿಯೂ ಏಷ್ಯಾಕಪ್ನಲ್ಲಿ ಭಾರತವನ್ನು ಕಾಡಲಿದೆ ಎಂದು ಹೇಳಲಾಗಿದೆ.
ಏಷ್ಯಾಕಪ್ನಲ್ಲಿ ವಿವಿಎಸ್ ಲಕ್ಷ್ಮಣ್ ಮಾರ್ಗದರ್ಶನ
ರಾಹುಲ್ ದ್ರಾವಿಡ್ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಜೊತೆ ಏಷ್ಯಾ ಕಪ್ ಟೂರ್ನಿಗೆ ವಿವಿಎಸ್ ಲಕ್ಷ್ಮಣ್ ಕೋಚಿಂಗ್ ಅವಧಿಯನ್ನು ಮುಂದುವರೆಸುವ ಸಾಧ್ಯತೆಯಿದೆ.
ಆದರೆ ಹಂಗಾಮಿ ತರಬೇತುದಾರ ವಿವಿಎಸ್ ಲಕ್ಷ್ಮಣ್ ಅವರ ಮಾರ್ಗದರ್ಶನದಲ್ಲಿ ಭಾರತ ತಂಡವು ಉತ್ತಮ ಪ್ರದರ್ಶನ ನೀಡಿದೆ, ಅವರು ಆತಿಥೇಯ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಲು ಯುವ ಭಾರತೀಯ ತಂಡಕ್ಕೆ ಮಾರ್ಗದರ್ಶನ ನೀಡಿದರು. ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಮುಖ್ಯಸ್ಥರು ಈ ವರ್ಷದ ಐರ್ಲೆಂಡ್ ಪ್ರವಾಸದಲ್ಲಿ ರಾಷ್ಟ್ರೀಯ ತಂಡದ ಉಸ್ತುವಾರಿ ವಹಿಸಿದ್ದರು. ಆಗಸ್ಟ್ 28 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಏಷ್ಯಾ ಕಪ್ ಆರಂಭಿಕ ಪಂದ್ಯದಲ್ಲಿ ತಂಡದೊಂದಿಗೆ ಭಾರತ ತಂಡದ ಗೆಲುವಿಗಾಗಿ ಟೀಂ ಇಂಡಿಯಾ ಜೊತೆ ವಿವಿಎಸ್ ಲಕ್ಷ್ಮಣ್ ರಣತಂತ್ರ ರೂಪಿಸಲಿದ್ದಾರೆ.
ಇನ್ನಿಂಗ್ಸ್ ಆರಂಭಿಸಲಿರುವ ಕೆ.ಎಲ್. ರಾಹುಲ್
ಐಪಿಎಲ್ ನಂತರ ಗಾಯದ ಸಮಯದಿಂದ ಕ್ರಿಕೆಟ್ನಿಂದ ದೂರವುಳಿದಿದ್ದ ಕೆ.ಎಲ್. ರಾಹುಲ್ ನಂತರ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ನಾಯಕರಾಗಿ ಆಯ್ಕೆಯಾಗಿದ್ದರು. ಆದರೆ, ಕೊರೊನಾ ಸೋಂಕಿಗೆ ತುತ್ತಾದ ನಂತರ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಶಿಖರ್ ಧವನ್ರನ್ನು ನಾಯಕರನ್ನಾಗಿ ನೇಮಿಸಲಾಯಿತು.
ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ನಂತರ ಜಿಂಬಾಬ್ವೆ ವಿರುದ್ಧ ಸರಣಿಗೆ ನಾಯಕನಾಗಿ ಮರಳಿದ ಕೆ.ಎಲ್.ರಾಹುಲ್ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿದ್ದು, ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವುದು ಟೀಂ ಇಂಡಿಯಾ ಚಿಂತೆಯನ್ನು ಹೆಚ್ಚಿಸಿದೆ.
ವಿರಾಟ್ ಕೊಹ್ಲಿ ಪ್ರದರ್ಶನದ ಮೇಲೆ ಎಲ್ಲರ ಚಿತ್ತ
ಭಾರತ-ಪಾಕಿಸ್ತಾನ ಪಂದ್ಯದಂತೆ ಈಗ ಏಷ್ಯಾಕಪ್ನಲ್ಲಿ ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಅಭಿಮಾನಿಗಳಿಂದ ಮೊದಲಾಗಿ, ಮಾಜಿ ಕ್ರಿಕೆಟಿಗರು, ಹಾಲಿ ಆಟಗಾರರು ವಿರಾಟ್ ಕೊಹ್ಲಿ ಫಾರ್ಮ್ಗೆ ಮರಳುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಕ್ರಿಕೆಟ್ ಭವಿಷ್ಯ ನಿರ್ಧರಿಸುವಲ್ಲಿ ಈ ಟೂರ್ನಿ ಮಹತ್ವದ ಪಾತ್ರ ವಹಿಸುತ್ತದೆ ಎಂದೇ ಹೇಳಲಾಗಿದೆ.
ಮುಂಬರುವ ಟಿ20 ವಿಶ್ವಕಪ್ನಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕಾದರೆ ವಿರಾಟ್ ಕೊಹ್ಲಿ ಏಷ್ಯಾಕಪ್ನಲ್ಲಿ ರನ್ ಬರ ನೀಗಿಸಿಕೊಳ್ಳಬೇಕಿದೆ. ಆಯ್ಕೆದಾರರು ವಿರಾಟ್ ಕೊಹ್ಲಿ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಬೇಕಿದೆ.
ಸೇಡು ತೀರಿಸಿಕೊಳ್ಳಲು ಕಾದಿರುವ ರೋಹಿತ್ ಪಡೆ
ಏಷ್ಯಾಕಪ್ನ ಭಾರತ ಪಾಕಿಸ್ತಾನ ನಡುವಣ ಪಂದ್ಯ ಸದ್ಯ ಭಾರಿ ಸದ್ದು ಮಾಡುತ್ತಿದೆ. ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ ಕೊನೆಯ ಬಾರಿ ದುಬೈ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಸೋಲನುಭವಿಸಿತ್ತು. ಈಗ ಮತ್ತೆ ಅದೇ ಸ್ಟೇಡಿಯಂನಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿಯೊಂದಿಗೆ ಮುಖಾಮುಖಿಯಾಗುತ್ತಿದ್ದು ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ಪಂದ್ಯದ ಎಲ್ಲಾ ಟಿಕೆಟ್ಗಳು ಈಗಾಗಲೇ ಮಾರಾಟವಾಗಿದ್ದು ಕಾಳಸಂತೆಯಲ್ಲಿ ಒಂದು ಲಕ್ಷ ರುಪಾಯಿಗಳವರೆಗೆ ಮಾರಾಟ ಮಾಡಲಾಗುತ್ತಿದೆ. ಪಂದ್ಯದ ದಿನ ಹತ್ತಿರವಾದಂತೆ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆ ಮುಗಿಲು ಮುಟ್ಟಿದೆ.