RCB: ಈ ಸಲ ಕಪ್ ನಮ್ದೇ ಎಂದು ರಜತ್ ಪಟಿದಾರ್ ನಾಯಕತ್ವ ಹೊಗಳಿದ ಇರ್ಫಾನ್ ಪಠಾಣ್
ಐಪಿಎಲ್ 2025ರ ಆವೃತ್ತಿಯ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (KKR) ವಿರುದ್ಧ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಸಾಕಷ್ಟು ಬಾರಿ ಮೊದಲ ಪಂದ್ಯದಲ್ಲೇ ಸೋತು ದೇವರಿಗೆ ಎನ್ನುವಂತೆ ಮಾಡುತ್ತಿದ್ದ ಆರ್ ಸಿಬಿ ಈ ಬಾರಿ ಮೊದಲ ಪಂದ್ಯ ಗೆದ್ದು ಅಭಿಮಾನಿ ದೇವರುಗಳಿಗೆ ಅರ್ಪಿಸಿದೆ.
ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಿದ ಬಳಿಕ ಈ ಬಾರಿ ಆರ್ ಸಿಬಿ ಪ್ಲೇಯಿಂಗ್ ಹೇಗಿರಲಿದೆ, ಬೌಲಿಂಗ್ ಯಾವ ರೀತಿ ಇರಲಿದೆ ಎನ್ನುವ ಕುತೂಹಲವಿತ್ತು. ನಿರೀಕ್ಷೆಗೆ ತಕ್ಕಂತೆ ಆಡಿದ ಆರ್ ಸಿಬಿ ಹಾಲಿ ಚಾಂಪಿಯನ್ನರನ್ನೇ ಸೋಲಿಸುವ ಮೂಲಕ ಶುಭಾರಂಭ ಮಾಡಿದೆ.

ರಜತ್ ನಾಯಕತ್ವಕ್ಕೆ ವ್ಯಾಪಕ ಮೆಚ್ಚುಗೆ
ರಜತ್ ಪಟಿದಾರ್ ನಾಯಕರಾಗಿ ಮೊದಲ ಪಂದ್ಯದಲ್ಲೇ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಅದರಲ್ಲೂ ಆರಂಭದಲ್ಲಿ ಒತ್ತಡಕ್ಕೆ ಒಳಗಾದರೂ ಬಳಿಕ ಸಾವರಿಸಿಕೊಂಡು ಎಲ್ಲವನ್ನೂ ಸಂಭಾಳಿಸಿದ ರೀತಿ, ಬೌಲಿಂಗ್ ಬದಲಾವಣೆ ಮಾಡಿದ್ದಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಭಾರತ ತಂಡದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ರಜತ್ ಪಟಿದಾರ್ ನಾಯಕತ್ವಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಜತ್ ಪಟಿದಾರ್ ಒತ್ತಡವನ್ನು ನಿಭಾಯಿಸಿದ ರೀತಿಯನ್ನು ಹಾಡಿ ಹೊಗಳಿದ ಇರ್ಫಾನ್ ಪಠಾಣ್, ತಂಡದ ಬೌಲರ್ ಗಳನ್ನು ಚನ್ನಾಗಿ ಬಳಸಿಕೊಂಡರು, ಮೊದಲ ಪಂದ್ಯದಲ್ಲೇ ಒತ್ತಡಕ್ಕೆ ಒಳಗಾಗದೇ ಬ್ಯಾಟಿಂಗ್ನಲ್ಲಿ ಕೂಡ ಮಿಂಚಿದರು ಎಂದರು.
ಈ ಸಲ ಕಪ್ ನಮ್ದೇ ಎಂದ ಇರ್ಫಾನ್ ಪಠಾಣ್
ಕೆಕೆಆರ್ ವಿರುದ್ಧ ಆರ್ ಸಿಬಿ ಆಡಿದ ರೀತಿಯನ್ನು ಇರ್ಫಾನ್ ಪಠಾಣ್ ಶ್ಲಾಘಿಸಿದ್ದಾರೆ. ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಉತ್ತಮವಾಗಿದೆ. ತಂಡದಲ್ಲಿ ಸಮತೋಲನವಿದ್ದು ಈ ಬಾರಿ ಬಲಿಷ್ಠ ತಂಡವಾಗಿ ಕಾಣಿಸುತ್ತಿದೆ. ಈ ಸಲ ಕಪ್ ನಮ್ದೇ ಎಂದು ಹೇಳುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.
ಕಾಮೆಂಟೆಟರ್ ಕೆಲಸದಿಂದ ವಜಾ
ಇರ್ಫಾನ್ ಪಠಾಣ್ ಅವರನ್ನು ಐಪಿಎಲ್ ಕಾಮೆಂಟೆಟರ್ ಕೆಲಸದಿಂದ ವಜಾ ಮಾಡಲಾಗಿದೆ. ಕ್ರಿಕೆಟಿಗರ ಬಗ್ಗೆ ವೈಯಕ್ತಿಕವಾಗಿ ಕಾಮೆಂಟ್ ಮಾಡಿದ್ದಾರೆ ಎನ್ನುವ ಆರೋಪವಿದ್ದ ಕಾರಣ ಅವರನ್ನು ಐಪಿಎಲ್ ಕಾಮೆಂಟೆಟರ್ ಪ್ಯಾನಲ್ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಲಾಯಿತು. ಬಳಿಕ ತಮ್ಮದೇ ಯೂಟ್ಯೂಬ್ ಚಾನೆಲ್ ಆರಂಭಿಸಿರುವ ಇರ್ಫಾನ್ ಪಠಾಣ್ ಐಪಿಎಲ್ ಪಂದ್ಯಗಳ ಬಗ್ಗೆ ತಮ್ಮ ಒಳನೋಟಗಳನ್ನು ಹಂಚಿಕೊಳ್ಳುತ್ತಿದ್ದಾರೆ.












Click it and Unblock the Notifications