Breaking: ಫುಟ್ಬಾಲ್ ಪ್ರೇಮಿಗಳಿಗೆ ಶುಭ ಸುದ್ದಿ: AIFF ಮೇಲಿನ ನಿಷೇಧ ರದ್ದು
ನವದೆಹಲಿ, ಆಗಸ್ಟ್ 26: ಭಾರತದ ಫುಟ್ಬಾಲ್ ಪ್ರೇಮಿಗಳಿಗೆ ಶುಕ್ರವಾರ ರಾತ್ರಿ ವೇಳೆಗೆ ಶುಭ ಸುದ್ದಿ ಸಿಕ್ಕಿದೆ. ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಮೇಲೆ ವಿಧಿಸಲಾಗಿದ್ದ ಅಮಾನತು ಆದೇಶವನ್ನು ಫೀಫಾ ಹಿಂಪಡೆದಿರುವುದಾಗಿ ಪ್ರಕಟಿಸಿದೆ. "ಮೂರನೇ ವ್ಯಕ್ತಿಗಳ(ರಾಜಕೀಯ ಹಸ್ತಕ್ಷೇಪ) ಅನುಚಿತ ಪ್ರಭಾವದಿಂದಾಗಿ' ಭಾರತೀಯ ಫುಟ್ಬಾಲ್ ಫೆಡರೇಷನ್(AIFF) ನಿಯಮ ಮೀರಿ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂಬ ಕಾರಣಕ್ಕೆ AIFF ತನ್ನ ಎಲ್ಲಾ ಪಂದ್ಯಗಳ ಆಯೋಜನೆ, ಚಟುವಟಿಕೆಗಳನ್ನು ನಿಲ್ಲಿಸುವಂತೆ ಇಂಟರ್ನ್ಯಾಷನಲ್ ಫೆಡರೇಷನ್ ಆಫ್ ಅಸೋಸಿಯೇಶನ್ ಫುಟ್ಬಾಲ್(FIFA) ಸೂಚಿಸಿತ್ತು. ನಂತರ ಪ್ರಕರಣ ಸುಪ್ರೀಂಕೋರ್ಟ್ ಅಂಗಳಕ್ಕೂ ಕಾಲಿಟ್ಟಿತ್ತು.
2020ರ ಡಿಸೆಂಬರ್ನಲ್ಲಿ ಚುನಾವಣೆಗಳನ್ನು ನಡೆಸದ ಕಾರಣಕ್ಕಾಗಿ ಮೇ 18 ರಂದು ಸುಪ್ರೀಂ ಕೋರ್ಟ್ ಎಐಎಫ್ಎಫ್ ಅಧ್ಯಕ್ಷರಾಗಿ ಪ್ರಫುಲ್ ಪಟೇಲ್ ಅವರನ್ನು ತೆಗೆದುಹಾಕಿತ್ತು. ಕ್ರೀಡೆಗೆ ಸಂಬಂಧಿಸಿದ ವ್ಯವಹಾರಗಳನ್ನು ನಿಯಂತ್ರಿಸಲು, 18 ತಿಂಗಳುಗಳಿಂದ ಬಾಕಿ ಉಳಿದಿರುವ ಚುನಾವಣೆಗಳನ್ನು ನಡೆಸಲು ಮೂರು ಸದಸ್ಯರ ಸಮಿತಿಯನ್ನು ನೇಮಿಸಲಾಯಿತು, ಜೊತೆಗೆ AIFFನ ನೀತಿ, ನಿಯಮ, ಕಟ್ಟಳೆಗಳನ್ನು ರದ್ದುಗೊಳಿಸಲಾಗಿತ್ತು.
ಈ ಸಂಪೂರ್ಣ ಪ್ರಕರಣದ ದೂರು ಸುಪ್ರೀಂ ಕೋರ್ಟ್ಗೆ ತಲುಪಿರುವುದು ಗಮನಾರ್ಹ. ನ್ಯಾಯಾಲಯವು ಮೇ 2022 ರಲ್ಲಿ ಸಂಪೂರ್ಣ ಮಂಡಳಿಯನ್ನು ರದ್ದುಗೊಳಿಸಿತು ಮತ್ತು ಹೊಸ ಸಂವಿಧಾನವನ್ನು ರೂಪಿಸಲು ಸಮಿತಿಯನ್ನು ರಚಿಸಿತು. ಈ ಹಿಂದೆ, ಆಡಳಿತಗಾರರ ಸಮಿತಿಯ (ಸಿಎ) ಅಧಿಕಾರಾವಧಿಯನ್ನು ಕೊನೆಗೊಳಿಸುವಂತೆ ಮತ್ತು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ನ ದೈನಂದಿನ ನಿರ್ವಹಣೆಯನ್ನು ಹಂಗಾಮಿ ಪ್ರಧಾನ ಕಾರ್ಯದರ್ಶಿ ನೇತೃತ್ವದ ಎಐಎಫ್ಎಫ್ ಆಡಳಿತವು ನೋಡಿಕೊಳ್ಳಬೇಕು ಎಂದು ಕೇಂದ್ರವು ಸುಪ್ರೀಂ ಕೋರ್ಟ್ಗೆ ಒತ್ತಾಯಿಸಿತ್ತು.
"ಎಐಎಫ್ಎಫ್ ಆಡಳಿತವು ತನ್ನ ದೈನಂದಿನ ವ್ಯವಹಾರಗಳ ಸಂಪೂರ್ಣ ನಿಯಂತ್ರಣವನ್ನು ಮರಳಿ ಪಡೆದ ನಂತರ ಅಮಾನತು ತೆಗೆದುಹಾಕಲಾಗುವುದು, ಕೋರ್ಟ್ ಆದೇಶದಂತೆ ಆಡಳಿತ ನಿರ್ವಾಹಕರ ಸಮಿತಿಯನ್ನು ರಚಿಸಿ ಎಐಎಫ್ಎಫ್ ಕಾರ್ಯಕಾರಿ ಅಧಿಕಾರವನ್ನು ವಹಿಸಿಕೊಳ್ಳಬೇಕಿದೆ" ಎಂದು ಫೀಫಾ ಹೇಳಿತ್ತು. ಅದರಂತೆ ಫೀಫಾ ಸೂಕ್ತ ಕ್ರಮ ಜರುಗಿಸಿದೆ.
ಅಮಾನತು ಆದೇಶ ಹಿಂಪಡೆದಿರುವುದರಿಂದ ಇದೇ ಮೊದಲ ಬಾರಿಗೆ ಭಾರತದಲ್ಲಿ ಆಯೋಜನೆಗೊಂಡಿದ್ದ ಫೀಫಾ ಅಂಡರ್ 17 ಮಹಿಳಾ ವಿಶ್ವಕಪ್ ಪಂದ್ಯಾವಳಿಯ ಸಿದ್ಧತೆ ಇನ್ನಷ್ಟು ತೀವ್ರಗೊಳ್ಳಲಿದೆ. ಅಕ್ಟೋಬರ್ 11 ರಿಂದ 30, 2022ರ ತನಕ ಭಾರತದಲ್ಲಿ ಈ ಪ್ರಮುಖ ಪಂದ್ಯಾವಳಿ ನಿಗದಿಯಾಗಿದೆ.
ಎಐಎಫ್ಎಫ್ಗೆ ಫೀಫಾ ನಿಷೇಧ; ಭಾರತೀಯ ಫುಟ್ಬಾಲ್ಗೆ ಮರ್ಮಾಘಾತ
ಸುಪ್ರೀಂಕೋರ್ಟ್ ಆದೇಶದಂತೆ ಸೆಪ್ಟೆಂಬರ್ 15ರೊಳಗೆ ಚುನಾವಣೆ ನಡೆಸಲು ಮೊದಲು ನಿಶ್ಚಯಿಸಲಾಗಿತ್ತು. ಇದೀಗ ಸುಪ್ರೀಂಕೋರ್ಟ್ ಇನ್ನೊಂದು ವಾರ ಹೆಚ್ಚು ಕಾಲಾವಕಾಶ ನೀಡಿದೆ. ಎಐಎಫ್ಎಫ್ಗೆ ಸೇರಿದ 36 ರಾಜ್ಯಗಳ ಫುಟ್ಬಾಲ್ ಸಂಸ್ಥೆಗಳ ಪ್ರತಿನಿಧಿಗಳಿರುವ ಮತದಾರರ ಪಟ್ಟಿ ಸಿದ್ಧಪಡಿಸಲು ಸೂಚಿಸಲಾಗಿದೆ. ರಿಟರ್ನಿಂಗ್ ಆಫೀಸರ್ಗಳನ್ನು ನ್ಯಾಯಾಲಯವೇ ನೇಮಕ ಮಾಡಲಿದೆ.
ಭಾರತದ ಮಾಜಿ ಫುಟ್ಬಾಲ್ ಆಟಗಾರ ಮತ್ತು ಮಾಜಿ ನಾಯಕ ಬೈಚುಂಗ್ ಭುಟಿಯಾ ಕೂಡ ಸುಪ್ರೀಂ ಕೋರ್ಟ್ ನೇಮಿತ ಸಿಇಎ ಅನಿಸಿಕೆಗೆ ಬೆಂಬಲ ನೀಡಿದ್ದರು. ಭಾರತ ಸ್ವಂತ ಬಲದಲ್ಲಿ ವಿಶ್ವಕಪ್ಗೆ ಅರ್ಹತೆ ಗಿಟ್ಟಿಸುವ ಮಟ್ಟಕ್ಕೆ ಬಲವಾಗಿ ಬೆಳೆಯುವುದು ಅಗತ್ಯ ಇದೆ. ಅದಕ್ಕಾಗಿ ಈಗ ವಿಶ್ವಕಪ್ ಆಯೋಜನೆಯ ಅವಕಾಶ ಕೈತಪ್ಪಿದರೂ ಸಮಸ್ಯೆ ಇಲ್ಲ ಎಂದು ಭುಟಿಯಾ ಪ್ರತಿಕ್ರಿಯಿಸಿದ್ದರು.
ಫೀಫಾ ಎಂಬುದು ಫುಟ್ಬಾಲ್ನ ಜಾಗತಿಕ ಸಂಸ್ಥೆ. 200ಕ್ಕೂ ಹೆಚ್ಚು ದೇಶಗಳ ಫುಟ್ಬಾಲ್ ಸಂಸ್ಥೆಗಳು ಇದರ ಅಧೀನದಲ್ಲಿ ಇವೆ. ಎಐಎಫ್ಎಫ್ನ ಕಾರ್ಯಕಾರಿ ಸಮಿತಿಯಲ್ಲಿ ಗಣ್ಯ ಆಟಗಾರರ ಸಂಖ್ಯೆ ಶೇ. 50ರಷ್ಟು ಇರುವಂತೆ ಹೊಸ ಕರಡು ಸಂವಿಧಾನದಲ್ಲಿ ನಿಶ್ಚಯಿಸಲಾಯಿತು. ಇದಕ್ಕೆ ಫೀಫಾ ಆಕ್ಷೇಪ ವ್ಯಕ್ತಪಡಿಸಿತು. ಈ ಆಟಗಾರರ ಸಂಖ್ಯೆ ಶೇ. 25ಕ್ಕೆ ಸೀಮಿತವಾಗಿರಬೇಕು ಎಂದು ಪಟ್ಟು ಹಿಡಿಯಿತು. ಆದರೆ, ಕರಡು ಸಂವಿಧಾನದಲ್ಲಿದ್ದ ರೀತಿಯಲ್ಲೇ ಚುನಾವಣೆ ನಡೆಸಲು ಸುಪ್ರೀಂಕೋರ್ಟ್ ನಿರ್ಧರಿಸಿತು. ಇದು ಎಐಎಫ್ಎಫ್ ಅನ್ನೇ ಅಮಾನತು ಮಾಡಲು ಕಾರಣವಾಗಿತ್ತು.