Deepavali : ಬೆಂಗಳೂರಿನಲ್ಲಿ ಭಾರತ ತಂಡದ ಆಟಗಾರರ ದೀಪಾವಳಿ ಸಂಭ್ರಮ
ಬೆಂಗಳೂರು ಹುಡುಗ, ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ತಮ್ಮ ತಂಡದ ಆಟಗಾರರ ಜೊತೆಗೂಡಿ ದೀಪಾವಳಿ ಹಬ್ಬ ಆಚರಣೆ ಮಾಡಿದ್ದಾರೆ. ಏಕದಿನ ವಿಶ್ವಕಪ್ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ನೆದರ್ಲ್ಯಾಂಡ್ಸ್ ಮುಖಾಮುಖಿಯಾಗಲಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಈ ಪಂದ್ಯ ನಡೆಯಲಿದೆ.
ವಿಶ್ವಕಪ್ ಪಂದ್ಯವನ್ನಾಡಲು ಬೆಂಗಳೂರಿಗೆ ಬಂದಿರುವ ಭಾರತ ತಂಡದ ಆಟಗಾರರು ಬೆಂಗಳೂರಿನಲ್ಲೇ ದೀಪಾವಳಿ ಆಚರಿಸಿ ಸಂಭ್ರಮಿಸಿದರು. ಇನ್ನು ಹಬ್ಬದ ದಿನವೇ ಪಂದ್ಯ ಇರುವ ಕಾರಣ, ಈ ಪಂದ್ಯವನ್ನು ಗೆದ್ದು ಅಜೇಯ ತಂಡವಾಗಿ ಸೆಮಿಫೈನಲ್ ಪಂದ್ಯಕ್ಕೆ ಸಜ್ಜಾಗುವ ವಿಶ್ವಾಸದಲ್ಲಿದೆ ಭಾರತ ತಂಡ.

ಕೆಎಲ್ ರಾಹುಲ್ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ, ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಜೊತೆಯಾಟಗಳಲ್ಲಿ ಭಾಗವಹಿಸುವ ಮೂಲಕ ತಂಡದ ಬ್ಯಾಟಿಂಗ್ ಬಲವನ್ನು ಹೆಚ್ಚಿಸಿದ್ದಾರೆ, ಬೆಂಗಳೂರಿನಲ್ಲಿ ಕೆಎಲ್ ರಾಹುಲ್ ದೊಡ್ಡ ಮೊತ್ತ ಗಳಿಸಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಶುಭಾಶಯ ತಿಳಿಸಿದ ಆಟಗಾರರು
ಭಾರತ ತಂಡದ ಆಟಗಾರರ ಜೊತೆ ದೀಪಾವಳಿ ಆಚರಿಸಿದ ಫೋಟೊ ಹಂಚಿಕೊಂಡಿರುವ ಕೆಎಲ್ ರಾಹುಲ್, ಅಭಿಮಾನಿಗಳಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. 'ನಮ್ಮಿಂದ ನಿಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು' ಎಂದು ಎಕ್ಸ್ ಖಾತೆಯಲ್ಲಿ ಫೋಟೊ ಜೊತೆ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ.
ಭಾರತ ತಂಡದ ಎಲ್ಲಾ ಆಟಗಾರರು ದೀಪಾವಳಿ ಸಂಭ್ರಮದಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ. ಎಲ್ಲಾ ಆಟಗಾರರು ಸಂಪ್ರದಾಯಿಕ ಬಟ್ಟೆಗಳನ್ನು ತೊಡುವ ಮೂಲಕ ಹಬ್ಬದ ಆಚರಣೆಯಲ್ಲಿ ಭಾಗವಹಿಸಿದ್ದಾರೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮೊಹಮ್ಮದ್ ಶಮಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಬುಮ್ರಾ ಸೇರಿದಂತೆ ಹಲವರು ಸಂಭ್ರಮಾಚರಣೆಯಲ್ಲಿ ತೊಡಗಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ವಿರಾಟ್ ಕೊಹ್ಲಿ ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಭಾನುವಾರ ಮಧ್ಯಾಹ್ನ 2 ಗಂಟೆಗೆ ಭಾರತ - ನೆದರ್ಲ್ಯಾಂಡ್ಸ್ ನಡುವಿನ ಪಂದ್ಯ ಆರಂಭವಾಗಲಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 40,000 ಪ್ರೇಕ್ಷಕರು ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಆರ್ ಸಿಬಿ ಆಟಗಾರರಾದ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಅವರಿಗೆ ಈ ಪಿಚ್ ಬಗ್ಗೆ ಹೆಚ್ಚು ಪರಿಚಯ ಇದೆ. ಬೆಂಗಳೂರು ಹುಡುಗ ಕೆಎಲ್ ರಾಹುಲ್ ಕೂಡ ಉತ್ತಮ ರನ್ ಗಳಿಸಲು ಕಾಯುತ್ತಿದ್ದಾರೆ.












Click it and Unblock the Notifications