ಗುಜರಾತ್ ಚುನಾವಣೆಯಲ್ಲಿ ಪತ್ನಿಗೆ ಟಿಕೆಟ್, ಮೋದಿ, ಅಮಿತ್ ಶಾಗೆ ಧನ್ಯವಾದ ತಿಳಿಸಿದ ಜಡೇಜಾ
ಅಹ್ಮದಾಬಾದ್, ನವೆಂಬರ್ 10: ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾಗೆ ಬಿಜೆಪಿ ಟಿಕೆಟ್ ನೀಡಿದೆ. ಜಾಮ್ನಗರ ಉತ್ತರ ಕ್ಷೇತ್ರದಿಂದ ರಿವಾಬಾ ಸ್ಪರ್ಧಿಸಲಿದ್ದಾರೆ.
ಗಾಯದಿಂದ ಬಳಲುತ್ತಿದ್ದ ಜಡೇಜಾ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ತಪ್ಪಿಸಿಕೊಂಡಿದ್ದರು. ಗುರುವಾರ ಟ್ವಿಟ್ಟರ್ನಲ್ಲಿ ತಮ್ಮ ಪತ್ನಿಗೆ ಬಿಜೆಪಿ ಟಿಕೆಟ್ ಸಿಕ್ಕಿರುವ ವಿಚಾರವನ್ನು ಹಂಚಿಕೊಂಡಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹಸಚಿವ ಅಮಿತ್ ಶಾಗೆ ಧನ್ಯವಾದ ಅರ್ಪಿಸಿದ್ದಾರೆ.
''ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಪಡೆದುಕೊಂಡಿರುವ ನನ್ನ ಪತ್ನಿಗೆ ಅಭಿನಂದನೆಗಳು. ನಿನ್ನ ಕಠಿಣ ಪರಿಶ್ರಮಕ್ಕೆ ನಾನು ಹೆಮ್ಮೆ ಪಡುತ್ತೇನೆ. ಸಮಾಜದ ಅಭಿವೃದ್ಧಿಗೆ ತನ್ನ ಕೆಲಸವನ್ನು ಹೀಗೆ ಮುಂದುವರಿಸಲಿ ಎಂದು ಶುಭಕೋರುತ್ತೇನೆ. ಹಾಗೆಯೇ ನನ್ನ ಪತ್ನಿಯ ಕಾರ್ಯಕ್ಷಮತೆ ಹಾಗೂ ಸಾಮರ್ಥ್ಯವನ್ನು ಮೆಚ್ಚಿ ಈ ಅವಕಾಶವನ್ನು ನೀಡಿರುವ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾರವರಿಗೆ ಧನ್ಯವಾದ ತಿಳಿಸುತ್ತೇನೆ" ಎಂದು ರವೀಂದ್ರ ಜಡೇಜಾ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ತನ್ನ 160 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾರಿಗೂ ಟಿಕೆಟ್ ಘೋಷಣೆ ಮಾಡಿದೆ. ಜಾಮ್ನಗರ ಉತ್ತರ ಕ್ಷೇತ್ರದ ಹಾಲಿ ಶಾಸಕ ಧರ್ಮೇಂದ್ರಸಿನ್ಹಾ ಎಂ ಜಡೇಜಾರ ಬದಲಿಗೆ ರಿವಾಬಾರಿಗೆ ಟಿಕೆಟ್ ನೀಡಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಟಿಕೆಟ್ ಸಿಕ್ಕಿರುವ ಬಗ್ಗೆ ಪ್ರತಿಕ್ರಿಯಿಸಿರುವ ರಿವಾಬಾ, ಪಕ್ಷವು ನನ್ನ ಮೇಲೆ ನಂಬಿಕೆ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಅವರಿಗೆ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ, ಕ್ಷೇತ್ರದ ಪ್ರಗತಿ ಮತ್ತು ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ.
ರಿವಾಬಾ ಗುಜರಾತ್ನ ರಾಜ್ಕೋಟ್ನಲ್ಲಿರುವ ಆತ್ಮೀಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಸೈನ್ಸ್ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. 2016ರಲ್ಲಿ ಕ್ರಿಕೆಟರ್ ರವೀಂದ್ರ ಜಡೇಜಾರನ್ನು ವಿವಾಹವಾಗಿದ್ದರು. 2019ರಲ್ಲಿ ಬಿಜೆಪಿ ಸೇರಿದರು. ಇದೀಗ ರವೀಂದ್ರ ಜಡೇಜಾ ಅವರ ತವರೂರಾಗಿರುವ ಜಾಮ್ನಗರ ರಾಜಕೀಯ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

ಗುರುವಾರ ಬಿಜೆಪಿ 182ರ ಸದಸ್ಯರ ಬಲ ಹೊಂದಿರುವ ವಿಧಾನಸಭೆಯ 160 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ರಿವಾಬ ಜಡೇಜಾ ಅಲ್ಲದೆ, ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ್ದ ಹಾರ್ದಿಕ್ ಪಟೇಲ್ ಸೇರಿದಂತೆ ಕೆಲವು ಹೊಸ ಮುಖಗಳಿಗೆ ಬಿಜೆಪಿ ಮಣೆ ಹಾಕಿದೆ.
ವಿಶೇಷವೆಂದರೆ ಮಾಜಿ ಸಿಎಂ ವಿಜಯ್ ರೂಪಾನಿ, ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಮಾಜಿ ಮಂತ್ರಿಗಳಾದ ಭೂಪೇಂದ್ರ ಚುಡಾಸಮ, ಪ್ರದೀಪ್ ಸಿನ್ಹಾ ಜಡೇಜಾ, ಸೌರಭ್ ಕೌಶಿಕ್ ಪಟೇಲ್ ಸೇರಿದಂತೆ 38 ಹಾಲಿ ಶಾಸಕರಿಗೆ ಟಿಕೆಟ್ ನೀಡಿಲ್ಲ. ಇವರ್ಯಾರು ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆಯನ್ನು ಹೊಂದಿಲ್ಲ ಎಂದು ಪಕ್ಷದ ನಾಯಕರು ಮಾಹಿತಿ ನೀಡಿದ್ದಾರೆ.












Click it and Unblock the Notifications