ದಿನೇಶ್ ಕಾರ್ತಿಕ್ ಫಿನಿಶರ್ ಪಾತ್ರ ನಿರ್ವಹಿಸುತ್ತಿಲ್ಲ: ಚರ್ಚೆ ಹುಟ್ಟುಹಾಕಿದ ಕೆ. ಶ್ರೀಕಾಂತ್ ಹೇಳಿಕೆ
ದಿನೇಶ್ ಕಾರ್ತಿಕ್, ಕ್ರಿಕೆಟ್ ಬದುಕೇ ಅಂತ್ಯವಾಯಿತು ಎಂದುಕೊಂಡಾಗ ಆತನ ಛಲ, ಹಠದಿಂದ ಭಾರತ ತಂಡಕ್ಕೆ ಆಯ್ಕೆಯಾದ ಕಥೆಯೇ ಇತಿಹಾಸ. ನಂಬಿಕೆ, ಆತ್ಮವಿಶ್ವಾಸದಿಂದ 37ನೇ ವಯಸ್ಸಿನಲ್ಲಿ ಭಾರತ ತಂಡಕ್ಕೆ ಆಯ್ಕೆಯಾದ್ದು ಮಾತ್ರವಲ್ಲ ಅದ್ಭುತ ಪ್ರದರ್ಶನವನ್ನೂ ನೀಡುತ್ತಿದ್ದಾರೆ.
ಐಪಿಎಲ್ನಲ್ಲಿ ಆರ್ ಸಿಬಿ ಪರ ಆಡಿದ್ದ ದಿನೇಶ್ ಕಾರ್ತಿಕ್ ಬೆಸ್ಟ್ ಫಿನಿಶರ್ ಎನಿಸಿಕೊಂಡಿದ್ದರು. ಅಂತಿಮ ಓವರ್ ಗಳಲ್ಲಿ ಸ್ಫೋಟಕ ಆಟವಾಡುತ್ತಿದ್ದ ಡಿಕೆ ಏಕಾಂಗಿಯಾಗಿ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟರು.
Asia Cup 2022 ವೇಳಾಪಟ್ಟಿ ಪ್ರಕಟ: ಭಾರತ-ಪಾಕಿಸ್ತಾನ ಮುಖಾಮುಖಿಗೆ ಮುಹೂರ್ತ ಫಿಕ್ಸ್
ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಯ ಮೊದಲನೇ ಪಂದ್ಯದಲ್ಲೂ 19 ಎಸೆತಗಳಲ್ಲಿ 41 ರನ್ ಬಾರಿಸುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಆದರೆ ಭಾರತದ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ದಿನೇಶ್ ಕಾರ್ತಿಕ್ ಬಗ್ಗೆ ನೀಡಿರುವ ಹೇಳಿಕೆ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.
ಹೌದು, ದಿನೇಶ್ ಕಾರ್ತಿಕ್ ಟೀ ಇಂಡಿಯಾದ ಫಿನಿಶರ್ ಅಲ್ಲ ಎಂದು ಭಾರತದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಹೇಳಿಕೆ ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಹಾಗಿದ್ದರೆ ಫಿನಿಶರ್ ಯಾರು? ಎನ್ನುವ ಪ್ರಶ್ನೆಗೂ ಕೆ. ಶ್ರೀಕಾಂತ್ ಉತ್ತರ ನೀಡಿದ್ದಾರೆ.
ಶ್ರೀಕಾಂತ್ ಪ್ರಕಾರ ಫಿನಿಶರ್ ಎಂದರೆ
ದಿನೇಶ್ ಕಾರ್ತಿಕರ್ ಫಿನಿಶರ್ ಪಾತ್ರವನ್ನು ನಿರ್ವಹಿಸುತ್ತಿಲ್ಲ, ಅಂತಿಮವಾದ ನಾಲ್ಕು ಓವರ್ ಗಳಲ್ಲಿ ಸ್ಫೋಟಕ ಆಟವಾಡುವ ದಿನೇಶ್ ಕಾರ್ತಿಕ್ ಫಿನಿಶರ್ ಆಗುವುದಿಲ್ಲ ಎಂದು ಶ್ರೀಕಾಂತ್ ಹೇಳಿದ್ದಾರೆ. ಅಂತಿಮ ಓವರ್ ಗಳಲ್ಲಿ ಕ್ರೀಸಿಗೆ ಬಂದು ಪಂದ್ಯ ಗೆಲ್ಲಿಸುವುದಕ್ಕಿಂತ ಕೊನೆಯವರೆಗೂ ಬ್ಯಾಟಿಂಗ್ ಮಾಡಿ ಪಂದ್ಯವನ್ನು ಗೆಲ್ಲಿಸುವವರು ಫಿನಿಶರ್ ಎಂದಿದ್ದಾರೆ.
ನಿಮ್ಮ ಫಿನಿಶರ್ ವ್ಯಾಖ್ಯಾನವು ತಪ್ಪಾಗಿದೆ. ಹೌದು, ದಿನೇಶ್ ತುಂಬಾ ಚೆನ್ನಾಗಿ ಆಡುತ್ತಿದ್ದಾರೆ. ಅವರು ಐಪಿಎಲ್ ಮತ್ತು ಇಲ್ಲಿನ ಕೆಲವು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ ಅದು ಫಿನಿಶರ್ ಅಲ್ಲ!. 8 ನೇ ಅಥವಾ 9 ನೇ ಓವರ್ನಿಂದ ಆರಂಭಿಸಿ ಅಂತಿಮ ಓವರ್ ವರೆಗೆ ಬ್ಯಾಟ್ ಮಾಡಿ ಪಂದ್ಯ ಗೆಲ್ಲಿಸುವ ಆಟಗಾರನನ್ನು ಫಿನಿಶರ್ ಎನ್ನಬಹುದು ಎಂದು ಶ್ರೀಕಾಂತ್ ವ್ಯಾಖ್ಯಾನಿಸಿದ್ದಾರೆ.
ಟೀ ಇಂಡಿಯಾದ ಬೆಸ್ಟ್ ಫಿನಿಶರ್ ಯಾರು?
ದಿನೇಶ್ ಮಾಡುತ್ತಿರುವುದನ್ನು ಅಂತಿಮ ಸ್ಪರ್ಶ ಎನ್ನಬಹುದು. ಸೂರ್ಯಕುಮಾರ್ ಯಾದವ್ ಅವರನ್ನು ಶ್ರೀಕಾಂತ್ ಹೊಗಳಿದ್ದಾರೆ. ಇಂಗ್ಲೆಂಡಿನಲ್ಲಿ ಅವರು ಬಹುತೇಕ ಏಕಾಂಗಿಯಾಗಿ ಹೋರಾಟ ಮಾಡಿ ಪಂದ್ಯ ಗೆಲ್ಲಿಸಿಕೊಟ್ಟಿರುವುದನ್ನು ನಾವು ನೋಡಿದ್ದೇವೆ. ಅದು ಫಿನಿಶಿಂಗ್ ರೋಲ್. ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್ ಫಿನಿಶರ್ಸ್, ರೋಹಿತ್ ಶರ್ಮಾ 17 ನೇ ಓವರ್ನವರೆಗೂ ಆಡಬಹುದು" ಎಂದು ಶ್ರೀಕಾಂತ್ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರನೇ ಟ್ವೆಂಟಿ 20 ಸಮಯದಲ್ಲಿ ಹೇಳಿದ್ದಾರೆ.
"ನಿಜವಾದ ಫಿನಿಶರ್ 16-20 ಓವರ್ಗಳ ನಡುವೆ ಆಡುವುದಿಲ್ಲ. ಒಬ್ಬ ಫಿನಿಶರ್ ಎಂದರೆ 8 ಅಥವಾ 9 ನೇ ಓವರ್ನಿಂದ ಪಂದ್ಯವನ್ನು ತೆಗೆದುಕೊಂಡು ಅಂತಿಮವಾಗಿ 60 ಅಥವಾ ಅದಕ್ಕಿಂತ ಹೆಚ್ಚಿನ ರನ್ಗಳೊಂದಿಗೆ ಮುಗಿಸುವ ವ್ಯಕ್ತಿ. ದಿನೇಶ್ ಅವರ ಪಾತ್ರವನ್ನು ವ್ಯಾಖ್ಯಾನಿಸಲಾಗಿದೆ. ಅವರು ಅದ್ಭುತವಾಗಿ ಆಡುತ್ತಿದ್ದಾರೆ." ಎಂದು ಹೇಳಿದರು.
ವಿಶ್ವಕಪ್ನಲ್ಲಿ ಆಡುವ ನಿರೀಕ್ಷೆಯಲ್ಲಿ ದಿನೇಶ್ ಕಾರ್ತಿಕ್
ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪರವಾಗಿ ಆಡಬೇಕೆಂದು ದಿನೇಶ್ ಕಾರ್ತಿಕ್ ಇಂಗಿತ ವ್ಯಕ್ತಪಡಿಸಿದ್ದಾರೆ. 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆರಂಭಿಸಿದ ದಿನೇಶ್ ಕಾರ್ತಿಕ್, 2007 ರಲ್ಲಿ ಚೊಚ್ಚಲ ವಿಶ್ವ T20 ಮತ್ತು 2013 ರಲ್ಲಿ ICC ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡದ ಭಾಗವಾಗಿದ್ದರು.
"ಟಿ 20 ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ನೀಡುವುದು ಅಂತಿಮ ಗುರಿಯಾಗಿದೆ" ಎಂದು ದಿನೇಶ್ ಕಾರ್ತಿಕ್ ಬಿಸಿಸಿಐ ಟಿವಿಯಲ್ಲಿ ತಂಡದ ಸಹ ಆಟಗಾರ ರವಿಚಂದ್ರನ್ ಅಶ್ವಿನ್ಗೆ ತಿಳಿಸಿದರು.
ಉತ್ತಮ ಪ್ರದರ್ಶನದ ಬಗ್ಗೆ ಡಿಕೆ ಸಂತಸ
ಸದ್ಯ ಟೀಂ ಇಂಡಿಯಾ ನೀಡುತ್ತಿರುವ ಭರ್ಜರಿ ಪ್ರದರ್ಶನದ ಬಗ್ಗೆ ದಿನೇಶ್ ಕಾರ್ತಿಕ್ ಸಂತಸ ವ್ಯಕ್ತಪಡಿಸಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಸದ್ಯ ಆಡುತ್ತಿರುವ ತಂಡವನ್ನು ದಿನೇಶ್ ಕಾರ್ತಿಕ್ ಶ್ಲಾಘಿಸಿದ್ದಾರೆ.
"ಇದು ತುಂಬಾ ವಿಭಿನ್ನವಾದ ತಂಡ ಎಂದು ನಾನು ಭಾವಿಸುತ್ತೇನೆ ಮತ್ತು ನಾನು ಈ ಸೆಟ್ಅಪ್ ಅನ್ನು ಆನಂದಿಸುತ್ತಿದ್ದೇನೆ. ನಾಯಕ ಮತ್ತು ಕೋಚ್ ಸುತ್ತಲೂ ಒಂದು ದೊಡ್ಡ ರೀತಿಯ ಶಾಂತತೆಯಿದೆ, ಬಹಳಷ್ಟು ಕ್ರೆಡಿಟ್ ರೋಹಿತ್ ಶರ್ಮಾ ಅವರಿಗೆ ಸಲ್ಲಬೇಕು" ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.