Sarfaraz Khan: ಅದ್ಭುತ ಪ್ರದರ್ಶನ ನೀಡಿದರು ಭಾರತ ತಂಡಕ್ಕೆ ಆಯ್ಕೆಯಾಗದ ಸರ್ಫರಾಜ್ ಖಾನ್: ಕಾರಣ ಇಲ್ಲಿದೆ
ಸರ್ಫರಾಜ್ ಖಾನ್, ದೇಶೀಯ ಕ್ರಿಕೆಟ್ನಲ್ಲಿ ರನ್ ಹೊಳೆಯನ್ನೇ ಹರಿಸಿದರೂ ಟೀಂ ಇಂಡಿಯಾದ ಬಾಗಿಲು ಅವರ ಪಾಲಿಗೆ ಇನ್ನೂ ಮುಚ್ಚಿದೆ. ರಣಜಿ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬಳಿಕ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಬೇಕು ಎನ್ನುವ ಕೂಗಿ ಕೇಳಿಬಂದಿತ್ತು, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಸೋತ ಬಳಿಕ, ಜುಲೈನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಸರ್ಫರಾಜ್ ಖಾನ್ ಅವರಿಗೆ ಅವಕಾಶ ಸಿಗುತ್ತೆ ಎಂದೇ ಭಾವಿಸಲಾಗಿತ್ತು, ಆದರೆ ಬಿಸಿಸಿಐ ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್ ಅವರಿಗೆ ಮಣೆ ಹಾಕಿದ್ದು, ಸರ್ಫರಾಜ್ ಖಾನ್ರನ್ನು ಕೈಬಿಟ್ಟಿದೆ.
ಸರ್ಫರಾಜ್ ಖಾನ್ರನ್ನಯ ಕೈಬಿಟ್ಟ ನಂತರ ಹಲವು ಮಾಜಿ ಕ್ರಿಕೆಟಿಗರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡುವುದಾದರೆ, ದೇಶೀಯ ಟೂರ್ನಿಗಳ ಅಗತ್ಯವೇನಿದೆ ಎಂದು ಪ್ರಶ್ನೆ ಮಾಡಿದ್ದರು.

ಎಲ್ಲಾ ಕಡೆಯಿಂದ ಆಕ್ರೋಶ ವ್ಯಕ್ತವಾದ ಬಳಿಕ ಬಿಸಿಸಿಐ ಅಧಿಕಾರಿಗಳು ಈಗ ಪ್ರತಿಕ್ರಿಯೆ ನೀಡಿದ್ದು, ಸರ್ಫರಾಜ್ ಖಾನ್ ಅವರನ್ನು ತಂಡಕ್ಕೆ ಆಯ್ಕೆ ಮಾಡದಿರಲು ಕಾರಣಗಳನ್ನು ನೀಡಿದ್ದಾರೆ. ಅಲ್ಲದೆ ತಮಗೂ ಸರ್ಫರಾಜ್ ಖಾನ್ ಅವರ ದಾಖಲೆಗಳ ಬಗ್ಗೆ ತಿಳಿದಿದೆ ಎಂದು ಟೀಕಾಕಾರರಿಗೆ ತಿರುಗೇಟು ಕೊಟ್ಟಿದ್ದಾರೆ.
ಈ ಕಾರಣಕ್ಕೆ ಅವರನ್ನು ಆಯ್ಕೆ ಮಾಡಿಲ್ಲ
ಸರ್ಫರಾಜ್ ಖಾನ್ ಅವರನ್ನು ಆಯ್ಕೆ ಮಾಡದಿರಲು ಮುಖ್ಯ ಕಾರಣ ಅವರ ಫಿಟ್ನೆಸ್ ಮತ್ತು ಮೈದಾನದ ಹೊರಗೆ ಅವರು ಶಿಸ್ತನ್ನು ಪಾಲಿಸದೇ ಇರುವುದು ಎಂದು ಹೇಳಿದ್ದು, 2023ರ ಐಪಿಎಲ್ನಲ್ಲಿ ಸರ್ಫರಾಜ್ ಖಾನ್ ನಿರೀಕ್ಷಿತ ಪ್ರದರ್ಶನ ನೀಡದೇ ಇರುವುದನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ. ಸರ್ಫರಾಜ್ ಖಾನ್ಗೆ ಈ ಬಗ್ಗೆ ಬಿಸಿಸಿಐ ಸೂಚನೆ ನೀಡಿದ್ದು ಫಿಟ್ನೆಸ್ ಮೇಲೆ ಕೆಲಸ ಮಾಡುವಂತೆ ಕೇಳಿದೆ.
ಸರ್ಫರಾಜ್ ಖಾನ್ ಶಾರ್ಟ್ ಬಾಲ್ ವಿರುದ್ಧ ಔಟಾಗುವ ದೌರ್ಬಲ್ಯ ಹೊಂದಿದ್ದು, ಅದೂ ಕೂಡ ಅವರನ್ನು ಆಯ್ಕೆ ಮಾಡದಿರಲು ಕಾರಣವಲ್ಲ. ಮೈದಾನದಲ್ಲಿ ಅವರ ಆಟದ ಬಗ್ಗೆ ಬಿಸಿಸಿಐಗೆ ಯಾವುದೇ ಅನುಮಾನ ಇಲ್ಲ. ಆದರೆ, ಸರ್ಫರಾಜ್ ಖಾನ್ ಅವರ ಫಿಟ್ನೆಸ್ ಮತ್ತು ಮೈದಾನದ ಹೊರಗೆ ಅವರ ಶಿಸ್ತಿನ ಬಗ್ಗೆ ಸಹಮತ ಹೊಂದಿಲ್ಲ.
ಬಿಸಿಸಿಐ ಆಯ್ಕೆದಾರರು ಮೂರ್ಖರಲ್ಲ
"ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಸತತವಾಗಿ 900ಕ್ಕೂ ಹೆಚ್ಚು ರನ್ ಗಳಿಸಿರುವ ಆಟಗಾರರನ್ನು ಆಯ್ಕೆ ಮಾಡದಿರಲು ಆಯ್ಕೆದಾರರು ಮೂರ್ಖರಲ್ಲ. ಸರ್ಫರಾಜ್ ಖಾನ್ರ ಫಿಟ್ನೆಸ್ ಅಂತಾರಾಷ್ಟ್ರೀಯ ಕ್ರಿಕೆಟ್ನ ಗುಣಮಟ್ಟದಲ್ಲಿ ಇಲ್ಲ. ಅವರು ಕಷ್ಟಪಡಬೇಕಾಗುತ್ತದೆ, ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು, ಫಿಟ್ ಆಗಬೇಕು, ನಂತರ ಅವರನ್ನು ಆಯ್ಕೆಗೆ ಪರಿಗಣಿಸಲಾಗುತ್ತದೆ" ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ಪಿಟಿಐ ವರದಿ ಮಾಡಿದೆ.
ಸರ್ಫರಾಜ್ ಖಾನ್ ಕಳೆದ ಮೂರು ರಣಜಿ ಋತುಗಳಲ್ಲಿ 2566 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ದಂತಕಥೆ ಸುನಿಲ್ ಗವಾಸ್ಕರ್ ಕೂಡ ಅವರನ್ನು ಹೊರಗಿಟ್ಟಿದ್ದಕ್ಕಾಗಿ ಆಯ್ಕೆಗಾರರನ್ನು ಟೀಕಿಸಿದ್ದರು. ಸರ್ಫರಾಜ್ 37 ಪ್ರಥಮ ದರ್ಜೆ ಪಂದ್ಯಗಳಲ್ಲಿ 79.65 ಸರಾಸರಿಯಲ್ಲಿ 2566 ಗಳಿಸಿದ್ದಾರೆ.
ಸರ್ಫರಾಜ್ ಖಾನ್ ಈ ವರ್ಷದ ಆರಂಭದಲ್ಲಿ ರಣಜಿ ಟ್ರೋಫಿ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಶತಕ ಗಳಿಸಿದ ನಂತರ ಸಂಭ್ರಮಾಚರಣೆ ಮಾಡಿದರು. ಹಿಂದಿನ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಅವರು ಸ್ಟ್ಯಾಂಡ್ನಿಂದ ಆಟವನ್ನು ವೀಕ್ಷಿಸುತ್ತಿದ್ದರು. ಸರ್ಫರಾಜ್ ಖಾನ್ ವ್ಯಂಗ್ಯವಾಡುವ ರೀತಿಯಲ್ಲಿ ಸಂಭ್ರಮಿಸಿದ್ದು ಹಲವರನ್ನು ಕೆರಳಿಸಿತ್ತು.
ಎಲ್ಲಾ ತಪ್ಪುಗಳನ್ನು ತಿದ್ದಿಕೊಂಡರೆ ಸರ್ಫರಾಜ್ ಖಾನ್ ಅವರು ಭಾರತ ತಂಡಕ್ಕೆ ಆಯ್ಕೆಯಾಗಲು ಅವಕಾಶ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಅವರು ತಮ್ಮ ಫಿಟ್ನೆಸ್ ಮೇಲೆ ಕೆಲಸ ಮಾಡಿದರೆ ಆಯ್ಕೆದಾರರು ಅವರನ್ನು ಪರಿಗಣಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications