Vijay Hazare Trophy: ಪಡಿಕ್ಕಲ್ ಅಬ್ಬರದ ಶತಕ: ಐದನೇ ಪಂದ್ಯವನ್ನೂ ಗೆದ್ದ ಕರ್ನಾಟಕ
ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕದ ಅಜೇಯ ಗೆಲುವಿನ ಓಟ ಮುಂದುವರೆದಿದೆ. ಸತತ ನಾಲ್ಕು ಪಂದ್ಯಗಳನ್ನು ಗೆದ್ದಿದ್ದ ಕರ್ನಾಟಕ ಐದನೇ ಪಂದ್ಯದಲ್ಲಿ ಕೂಡ ಚಂಡೀಗಢದ ವಿರುದ್ಧ 22 ರನ್ಗಳ ಗೆಲುವು ಸಾಧಿಸಿದೆ.
ಗುಜರಾತ್ನ ವಲ್ಲಭ ವಿದ್ಯಾನಗರದ ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ಅಮೋಘ ಪ್ರದರ್ಶನ ನೀಡಿತು. ಟಾಸ್ ಗೆದ್ದ ಕರ್ನಾಟಕ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು.

ಆರಂಭಿಕ ಬ್ಯಾಟರ್ ರವಿಕುಮಾರ್ ಸಮರ್ಥ್ 5 ರನ್ ಗಳಿಸಿ ಔಟಾಗುವ ಮೂಲಕ ಕರ್ನಾಟಕ ಆರಂಭಿಕ ಆಘಾತ ಅನುಭವಿಸಿತು. ನಾಯಕ ಮಯಾಂಕ್ ಅಗರ್ವಾಲ್ ಕೂಡ 19 ರನ್ ಗಳಿಸಿ ಔಟಾದರು. ಆದರೆ ನಂತರ ಬಂದ ದೇವದತ್ ಪಡಿಕ್ಕಲ್ ಮತ್ತು ನಿಕಿನ್ ಜೋಸ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಈ ಟೂರ್ನಿಯಲ್ಲಿ ಅಮೋಘ ಫಾರ್ಮ್ನಲ್ಲಿರುವ ದೇವದತ್ ಪಡಿಕ್ಕಲ್ ಚತ್ತಿಸ್ಗಢದ ವಿರುದ್ಧ ಶತಕ ಗಳಿಸಿ ಮಿಂಚಿದರು. 103 ಎಸೆತಗಳಲ್ಲಿ 9 ಬೌಂಡರಿ 6 ಭರ್ಜರಿ ಸಿಕ್ಸರ್ ಸಹಿತ 114 ರನ್ ಗಳಿಸಿದರು. ನಿಕಿನ್ ಜೋಸ್ ಕೂಡ 94 ರನ್ ಗಳಿಸಿ ಪಡಿಕ್ಕಲ್ ಜೊತೆ ಉತ್ತಮ ಜೊತೆಯಾಟ ಆಡಿದರು.
ನಂತರ ಬಂದ ಮನೀಶ್ ಪಾಂಡೆ 48 ಎಸೆತಗಳಲ್ಲಿ 53 ರನ್ ಗಳಿಸಿದರು. ಈ ಮೂವರ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಸಹಾಯದಿಂದ ಕರ್ನಾಟಕ 50 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 299 ರನ್ ಗಳಿಸಿತು.
ದಿಢೀರ್ ಕುಸಿದ ಚಂಡೀಗಢ
ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ ಚಂಡೀಗಢ ಒಂದು ಹಂತದಲ್ಲಿ ಸುಲಭ ಗೆಲುವಿನ ನಿರೀಕ್ಷೆಯಲ್ಲಿತ್ತು. ಮೊದಲ ವಿಕೆಟ್ಗೆ ಅಸ್ರ್ಲಾನ್ ಖಾನ್ ಮತ್ತು ನಾಯಕ ಮನನ್ ವೋಹ್ರಾ 108 ರನ್ ಕಲೆಹಾಕಿದ್ದರು. ಅಸ್ರ್ಲಾನ್ ಖಾನ್ 103 ಎಸೆತಗಳಲ್ಲಿ 102 ರನ್ ಗಳಿಸಿ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದ್ದರು, ಮನನ್ ವೋಹ್ರಾ 34 ರನ್ ಗಳಿಸಿ ಔಟಾದರು.
ಅಂಕಿತ್ ಕೌಶಿಕ್ 51 ರನ್ ಗಳಿಸಿ ಅಸ್ರ್ಲಾನ್ ಖಾನ್ಗೆ ಸಾಥ್ ನೀಡಿದರು. 39 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 210 ರನ್ ಗಳಿಸಿದ್ಧ ಚಂಡೀಗಢ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಕೊನೆಯ 10 ಓವರ್ ಗಳಲ್ಲಿ ಅತ್ಯುತ್ತಮ ಬೌಲಿಂಗ್ ಸಂಘಟಿಸಿದ ಕರ್ನಾಟಕ ಬೌಲಿಂಗ್ ಪಡೆ ಚಂಡೀಗಢವನ್ನು 277 ರನ್ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ 5ನೇ ಜಯವನ್ನು ತನ್ನದಾಗಿಸಿಕೊಂಡಿತು.
ಕರ್ನಾಟಕ ಮುಂದಿನ ಪಂದ್ಯವನ್ನು ಹರ್ಯಾಣ ವಿರುದ್ಧ ಆಡಲಿದೆ. ವಲ್ಲಭ ವಿದ್ಯಾನಗರದ ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ಡಿಸೆಂಬರ್ 3ರಂದು ಈ ಪಂದ್ಯ ನಡೆಯಲಿದೆ.
ಉಭಯ ತಂಡಗಳ ಆಡುವ ಬಳಗ
ಕರ್ನಾಟಕ : ಶರತ್ ಬಿಆರ್(ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಕೃಷ್ಣಪ್ಪ ಗೌತಮ್, ವಾಸುಕಿ ಕೌಶಿಕ್, ಮನೀಶ್ ಪಾಂಡೆ, ಮಯಾಂಕ್ ಅಗರ್ವಾಲ್(ನಾಯಕ), ನಿಕಿನ್ ಜೋಸ್, ರವಿಕುಮಾರ್ ಸಮರ್ಥ್, ಜಗದೀಶ ಸುಚಿತ್, ವಿಜಯ್ ಕುಮಾರ್ ವೈಶಾಕ್, ವಿಧ್ವತ್ ಕಾವೇರಪ್ಪ.
ಚಂಡೀಗಢ: ಅಂಕಿತ್ ಕೌಶಿಕ್, ಅರ್ಸ್ಲಾನ್ ಖಾನ್, ಭಾಗ್ಮೇಂದ್ರ ಲಾಥರ್, ಗೌರವ್ ಪುರಿ, ಕರಣ್ ಕೈಲಾ, ಮುರುಗನ್ ಅಶ್ವಿನ್, ಮನದೀಪ್ ಸಿಂಗ್, ಮನನ್ ವೋಹ್ರಾ (ನಾಯಕ), ಮಯಾಂಕ್ ಸಿಧು (ವಿಕೆಟ್ ಕೀಪರ್), ಸಂದೀಪ್ ಶರ್ಮಾ, ವಿಶು ಕಶ್ಯಪ್.












Click it and Unblock the Notifications