ಭಾರತ-ಶ್ರೀಲಂಕಾ ಮೊದಲ ಏಕದಿನ ಪಂದ್ಯ; ಅರ್ಧ ದಿನದ ರಜೆ ನೀಡಿದ ಸರ್ಕಾರ
ಗುವಾಹಟಿ, ಜನವರಿ 09; ಭಾರತ-ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ ಕೈವಶ ಮಾಡಿಕೊಂಡಿದೆ. ಮಂಗಳವಾರದಿಂದ ಏಕದಿನ ಪಂದ್ಯಗಳು ಆರಂಭವಾಗಲಿದೆ. ಮೊದಲ ಪಂದ್ಯ ಅಸ್ಸಾಂನಲ್ಲಿ ನಡೆಯಲಿದೆ.
ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ ಮೊದಲ ಏಕದಿನ ಪಂದ್ಯ ಜನವರಿ 10ರ ಮಂಗಳವಾರ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ. ಅಸ್ಸಾಂ ಕ್ರಿಕೆಟ್ ಸಂಸ್ಥೆ ಮತ್ತು ರಾಜ್ಯ ಸರ್ಕಾರ ಪಂದ್ಯದ ಯಶಸ್ಸಿಗೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ.
ರಾಜ್ಯದ ಮುಖ್ಯಮಂತ್ರಿ ಹೇಮಂತ್ ಬಿಸ್ವಾ ಶರ್ಮಾ ಪಂದ್ಯ ನಡೆಯುವ ಬರ್ಸಾಪರಾ ಕ್ರೀಡಾಂಗಣಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುವಾಹಟಿಯ ಬರ್ಸಾಪುರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯವಿದಾಗಿದೆ.
ಭಾರತ-ಶ್ರೀಲಂಕಾ ನಡುವೆ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ಜನವರಿ 10ರಂದು ಅಸ್ಸಾಂನಲ್ಲಿ ನಡೆಯಲಿದ್ದು, ಜನವರಿ 12 ಮತ್ತು 15ರಂದು ಉಳಿದ ಪಂದ್ಯಗಳು ನಡೆಯಲಿವೆ.
ಟಿ20 ಸರಣಿಯಲ್ಲಿ ಭಾರತ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಿದ್ದರು. ಏಕದಿನ ತಂಡಕ್ಕೆ ರೋಹಿತ್ ಶರ್ಮಾ ನಾಯಕರು. ವಿರಾಟ್ ಕೊಹ್ಲಿ ಸಹ ಮಂಗಳವಾರ ಪಂದ್ಯ ಆಡಲಿದ್ದಾರೆ. ಸೂರ್ಯ ಕುಮಾರ್ ಯಾದವ್, ಕೊಹ್ಲಿ, ರೋಹಿತ್ ಶರ್ಮಾ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ಕ್ರಿಕೆಟ್ ಪ್ರಿಯರು ಕಾದು ಕುಳಿತಿದ್ದಾರೆ.

ಕಮ್ರೂಪ್ ಜಿಲ್ಲಾ ವ್ಯಾಪ್ತಿಯಲ್ಲಿ ರಜೆ
ಭಾರತ-ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯದ ರೋಚಕತೆ ಇನ್ನಷ್ಟು ಹೆಚ್ಚಿಸಲು ಅಸ್ಸಾಂ ಸರ್ಕಾರ ಅರ್ಧ ದಿನದ ರಜೆಯನ್ನು ಘೋಷಣೆ ಮಾಡಿದೆ. ಜನವರಿ 10ರಂದು ಬರ್ಸಾಪರಾ ಕ್ರೀಡಾಂಗಣ ಇರುವ ಕಮ್ರೂಪ್ ಜಿಲ್ಲಾ ವ್ಯಾಪ್ತಿಯಲ್ಲಿ ಮಾತ್ರ ಅರ್ಧ ದಿನದ ರಜೆ ನೀಡಿ ಆದೇಶ ಹೊರಡಿಸಲಾಗಿದೆ. ಮಧ್ಯಾಹ್ನ 1 ಗಂಟೆಯ ಬಳಿಕ ಶೈಕ್ಷಣಿಕ ಸಂಸ್ಥೆಗಳನ್ನು ಮುಚ್ಚಲಾಗುತ್ತದೆ.

ಕ್ರೀಡಾಂಗಣ ವೀಕ್ಷಣೆ ಮಾಡಿದ ಸಿಎಂ
ಜನವರಿ 7ರಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಬರ್ಸಾಪರಾ ಕ್ರೀಡಾಂಗಣವನ್ನು ಖುದ್ದು ಪರಿಶೀಲನೆ ನಡೆಸಿದರು. ಅಸ್ಸಾಂ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. 2018ರಲ್ಲಿ ಈ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯ ನಡೆದಿತ್ತು. ಮಂಗಳವಾರ 2ನೇ ಏಕದಿನ ಪಂದ್ಯ ಇಲ್ಲಿ ನಡೆಯುತ್ತಿದೆ.
ಕ್ರಿಕೆಟ್ ಪಂದ್ಯ ನೋಡಲು ಅಭಿಮಾನಿಗಳು ಸಹ ಕಾದು ಕುಳಿತಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬೃಹತ್ ಪೋಸ್ಟರ್ಗಳು ಎಲ್ಲಾ ಕಡೆ ಕಾಣಸಿಗುತ್ತಿವೆ. ಇಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದರು.

ಪೊಲೀಸರಿಂದಲೂ ಸಿದ್ಧತೆ
ಜನವರಿ 10ರಂದು ನಡೆಯುವ ಮೊದಲ ದಿನದ ಏಕದಿನ ಪಂದ್ಯಕ್ಕೆ ಅಸ್ಸಾ ಪೊಲೀಸರು ಸಹ ಅಗತ್ಯ ಕ್ರಮ ಕೈಗೊಂಡಿದ್ದಾರೆ. ನಗರದಲ್ಲಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಕ್ರಿಕೆಟ್ ವೀಕ್ಷಣೆ ಮಾಡಲು ಆಗಮಿಸುವ ಪ್ರೇಕ್ಷಕರ ವಾಹನಗಳ ನಿಲುಗಡೆಗೆ ಸಹ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಮೊದಲ ಏಕದಿನ ಪಂದ್ಯ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ. 1 ಗಂಟೆಗೆ ಟಾಸ್ ನಡೆಯಲಿದೆ. ಕ್ರೀಡಾಂಗಣಕ್ಕೆ ಬರಲು ಸಾಧ್ಯವಾಗದವರು ಟಿವಿಯಲ್ಲಿಯೂ ಪಂದ್ಯ ವೀಕ್ಷಣೆ ಮಾಡಬಹುದಾಗಿದೆ.

ಹೊಸ ವರ್ಷದಲ್ಲಿ ಮೊದಲ ಪಂದ್ಯ
ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮಾಗೆ ಇದು 2023ರ ಮೊದಲ ಏಕದಿನ ಪಂದ್ಯವಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ,ಜಸ್ಪ್ರೀತ್ ಬೂಮ್ರಾ ಸಹ ಈ ಪಂದ್ಯದ ಮೂಲಕ ಏಕದಿನ ಸರಣಿಗೆ ಮರಳುತ್ತಿದ್ದಾರೆ.
ಶ್ರೀಲಂಕಾ ತಂಡವನ್ನು ದಸುನ್ ಶನಕ ಮುನ್ನಡೆಸಲಿದ್ದಾರೆ. ಟಿ20 ಸರಣಿ ಸೋತಿರುವ ಶ್ರೀಲಂಕಾ ಪಡೆದ ಏಕದಿನ ಸರಣಿಯನ್ನು ಕೈ ವಶ ಮಾಡಿಕೊಳ್ಳುವ ಉತ್ಸಾಹದಲ್ಲಿದೆ.












Click it and Unblock the Notifications