ಭಾರತದಲ್ಲಿ ಆಕ್ಸಿಜನ್ ಕೊರತೆ: ಕ್ರಿಕೆಟಿಗ ಶೋಯೆಬ್ ಅಖ್ತರ್ ಮಾಡಿದ ಮನವಿ
ಲಾಹೋರ್, ಏಪ್ರಿಲ್ 27: ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಸದಾ ಸುದ್ದಿಯಲ್ಲಿರುವ ರಾವಲ್ಪಿಂಡಿ ಎಕ್ಸ್ ಪ್ರೆಸ್ ಎಂದೇ ಕರೆಯಲ್ಪಡುವ ಶೋಯೆಬ್ ಅಖ್ತರ್, ಕೊರೊನಾ ಎರಡನೇ ಅಲೆಯಿಂದ ತತ್ತರಿಸಿರುವ ಹೋಗಿರುವ ಭಾರತದ ಬಗ್ಗೆ ಮರುಗಿದ್ದಾರೆ.
ಪ್ರೇಕ್ಷಕರಿಲ್ಲದೇ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಟೂರ್ನಮೆಂಟ್ ಅನ್ನು ಈ ಕೂಡಲೇ ನಿಲ್ಲಿಸಬೇಕೆಂದು ಬಿಸಿಸಿಐಗೆ ಅಖ್ತರ್ ಮನವಿ ಮಾಡಿದ್ದಾರೆ. ಜೊತೆಗೆ, ಆ ದುಡ್ಡನ್ನು ಭಾರತ ಸರಕಾರಕ್ಕೆ ನೀಡಿ, ಆಕ್ಸಿಜನ್ ಖರೀದಿಸಲು ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.
ಬಿಸಿಸಿಐ ಜೊತೆ ಪಿಸಿಬಿಗೂ (ಪಾಕಿಸ್ತಾನ ಕ್ರಿಕೆಟ್ ಬೋರ್ಡ್) ಮನವಿ ಮಾಡಿರುವ ಅಖ್ತರ್, ಜೂನ್ ಒಂದರಿಂದ ಆರಂಭವಾಗಲಿರುವ ಪಾಕಿಸ್ತಾನ ಸೂಪರ್ ಲೀಗ್ ಪಂದ್ಯಾವಳಿಗಳನ್ನೂ ಮುಂದೂಡುವಂತೆ ಒತ್ತಾಯಿಸಿದ್ದಾರೆ.

"ದಿನವೊಂದಕ್ಕೆ ಮೂರು ಲಕ್ಷಕ್ಕೂ ಹೆಚ್ಚು ಕೋವಿಡ್ ಕೇಸುಗಳು ದಾಖಲಾಗುತ್ತವೆ. ಇಂತಹ ಸಮಯದಲ್ಲಿ ಆಡುವ ಕ್ರಿಕೆಟ್ ನಮಗೆ ಬೇಕಾಗಿಲ್ಲ. ಇದಕ್ಕೆ ವ್ಯಯಿಸಲಾಗುವ ದುಡ್ಡನ್ನು ಕೈಲಾಗದವರಿಗೆ ಕೊಟ್ಟು ಒಳ್ಳೆಯ ಕೆಲಸವನ್ನು ಮಾಡಿ" ಎಂದು ಶೋಯೆಬ್ ಅಖ್ತರ್ ಮನವಿ ಮಾಡಿದ್ದಾರೆ.
"ಭಾರತದಲ್ಲಿ ಬೆಡ್, ಆಕ್ಸಿಜನ್ ಕೊರತೆ ಕಾಡುತ್ತಿದೆ, ಇಂತಹ ಸಮಯದಲ್ಲಿ ಅಬ್ಬರದ ಐಪಿಎಲ್ ಬೇಕೇ" ಎಂದು ಪ್ರಶ್ನಿಸಿರುವ ಅಖ್ತರ್, ಪಾಕಿಸ್ತಾನದಲ್ಲೂ ಕೋವಿಡ್ ಕೇಸುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.
ಕೆಲವು ದಿನಗಳ ಹಿಂದೆ 'ಇಂಡಿಯಾ ನೀಡ್ಸ್ ಆಕ್ಸಿಜನ್' ಎನ್ನುವ ಟ್ವಿಟ್ಟರ್ ಹ್ಯಾಷ್ ಟ್ಯಾಗ್ ಪಾಕಿಸ್ತಾನದಲ್ಲಿ ಟ್ರೆಂಡಿಂಗ್ ಆಗಿತ್ತು. ಹಲವು ಪಾಕಿಸ್ತಾನದ ಸಂಸ್ಥೆಗಳು, ಭಾರತ ಸರಕಾರ ಅನುಮತಿ ನೀಡಿದರೆ, ಆಕ್ಸಿಜನ್ ಸಿಲಿಂಡರ್ ಕಳುಹಿಸಲು ನಾವು ಸಿದ್ದ, ಗಡಿ ಓಪನ್ ಮಾಡಿ ಎಂದಿದ್ದವು.












Click it and Unblock the Notifications