'ಭಾರತ-ಪಾಕ್ ಕ್ರಿಕೆಟ್ ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧ': ರಾಮ್ದೇವ್
ನಾಗ್ಪುರ, ಅಕ್ಟೋಬರ್ 24: ಯೋಗ ಗುರು ಬಾಬಾ ರಾಮ್ದೇವ್ ಭಾರತ-ಪಾಕಿಸ್ತಾನ ನಡುವಿನ ವಿಶ್ವ ಟಿ20 ಪಂದ್ಯಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ. "ಭಾರತ-ಪಾಕಿಸ್ತಾನ ಟಿ 20 ಪಂದ್ಯವು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದುದ್ದು ಹಾಗೂ ರಾಷ್ಟ್ರಧರ್ಮಕ್ಕೆ ವಿರುದ್ಧವಾದುದ್ದು," ಎಂದು ಬಾಬಾ ರಾಮ್ದೇವ್ ಹೇಳಿದ್ದಾರೆ.
"ಕ್ರಿಕೆಟ್ ಎಂಬ ಆಟವನ್ನು ಹಾಗೂ ಭಯೋತ್ಪಾದನೆ ಆಟವನ್ನು ಒಂದೇ ಸಂದರ್ಭದಲ್ಲಿ ಆಡಲು ಸಾಧ್ಯವಿಲ್ಲ," ಎಂದು ಹೇಳಿರುವ ಯೋಗ ಗುರು ಬಾಬಾ ರಾಮ್ದೇವ್, ಪಾಕಿಸ್ತಾನ ಭಯೋತ್ಪಾದನೆಯ ಆಟವಾಡುತ್ತಿದೆ ಎಂದು ಪರೋಕ್ಷವಾಗಿ ಆರೋಪ ಮಾಡಿದ್ದಾರೆ. ನಾಗ್ಪುರ ವಿಮಾನ ನಿಲ್ದಾಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಯೋಗ ಗುರು ಬಾಬಾ ರಾಮ್ದೇವ್, "ಬಾಲಿವುಡ್ನಲ್ಲಿ ಕಂಡು ಬಂದಿರುವ ಡ್ರಗ್ ಚಟವು ದೇಶದ ಯುವ ಪೀಳಿಗೆಗೆ ಬಹಳ ಅಪಾಯಕಾರಿ," ಎಂದು ತಿಳಿಸಿದ್ದಾರೆ.
"ಈ ಡ್ರಗ್ ಚಟವನ್ನು ಈ ರೀತಿಯಾಗಿ ಗ್ಲಾಮರೈಸ್ ಮಾಡುವುದು ಹಾಗೂ ದೇಶದ ಜನರಿಗೆ ಆದರ್ಶ, ಐಕಾನ್ ಆಗಬೇಕಾದವರು ಈ ಡ್ರಗ್ ಚಟದ ವಿಚಾರದಲ್ಲಿ ಇರುವುದರ ಮೂಲಕ ದೇಶದ ಜನರಿಗೆ ತಪ್ಪು ಸ್ಪೂರ್ತಿಯನ್ನು ನೀಡುತ್ತಾರೆ. ಸಿನಿಮಾ ರಂಗವು ಈ ಎಲ್ಲಾ ಅಂಶಗಳನ್ನು ಸರಿಪಡಿಸಿಕೊಳ್ಳಬೇಕು," ಎಂದು ಯೋಗ ಗುರು ಬಾಬಾ ರಾಮ್ದೇವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಸಂದರ್ಭದಲ್ಲೇ ಮಾಧ್ಯಮಗಳು ಭಾನುವಾರ ನಡೆಯಲಿರುವ ಭಾರತ-ಪಾಕಿಸ್ತಾನ ಆಟದ ಬಗ್ಗೆ ಹಾಗೂ ದೇಶದ ಗಡಿಯಲ್ಲಿ ಇರುವ ಸಂಘರ್ಷಮಯ ಸ್ಥಿತಿಯ ಬಗ್ಗೆ ಬಾಬಾ ರಾಮ್ದೇವ್ ಅಭಿಪ್ರಾಯವನ್ನು ಕೇಳಿದ್ದಾರೆ. "ಈ ಸಂದರ್ಭದಲ್ಲಿ ಭಾರತ-ಪಾಕಿಸ್ತಾನ ಕ್ರಿಕೆಟ್ ಆಟವು ದೇಶ ಹಿತಾಸಕ್ತಿಗೆ ಹಾಗೂ ರಾಷ್ಟ್ರಧರ್ಮಕ್ಕೆ ವಿರುದ್ಧವಾದುದ್ದು ಎಂಬುವುದು ನನ್ನ ಭಾವನೆ. ಕ್ರಿಕೆಟ್ ಎಂಬ ಆಟವನ್ನು ಹಾಗೂ ಭಯೋತ್ಪಾದನೆ ಆಟವನ್ನು ಒಂದೇ ಸಮಯದಲ್ಲಿ ಆಡಲು ಸಾಧ್ಯವಿಲ್ಲ," ಎಂದಿದ್ದಾರೆ.
ಕಪ್ಪು ಹಣವನ್ನು ವಶಕ್ಕೆ ಪಡೆಯುವ ಮೂಲಕ ದೇಶದಲ್ಲಿ ಇಂಧನ ದರವನ್ನು ಕಡಿಮೆ ಮಾಡಬಹುದು ಎಂದು ಹೇಳಿರುವ ಬಾಬಾ ರಾಮ್ದೇವ್ ಹೇಳಿಕೆ ಬಗ್ಗೆ ಈ ಸಂದರ್ಭದಲ್ಲಿ ಮಾಧ್ಯಮಗಳು ಪ್ರಶ್ನಿಸಿದೆ. "ಪೆಟ್ರೋಲ್ ಬೆಲೆಯು ಕಚ್ಚಾ ತೈಲದ ಬೆಲೆಗೆ ಅನುಗುಣವಾಗಿರಬೇಕು ಹಾಗೂ ಕಡಿಮೆ ತೆರಿಗೆಯನ್ನು ವಿಧಿಸಲು ಸೂಚನೆ ನೀಡಿದ್ದೇನೆ," ಎಂದು ಹೇಳಿದರು.
"ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಸರ್ಕಾರವು ಕಲ್ಯಾಣ ಕಾರ್ಯಕ್ರಮಗಳನ್ನು ಮುಂದುವರಿಸಬೇಕು. ಹಾಗೆಯೇ ಸರ್ಕಾರವು ವಿವಿಧ ಆರ್ಥಿಕ ಸವಾಲುಗಳನ್ನು ಕೂಡಾ ನಿಭಾಯಿಸಬೇಕು. ಈ ಕೆಲವು ಆರ್ಥಿಕ ಸವಾಲುಗಳಿಂದಾಗಿ ಸರ್ಕಾರವು ತೆರಿಗೆಗಳನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ. ಆದರೂ ಒಂದು ದಿನ ಆ ಕನಸು ನನಸಾಗುತ್ತದೆ," ಎಂದು ಯೋಗ ಗುರು ಬಾಬಾ ರಾಮ್ದೇವ್ ಭರವಸೆ ವ್ಯಕ್ತಪಡಿಸಿದರು.
ಭಾರತ-ಪಾಕಿಸ್ತಾನ ಪಂದ್ಯಕ್ಕೆ ಓವೈಸಿ, ಕೇಂದ್ರ ಸಚಿವ ಗಿರಿರಾಜ್ ವಿರೋಧ
ಈ ಹಿಂದೆ ಅಖಿಲ ಭಾರತ ಮಜ್ಲಿಸ್-ಇ-ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡಾ ಈ ಭಾರತ-ಪಾಕಿಸ್ತಾನ ಟಿ 20 ಪಂದ್ಯಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು. "ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ನಮ್ಮ 9 ಯೋಧರು ಹುತಾತ್ಮರಾಗಿದ್ದಾರೆ, ಇಂಥ ಸಂದರ್ಭದಲ್ಲಿ ನೀವು ಪಾಕಿಸ್ತಾನದೊಂದಿಗೆ ಟಿ-20 ಪಂದ್ಯವನ್ನು ಆಡುತ್ತೀರಾ," ಎಂದು ಪ್ರಶ್ನೆ ಮಾಡಿದ್ದರು.
"ನಮ್ಮ ಭಾರತೀಯ ಯೋಧರು ಸತ್ತಿದ್ದಾರೆ. ನೀವು ಟಿ-20 ಪಂದ್ಯವನ್ನು ಆಡುತ್ತೀರಾ? ಪಾಕಿಸ್ತಾನವು ಭಾರತದ ಜನರ ಜೀವದೊಂದಿಗೆ ಕಾಶ್ಮೀರದಲ್ಲಿ ಪ್ರತಿದಿನ 20-20 ಪಂದ್ಯವನ್ನು ಆಡುತ್ತಿದೆ," ಎಂದು ಓವೈಸಿ ಕಿಡಿಕಾರಿದ್ದರು.
ಈ ನಡುವೆ ಐಸಿಸಿ ಪುರುಷರ ಟಿ-20 ವಿಶ್ವಕಪ್ 2021ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ರದ್ದುಗೊಳಿಸಬೇಕು ಎಂದು ಕೇಂದ್ರ ಸಚಿವರಾದ ಗಿರಿರಾಜ್ ಸಿಂಗ್ ಬೇಡಿಕೆ ಇಟ್ಟಿದ್ದರು. ಎರಡು ದೇಶಗಳ ನಡುವಿನ ಉದ್ವಿಗ್ನ ಸಂಬಂಧದಿಂದಾಗಿ ಈ ಪಂದ್ಯವನ್ನು ಮರುಪರಿಶೀಲಿಸಬೇಕು ಎಂದು ಮನವಿ ಮಾಡಿದ್ದರು. "ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಉತ್ತಮವಾಗಿಲ್ಲದ ಕಾರಣ ಪಂದ್ಯವನ್ನು ಮರುಪರಿಶೀಲಿಸಬೇಕು ಎಂದು ನಾನು ಭಾವಿಸುತ್ತೇನೆ" ಎಂದಿದ್ದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications