ರೋಹಿತ್ ಫಾರ್ಮ್ ಬಗ್ಗೆ ಮಾತನಾಡದವರು ಕೊಹ್ಲಿ ಟೀಕಿಸುತ್ತಿದ್ದಾರೆ: ಸುನಿಲ್ ಗವಾಸ್ಕರ್
ಮುಂಬೈ, ಜುಲೈ 12; ಭಾರತದ ಮಾಜಿ ಕ್ರಿಕೆಟಿಗರಾದ ಕಪಿಲ್ ದೇವ್, ವೀರೇಂದ್ರ ಸೆಹ್ವಾಗ್ ಮತ್ತು ವೆಂಕಟೇಶ್ ಪ್ರಸಾದ್ ಅವರು ಭಾರತದ ಟಿ20 ತಂಡದಲ್ಲಿ ವಿರಾಟ್ ಕೊಹ್ಲಿಯ ಸ್ಥಾನವನ್ನು ಪ್ರಶ್ನಿಸಿದ ಸಮಯದಲ್ಲಿ, ಖ್ಯಾತ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ವಿರಾಟ್ ಕೊಹ್ಲಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮಂಗಳವಾರದಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ಲಯ ಕಂಡುಕೊಳ್ಳಲು ಉತ್ತಮ ಅವಕಾಶ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕ್ರಿಕೆಟಿಗರು ಆಗಾಗ್ಗೆ ವಿಶ್ರಾಂತಿ ಪಡೆಯಬೇಕು ಎನ್ನುವ ವಾದಕ್ಕೆ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಭಾರತ ತಂಡ ಟಿ20 ಕ್ರಿಕೆಟ್ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಅಳವಡಿಸಿಕೊಂಡಿದೆ. ಅದು ಸಾರ್ವಕಾಲಿಕವಾಗಿ ಯಶಸ್ವಿಯಾಗುವುದಿಲ್ಲ ಈಗ ಏಕದಿನ ಕ್ರಿಕೆಟ್ನಲ್ಲಿ ಯಶಸ್ವಿಯಾಗಲು ಕೊಹ್ಲಿಗೆ ಉತ್ತಮ ಅವಕಾಶವೂ ಇದೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟರು. ಏಕದಿನ ಪಂದ್ಯದಲ್ಲಿ ಕೊಹ್ಲಿ ತಮ್ಮ ಸಹಜ ಆಟವನ್ನು ಆಡಬಹುದು, ಬ್ಯಾಟಿಂಗ್ ಲಯಕ್ಕೆ ಮರಳಲು ಕಾಲವಕಾಶ ಸಿಗುತ್ತದೆ ಎಂದು ಹೇಳಿದರು.
ಫಾರ್ಮ್ ತಾತ್ಕಾಲಿಕ, ಕ್ಲಾಸ್ ಶಾಶ್ವತ
"ರೋಹಿತ್ ಶರ್ಮಾ ರನ್ ಗಳಿಸದಿದ್ದಾಗ ಯಾರೂ ಅದರ ಬಗ್ಗೆ ಮಾತನಾಡಲಿಲ್ಲ, ಮಾತನಾಡುವುದೂ ಇಲ್ಲ. ಇತರ ಆಟಗಾರರ ವಿಷಯದಲ್ಲೂ ಅದೇ ಮೌನ ಅನುಸರಿಸಿದ್ದರು. ಆದರೆ ವಿರಾಟ್ ಕೊಹ್ಲಿ ರನ್ ಗಳಿಸದಿದ್ದರೆ ಮಾತ್ರ ಎಲ್ಲರೂ ಮಾತನಾಡುತ್ತಿದ್ದಾರೆ" ಎಂದು ಕಿಡಿ ಕಾರಿದರು.
ಫಾರ್ಮ್ ತಾತ್ಕಾಲಿಕ, ಕ್ಲಾಸ್ ಶಾಶ್ವತ ಎನ್ನುವ ಮಾತಿದೆ. ಟಿ20 ಮಾದರಿ ಕ್ರಿಕೆಟ್ನಲ್ಲಿ ಆಕ್ರಮಣಕಾರಿ ಶೈಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಯಶಸ್ವಿಯಾಗುವುದು ಕೆಲವೊಮ್ಮೆ ವಿಫಲವಾಗುವುದು ಸಹಜ ಎಂದು ತಿಳಿಸಿದರು.
ಏಕದಿನ ಸರಣಿಯಲ್ಲಿ ರನ್ ಬರ ಕಳೆಯುತ್ತೆ
"ಏಕದಿನ ಸರಣಿ ಸರಿಯಾದ ಸಮಯಕ್ಕೆ ಬಂದಿದೆ ಎಂದು ನಾನು ಭಾವಿಸುತ್ತೇನೆ. ಇದು ವಿರಾಟ್ ಕೊಹ್ಲಿ ಸಹಜ ಆಟಕ್ಕೆ ಹೊಂದುತ್ತದೆ. ಟೆಸ್ಟ್ ಕ್ರಿಕೆಟ್ನಲ್ಲಂತೂ ನೆಲೆ ನಿಲ್ಲಲು ಸಾಕಷ್ಟು ಸಮಯವಿದೆ. ಏಕದಿನ ಕ್ರಿಕೆಟ್ನಲ್ಲೂ ಬ್ಯಾಟರ್ ಪರಿಸ್ಥಿತಿಗೆ ಅನುಗುಣವಾಗಿ ಆಡಬಹುದು" ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಟಿ20 ಸರಣಿಯಲ್ಲಿ ಆಕ್ರಮಣಕಾರಿ ಹೊಡೆತಕ್ಕೆ ಮುಂದಾಗಿ ವಿರಾಟ್ ಕೊಹ್ಲಿ ಔಟಾಗಿದ್ದನ್ನು ಉಲ್ಲೇಖಿಸಿ ಹೇಳಿಕೆ ನೀಡಿದ ಗವಾಸ್ಕರ್, ಏಕದಿನ ಮಾದರಿಯಲ್ಲಿ ಕೊಹ್ಲಿಗೆ ತಮ್ಮ ಲಯ ಕಂಡುಕೊಳ್ಳಲು ಸಾಕಷ್ಟು ಸಮಯ ದೊರೆಯುತ್ತದೆ ಎಂದರು.
ವಿಶ್ವಕಪ್ ತಂಡ ಆಯ್ಕೆಗೆ ಇನ್ನೂ ಸಮಯವಿದೆ
ಕೊಹ್ಲಿಯನ್ನು ಬೆಂಬಲಿಸಿದ ಗವಾಸ್ಕರ್, ಟಿ 20 ವಿಶ್ವಕಪ್ ತಂಡವನ್ನು ಪ್ರಕಟಿಸಲು ಸಾಕಷ್ಟು ಸಮಯವಿದೆ ಎಂದು ಹೇಳಿದರು. ಅಕ್ಟೋಬರ್-ನವೆಂಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಶೋಪೀಸ್ ಕಾರ್ಯಕ್ರಮಕ್ಕೂ ಮುನ್ನ ಫಾರ್ಮ್ಗೆ ಮರಳಲು ಕೊಹ್ಲಿಗೆ ಸಾಕಷ್ಟು ಅವಕಾಶಗಳು ಸಿಗಲಿವೆ ಎಂದರು.
"ನಾವು ಯೋಚಿಸುವ ಉತ್ತಮ ಆಯ್ಕೆ ಸಮಿತಿ ಹೊಂದಿದ್ದೇವೆ. ಟಿ20 ವಿಶ್ವಕಪ್ಗಾಗಿ ತಂಡವನ್ನು ಪ್ರಕಟಿಸಲು ಎರಡು ತಿಂಗಳಿಗಿಂತಾ ಹೆಚ್ಚಿನ ಸಮಯವಿದೆ. ಈ ಪಂದ್ಯಾವಳಿಯಲ್ಲಿ ಹಲವಾರು ಸ್ಪರ್ಧಾತ್ಮಕ ಏಷ್ಯಾದ ದೇಶಗಳು ಭಾಗವಹಿಸುತ್ತವೆ. ನೀವು ಆಟಗಾರನ ಅಂಕಿ-ಸಂಖ್ಯೆಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ತಂಡವನ್ನು ಆಯ್ಕೆ ಮಾಡಬೇಕಾಗುತ್ತದೆ. ಇನ್ನೂ ಭಯಪಡುವ ಅಗತ್ಯವಿಲ್ಲ ವಿರಾಟ್ ಕೊಹ್ಲಿಗೆ ಸ್ವಲ್ಪ ಸಮಯವನ್ನು ನೀಡಬೇಕಾಗಿದೆ" ಎಂದರು.
ಕೊಹ್ಲಿಗೆ ರೋಹಿತ್ ಶರ್ಮಾ ಬೆಂಬಲ
ತೊಡೆಸಂದು ನೋವಿನಿಂದಾಗಿ ಮಂಗಳವಾರ ಓವಲ್ನಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಿಂದ ವಿರಾಟ್ ಕೊಹ್ಲಿ ಹೊರಗುಳಿಯುವ ಸಾಧ್ಯತೆ ಇದೆ. ಆದರೆ ಆಟಕ್ಕೂ ಮೊದಲು ಅವರು ಬ್ಯಾಟಿಂಗ್ ಅಭ್ಯಾಸ ನಡೆಸಿದ್ದು, ತಂಡದಲ್ಲಿ ಸ್ಥಾನ ಪಡೆಯುವ ಬಗ್ಗೆ ಇನ್ನೂ ಗೊಂದಲವಿದೆ.
ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಕುರಿತ ಟೀಕೆಗಳಿಗೆ ಉತ್ತರ ನೀಡಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಹೊರಗಿನವರಿಗೆ ತಂಡದ ಒಳಗಿನ ವಿಚಾರಗಳು ಗೊತ್ತಿಲ್ಲ ಎಂದು ಪ್ರತ್ಯುತ್ತರ ನೀಡಿದ್ದರು.