Ind vs Aus: ಮೈದಾನದಲ್ಲೇ ಕಿತ್ತಾಡಿಕೊಂಡಿದ್ದ ಸಿರಾಜ್, ಹೆಡ್ಗೆ ಐಸಿಸಿ ಶಾಕ್
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಟ್ರಾವಿಸ್ ಹೆಡ್ ಅಮೋಘ ಶತಕ ಸಿಡಿಸುವ ಮೂಲಕ ಆಸ್ಟ್ರೇಲಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತ ಆಸ್ಟ್ರೇಲಿಯಾ ನಡುವಿನ ಪಂದ್ಯವೆಂದರೆ ಅಲ್ಲಿ ಆಟಗಾರರ ಜಗಳ ಕೂಡ ಕಾಮನ್ ಆಗಿರುತ್ತದೆ. ಅಡಿಲೇಡ್ ಟೆಸ್ಟ್ನಲ್ಲಿ ಕೂಡ ಅದೇ ಆಗಿದ್ದು ಮೊಹಮ್ಮದ್ ಸಿರಾಜ್ ಮತ್ತು ಟ್ರಾವಿಸ್ ಹೆಡ್ ನಡುವೆ ಜಗಳವಾಗಿತ್ತು.
ಟ್ರಾವಿಸ್ ಹೆಡ್ 140 ರನ್ ಗಳಿಸಿದ ಬಳಿಕ ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ಬಳಿಕ ಸಿರಾಜ್ ಕಡೆ ತಿರುಗಿ ಏನೋ ಹೇಳಿದರು, ಅದಕ್ಕೆ ಸಿರಾಜ್ ಕೂಡ ಸಿಟ್ಟಿನಿಂದ ಹೊರಹೋಗು ಎನ್ನುವಂತೆ ಸನ್ನೆ ಮಾಡಿದರು. ಎರಡನೇ ದಿನದಾಟ ಮುಗಿದ ಬಳಿಕ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಟ್ರಾವಿಸ್ ಹೆಡ್, ನಾನು ಸಿರಾಜ್ಗೆ ಚನ್ನಾಗಿ ಬೌಲ್ ಮಾಡಿದೆ ಎಂದು ಪ್ರಶಂಸಿದಿರೂ ಆತ ಸಿಟ್ಟಿನಿಂದ ನನ್ನನ್ನು ನಿಂದಿಸಿದ ಎಂದು ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮೊಹಮ್ಮದ್ ಸಿರಾಜ್, ಟ್ರಾವಿಸ್ ಹೆಡ್ ಔಟಾದ ಬಳಿಕ ಉತ್ತಮವಾಗಿ ಬೌಲ್ ಮಾಡಿದೆ ಎಂದು ಹೇಳಲಿಲ್ಲ, ಕೆಟ್ಟದಾಗಿ ಏನನ್ನೋ ಹೇಳಿದರು ಅದಕ್ಕೆ ನನಗೆ ಕೋಪ ಬಂದು ನಾನು ಮಾತನಾಡಿದೆ ಎಂದು ಹೇಳಿದ್ದರು.
ಗಂಭೀರವಾಗಿ ಪರಿಗಣಿಸಿದ ಐಸಿಸಿ
ಮೈದಾನದಲ್ಲಿ ಸೌಜನ್ಯ ಮೀರಿ ವರ್ತಿಸಿದ್ದನ್ನು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗಂಭೀರವಾಗಿ ಪರಿಗಣಿಸಿದೆ. ಇಬ್ಬರಿಗೂ ದಂಡ ವಿಧಿಸಲು ಐಸಿಸಿ ಚಿಂತಿಸಿದ್ದು, ದುಬಾರಿ ದಂಡ ತೆರಬೇಕಾಗುತ್ತದೆ ಎಂದು ವರದಿಯಾಗಿದೆ. ಇಬ್ಬರಿಗೂ ಒಂದು ಪಂದ್ಯದಿಂದ ಅಮಾನತು ಅಥವಾ ಪಂದ್ಯದ ಶುಲ್ಕದ ಇಂತಿಷ್ಟು ಪ್ರಮಾಣವನ್ನು ದಂಡದ ರೂಪದಲ್ಲಿ ವಸೂಲಿ ಮಾಡುವ ಸಾಧ್ಯತೆ ಇದೆ.
ಒಂದು ಪಂದ್ಯದಿಂದ ಅಮಾನತು ಮಾಡುವ ಸಾಧ್ಯತೆ ಕಡಿಮೆ ಇದೆ ಎಂದು ವರದಿಯಾಗಿದೆ. ಆದರೆ ಇಬ್ಬರಿಗೂ ದಂಡ ವಿಧಿಸುವುದು ಬಹುತೇಕ ಖಚಿತವಾಗಿದೆ. ದಿ ಡೈಲಿ ಟೆಲಿಗ್ರಾಫ್ ವರದಿ ಮಾಡಿರುವ ಪ್ರಕಾರ, ಐಸಿಸಿ ಇಬ್ಬರನ್ನೂ ತಪ್ಪಿತಸ್ಥರೆಂದು ಪರಿಗಣಿಸಿದೆ, ಇಬ್ಬರನ್ನೂ ಶಿಸ್ತಿನ ವಿಚಾರಣೆ ನಡೆಸಿದ ಬಳಿಕ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವ ಸಾಧ್ಯತೆ ಇದೆ.
ಒಂದು ವೇಳೆ ಇಬ್ಬರ ಕೃತ್ಯವನ್ನು ಐಸಿಸಿ ಗಂಭೀರವಾಗಿ ಪರಿಗಣಿಸಿದರೆ ಒಂದು ಪಂದ್ಯದಿಂದ ಹೊರಗುಳಿಯುವ ಶಿಕ್ಷೆ ವಿಧಿಸುವ ಸಾಧ್ಯತೆ ಕೂಡ ಇದೆ. ಇಲ್ಲವೆಂದರೆ ದಂಡ ವಿಧಿಸಿ ಇಬ್ಬರಿಗೂ ಎಚ್ಚರಿಕೆ ನೀಡಬಹುದು.
ಡಿಸೆಂಬರ್ 14ರಂದು ಬ್ರಿಸ್ಬೇನ್ ಗಬ್ಬಾದಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪಲು ಎರಡೂ ತಂಡಗಳಿಗೆ ಮುಂದಿನ ಮೂರು ಟೆಸ್ಟ್ ಪಂದ್ಯಗಳನ್ನು ಗೆಲ್ಲುವುದು ಅನಿವಾರ್ಯವಾಗಿದೆ.












Click it and Unblock the Notifications