IPL 2023: ಯಾವತ್ತಿಗೂ ಕ್ಷಮೆ ಕೇಳಬೇಡಿ: ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ಗೆ ರಿಕಿ ಪಾಂಟಿಂಗ್ ಹೇಳಿದ್ದೇನು?
ಐಪಿಎಲ್ 2023ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕಳಪೆ ಪ್ರದರ್ಶನ ನೀಡುವ ಮೂಲಕ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಶನಿವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 23 ರನ್ಗಳಿಂದ ಸೋಲನುಭವಿಸಿತು. ರಾಯಲ್ ಚಾಲೆಂಜರ್ಸ್ ವಿರುದ್ಧದ ಸೋಲನುಭವಿಸಿದ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಮಾತನಾಡಿದ ಕೋಚ್ ರಿಕಿ ಪಾಂಟಿಂಗ್ ತಂಡದ ಪ್ರಮುಖ ಬೌಲರ್ ಕುಲದೀಪ್ ಯಾದವ್ಗೆ ಕ್ಷಮೆ ಕೇಳಬೇಡಿ ಎಂದು ಹೇಳಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಸತತವಾಗಿ ಐದು ಸೋಲುಗಳನ್ನು ಕಂಡ ನಂತರವೂ ಮುಖ್ಯ ಕೋಚ್ ರಿಕಿ ಪಾಂಟಿಂಗ್ ತಂಡದ ನೈತಿಕತೆಯನ್ನು ಹೆಚ್ಚಿಸಲು ಧನಾತ್ಮಕವಾಗಿ ಮಾತನಾಡಿದ್ದಾರೆ. "ಉತ್ತಮವಾದ ಬೌಲಿಂಗ್ ಪ್ರದರ್ಶನ ನೀಡಿದಿರಿ, ಆರ್ ಸಿಬಿ ಮೊದಲೇ ನಮಗೆ ಸವಾಲು ಹಾಕಿತು, ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದರು. ಆದರೆ, ಉತ್ತಮವಾಗಿ ಬೌಲಿಂಗ್ ಮಾಡುವ ಮೂಲಕ ಅವರನ್ನು ಕಟ್ಟಿಹಾಕಿದೆವು" ಎಂದು ಹೇಳಿದರು.

"ಕುಲದೀಪ್ ಯಾದವ್, ನೀವು ಕೊನೆಯ ಪಂದ್ಯದಲ್ಲಿ ನೀಡಿದ ಪ್ರದರ್ಶನದಿಂದ ನಿರಾಶೆಗೊಂಡಿದ್ದೀರಿ ಅಲ್ಲವೇ? ಆಟದ ಬಳಿಕ ನನ್ನನ್ನು ಕ್ಷಮಿಸಿ ಎಂದು ಕೇಳಿದ್ದೀರಿ. ಆದರೆ, ಗೆಳೆಯಾ, ಕ್ರಿಕೆಟ್ ಮೈದಾನದಲ್ಲಿ ಏನು ಬೇಕಾದರೂ ಆಗಬಹುದು ಅದಕ್ಕಾಗಿ ನೀವು ನನಗೆ ಅಥವಾ ಯಾರ ಬಳಿಯಾದರೂ ಕ್ಷಮಿಸಿ ಎಂದು ಹೇಳಬೇಡಿ. ಈಗ ನಾವು ಮಾಡಬೇಕಾಗಿರುವುದು ಬಲವಾಗಿ ವಾಪಸಾತಿ ಮಾಡುವುದು. ಇಂದು ನೀವು 2 ವಿಕೆಟ್ ಪಡೆದುಕೊಂಡಿರಿ. ಅತ್ಯುತ್ತಮವಾಗಿ ಬೌಲಿಂಗ್ ಮಾಡಿದಿರಿ" ಎಂದು ಹೇಳಿದರು. ಇದೇ ಸಮಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಕೂಡ ಉಪಸ್ಥಿತರಿದ್ದರು.
ಉತ್ತಮ ಪ್ರದರ್ಶನ ನೀಡಿದ್ದ ಕುಲದೀಪ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕುಲದೀಪ್ ಯಾದವ್ ಉತ್ತಮ ಪ್ರದರ್ಶನ ನೀಡಿದ್ದರು. 4 ಓವರ್ ಗಳಲ್ಲಿ 23 ರನ್ ನೀಡಿ ಪ್ರಮುಖ ಎರಡು ಪಡೆದುಕೊಂಡಿದ್ದರು. ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ದಿನೇಶ್ ಕಾರ್ತಿಕ್ ಅವರ ವಿಕೆಟ್ ಪಡೆದು ಎದುರಾಳಿಗಳಿಗೆ ಆಘಾತ ನೀಡಿದ್ದರು. ಆದರೆ, ಇದಕ್ಕೂ ಮುನ್ನ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಎರಡು ಓವರ್ ಗಳಲ್ಲೇ 23 ರನ್ ನೀಡಿದ್ದರು.
ರಿಕಿ ಪಾಂಟಿಂಗ್ ಲಲಿತ್ ಯಾದವ್ ಅವರ ಬೌಲಿಂಗ್ ಬಗ್ಗೆ ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು. ಲಲಿತ್ ಯಾದವ್ 4 ಓವರ್ ಗಳಲ್ಲಿ 29 ರನ್ ನೀಡಿ ಒಂದು ವಿಕೆಟ್ ಪಡೆದುಕೊಂಡರು. 25 ರನ್ ನೀಡಿ ಒಂದು ವಿಕೆಟ್ ಪಡೆದ ಅಕ್ಷರ್ ಪಟೇಲ್ ಮತ್ತು 18 ರನ್ ನೀಡಿ 2 ವಿಕೆಟ್ ಪಡೆದ ಮಿಚೆಲ್ ಮಾರ್ಷ್ ಅವರನ್ನು ವಿಶೇಷವಾಗಿ ಶ್ಲಾಘಿಸಿದರು.

ಫೀಲ್ಡಿಂಗ್ನಲ್ಲಿ ಸುಧಾರಣೆಯಾಗಬೇಕು ಎಂದ ಪಾಂಟಿಂಗ್
ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರು ಫೀಲ್ಡಿಂಗ್ನಲ್ಲಿ ಸುಧಾರಣೆ ಕಾಣಬೇಕು ಎಂದು ಪಾಂಟಿಂಗ್ ಸಲಹೆ ನೀಡಿದರು. ತಂಡದ ಗ್ರೌಂಡ್ ಫೀಲ್ಡಿಂಗ್ ಅಷ್ಟೇನು ಉತ್ತಮವಾಗಿರಲಿಲ್ಲ, ಮನೀಷ್ ಪಾಂಡೆ ಕೂಡ ಕಠಿಣವಲ್ಲದ ಕ್ಯಾಚ್ ಅನ್ನು ಕೈಚೆಲ್ಲಿದರು. "ತಂಡದ ಫೀಲ್ಡಿಂಗ್ ಉತ್ತಮವಾಗಿತ್ತು, ಆದರೆ ಅದು ಶ್ರೇಷ್ಠವಾಗಿರಬೇಕು ಎಂದು ಬಯಸುತ್ತೇನೆ, ಅದಕ್ಕಾಗಿ ಉತ್ತಮ ಸಿದ್ಧತೆ ಬೇಕಾಗುತ್ತದೆ. ಎಲ್ಲರೂ ಕಷ್ಟಪಟ್ಟು ಕೆಲಸ ಮಾಡುತ್ತೀರಿ, ಅಂತಿಮವಾಗಿ ಫಲಿತಾಂಶ ಸಿಗಲಿದೆ" ಎಂದು ತಿಳಿಸಿದರು.
ಸದ್ಯ ಗೆಲುವಿನ ಹಳಿಗೆ ಮರಳಲು ಯತ್ನಿಸುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಮುಂದಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಏಪ್ರಿಲ್ 20ರಂದು ಗುರುವಾರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿರುವ ಕೆಕೆಆರ್ ಮತ್ತೆ ಗೆಲುವಿನ ಹಳಿಗೆ ಬರುವ ವಿಶ್ವಾಸದಲ್ಲಿದೆ.












Click it and Unblock the Notifications