ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಳ್ಳಲಿ, ಇಲ್ಲ ಸ್ಥಾನ ಬಿಟ್ಟುಕೊಡಲಿ
ಎಡ್ಜ್ಬಾಸ್ಟನ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಲ್ಕು ತಿಂಗಳ ನಂತರ ಭಾರತೀಯ ಟಿ20 ತಂಡಕ್ಕೆ ಮರಳಿದ್ದರು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟಕೊಳ್ಳಲಾಗಿತ್ತು.
ಆದರೆ ವಿರಾಟ್ ಕೊಹ್ಲಿ ಎಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ. ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದ ಕೊಹ್ಲಿ ಬ್ಯಾಟಿಂಗ್ ವೈಫಲ್ಯ ಮುಂದುವರೆಸಿದರು. ಶನಿವಾರದ ಪಂದ್ಯದಲ್ಲಿ ಮೂರು ಎಸೆತಗಳಲ್ಲಿ ಕೇವಲ ಒಂದು ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.
ವಿರಾಟ್ ಕೊಹ್ಲಿಗೆ ಆಡುವ ತಂಡದಲ್ಲಿ ಅವಕಾಶ ನೀಡಲು ಉತ್ತಮ ಪ್ರದರ್ಶನ ನೀಡುತ್ತಿದ್ದ ದೀಪಕ್ ಹೂಡಾ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು. ಐರ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ದೀಪಕ್ ಹೂಡಾ ಭರ್ಜರಿ ಶತಕ ಸಿಡಿಸಿದ್ದರು. ಆದರೆ ವಿರಾಟ್ ತಮ್ಮ ಆಯ್ಕೆಯ ನಿರ್ಣಯಕ್ಕೆ ನ್ಯಾಯ ಸಲ್ಲಿಸಲು ವಿಫಲರಾದರು.
ವಿರಾಟ್ ಕೊಹ್ಲಿ ಕಳಪೆ ಬ್ಯಾಟಿಂಗ್ ಬಗ್ಗೆ ಮಾಜಿ ಕ್ರಿಕೆಟ್ ಆಟಗಾರರು, ಅಭಿಮಾನಿಗಳು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟರ್ ದಿನೇಶ್ ಕನಾರಿಯಾ ಕೂಡ ವಿರಾಟ್ ಕೊಹ್ಲಿಗೆ ಎಚ್ಚರಿಕೆಯ ಮಾತೊಂದು ಹೇಳಿದ್ದಾರೆ.

ಫಾರ್ಮ್ ಕಂಡುಕೊಳ್ಳಿ ಇಲ್ಲ, ಸ್ಥಾನ ಬಿಟ್ಟುಕೊಡಿ
ಕೊಹ್ಲಿ ವೈಫಲ್ಯವನ್ನು ಟೀಕಿಸಿರುವ ಪಾಕಿಸ್ತಾನದ ಮಾಜಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ, 33 ವರ್ಷದ ಆಟಗಾರನಿಗೆ ಶೀಘ್ರದಲ್ಲೇ ಫಾರ್ಮ್ ಕಂಡುಕೊಳ್ಳಲು ಅಥವಾ ಇನ್ನೊಬ್ಬ ಆಟಗಾರನಿಗೆ ತನ್ನ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧರಾಗಿರಿ ಎಂದು ಎಚ್ಚರಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ, "ದೊಡ್ಡ ಆಟಗಾರರ ಅನುಪಸ್ಥಿತಿಯಲ್ಲಿ, ಭಾರತ ತಂಡವು ಪ್ರದರ್ಶನ ನೀಡುತ್ತಿದೆ, ಯುವಕರು ಉತ್ತಮವಾಗಿ ಆಡುತ್ತಿದ್ದಾರೆ, ದೊಡ್ಡ ಆಟಗಾರರ ವೈಫಲ್ಯ ತಂಡಕ್ಕೆ ಸಮಸ್ಯೆಯಾಗುತ್ತಿದೆ ಎಂದು ಅರ್ಥಮಾಡಿಕೊಳ್ಳಬೇಕು. ವಿರಾಟ್ ಕೊಹ್ಲಿ ಇದೀಗ ಹೊಣೆಗಾರಿಕೆ ಅರಿತುಕೊಳ್ಳಬೇಕು. ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಫಾರ್ಮ್ ಕಂಡುಕೊಳ್ಳಿ ಇಲ್ಲ ತಮ್ಮ ಸ್ಥಾನವನ್ನು ಬೇರೆ ಆಟಗಾರನಿಗೆ ಬಿಟ್ಟುಕೊಡಬೇಕು" ಎಂದು ಹೇಳಿದರು.

ಕೊಹ್ಲಿ ಐಪಿಎಲ್ನಲ್ಲಿ ಆಡಬಾರದಿತ್ತು
ವಿರಾಟ್ ಕೊಹ್ಲಿ ಈ ಬಾರಿ ಐಪಿಎಲ್ನಿಂದ ಹೊರಗುಳಿಯಬೇಕಾಗಿತ್ತು ಎಂದು ದಿನೇಶ್ ಕನೇರಿಯಾ ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್ನಲ್ಲೂ ವಿರಾಟ್ ಕೊಹ್ಲಿ ವಿಫಲರಾಗಿದ್ದರು. ಆ ಸಮಯದಲ್ಲಿ ವಿರಾಟ್ ಕ್ರಿಕೆಟ್ನಿಂದ ವಿಶ್ರಾಂತಿ ಪಡೆಯಬೇಕಿತ್ತು.
"ಕೊಹ್ಲಿ ಐಪಿಎಲ್ ಬಿಟ್ಟು ವಿಶ್ರಾಂತಿ ತೆಗೆದುಕೊಳ್ಳಬಹುದಿತ್ತು ಆದರೆ ಅವರು ಸಮಯವನ್ನು ವ್ಯರ್ಥ ಮಾಡಿದರು. ಈಗ ಟಿ20 ವಿಶ್ವಕಪ್ಗಾಗಿ ಭಾರತ ತಂಡ ಆಯ್ಕೆ ಮಾಡುವ ಸಮಯ. ಅವರು ತಂಡಕ್ಕೆ ಹೊರೆಯಾಗಿದ್ದಾರೆ. ಅದು ಭಾರತ ಅಥವಾ ಪಾಕಿಸ್ತಾನ ಯಾವ ತಂಡವಾಗಿದೆ ಎಂಬುದು ಮುಖ್ಯವಲ್ಲ. ಅವರು ದೊಡ್ಡ ಹೆಸರುಗಳಿಲ್ಲದೇ ಆಡಿದರೆ, ತಂಡಗಳು ಉತ್ತಮ ಪ್ರದರ್ಶನ ನೀಡುವುದಿಲ್ಲ" ಎಂದು ಕನೇರಿಯಾ ಹೇಳಿದರು.

ಕೊಹ್ಲಿ ಅನಿವಾರ್ಯಯಲ್ಲ ಎಂದಿದ್ದ ಕಪಿಲ್
ಈ ಹಿಂದೆ ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಕೂಡ ಟಿ20 ತಂಡಕ್ಕೆ ಕೊಹ್ಲಿ ಅನಿವಾರ್ಯವಲ್ಲ ಎಂದು ಹೇಳಿದ್ದಾರೆ. "ವಿರಾಟ್ ಅವರು ಹಲವಾರು ವರ್ಷಗಳಿಂದ ಬ್ಯಾಟಿಂಗ್ ಮಾಡುವುದನ್ನು ನಾವು ನೋಡಿದ ಮಟ್ಟದಲ್ಲಿ ಬ್ಯಾಟಿಂಗ್ ಮಾಡುತ್ತಿಲ್ಲ. ಅವರು ತಮ್ಮ ಪ್ರದರ್ಶನಗಳಿಂದ ಹೆಸರು ಮಾಡಿದ್ದಾರೆ ಆದರೆ ಅವರು ಪ್ರದರ್ಶನ ನೀಡದಿದ್ದರೆ, ನೀವು ಪ್ರದರ್ಶನ ನೀಡುವ ಆಟಗಾರರನ್ನು ತಂಡದಿಂದ ಹೊರಗಿಡಲು ಸಾಧ್ಯವಿಲ್ಲ." ಎಂದು ಹೇಳಿದ್ದರು.
"ಹೌದು, ಈಗ ನೀವು ಟಿ 20 ಆಡುವ ಹನ್ನೊಂದರಿಂದ ಕೊಹ್ಲಿಯನ್ನು ಕೈಬಿಡಲು ಒತ್ತಾಯಿಸಬಹುದು. ವಿಶ್ವದ ನಂ. 2 ಬೌಲರ್ ಅಶ್ವಿನ್ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಬಹುದಾದರೆ ವಿಶ್ವದ ನಂ. 1 ಬ್ಯಾಟರ್ನನ್ನೂ ಕೈಬಿಡಬಹುದು." ಎಂದು ಕಪಿಲ್ ಅಭಿಪ್ರಾಯಪಟ್ಟಿದ್ದರು.

ಬ್ಯಾಟಿಂಗ್ ಲಯ ಕಂಡುಕೊಳ್ಳಲು ಪರದಾಟ
ಎಲ್ಲಾ ಮಾದರಿ ಕ್ರಿಕೆಟ್ನಲ್ಲಿ ಅದ್ಭುತವಾಗಿ ಬ್ಯಾಟ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಐಪಿಎಲ್ನಲ್ಲೂ ಉತ್ತಮ ಪ್ರದರ್ಶನ ನೀಡುವಲ್ಲಿ ಕೊಹ್ಲಿ ವಿಫಲರಾಗಿದ್ದರು. ಇನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲೂ ಕೊಹ್ಲಿ ರನ್ ಗಳಿಸಲಿಲ್ಲ.
ಈಗ ಟಿ20 ವಿಶ್ವಕಪ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ 1 ರನ್ಗಳಿಸಿದ್ದಾಗ ರಿಚರ್ಡ್ ಗ್ಲೀಸನ್ ಬೌಲಿಂಗ್ನಲ್ಲಿ ಡೇವಿಡ್ ಮಲಾನ್ಗೆ ಕ್ಯಾಚ್ ನೀಡಿ ಔಟಾದರು.
ಕೊಹ್ಲಿ ಬ್ಯಾ ಟಿಂಗ್ ವೈಫಲ್ಯದ ನಡುವೆಯೂ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತು. 170 ರನ್ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಭಾರತದ ಬೌಲಿಂಗ್ ದಾಳಿಗೆ ಸಿಲುಕಿ 121 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ 49 ರನ್ಗಳ ಜಯ ಗಳಿಸುವುದರೊಂದಿಗೆ ಸರಣಿಯನ್ನು ಗೆದ್ದುಕೊಂಡಿದೆ.












Click it and Unblock the Notifications