ಭಾರತದ ವಿರುದ್ಧ ಸೋತ ಬಾಂಗ್ಲಾದೇಶ ಕೊಹ್ಲಿ ಮೇಲೆ ಮೋಸದಾಟದ ಆರೋಪ
ಅಡಿಲೇಡ್, ನವೆಂಬರ್ 3: ಭಾರತ ತಂಡ ಬುಧವಾರ ನಡೆದ ಪಂದ್ಯದಲ್ಲಿ 5 ರನ್ಗಳ ರೋಚಕ ಜಯ ಸಾಧಿಸಿ ಸೆಮಿಫೈನಲ್ಗೆ ಹತ್ತಿರವಾಗಿದೆ. ಇಡೀ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿ ಒಂದೆರಡು ಪಂದ್ಯಗಳ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಆದರೆ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಮೋಸದಾಟ ಆಡಿದ್ದಾರೆ ಎಂದು ಎದುರಾಳಿ ತಂಡದ ಬ್ಯಾಟರ್ ಆರೋಪಿಸಿರುವುದು ಚರ್ಚೆಗೆ ಗ್ರಾಸವಾಗುತ್ತಿದೆ.
ಬುಧವಾರ ನಡೆದ ಪಂದ್ಯದಲ್ಲಿ ಭಾರತ ತಂಡ 184 ರನ್ಗಳಿಸಿತ್ತು. ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 64 ರನ್ಗಳಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾಗಿದ್ದರು. ಈ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ ಒಂದು ಹಂತದಲ್ಲಿ 7 ಓವರ್ಗಳಲ್ಲಿ 66 ರನ್ಗಳಿಸಿ ಗೆಲುವಿನತ್ತ ತೆರಳುತ್ತಿದ್ದರು. ಆದರೆ ಮಳೆ ಬಂದಿದ್ದರಿಂದ 16 ಓವರ್ಗಳಲ್ಲಿ 151 ರನ್ಗಳ ಗುರಿ ನೀಡಲಾಗಿತ್ತು. ಆದರೆ ಬಾಂಗ್ಲಾದೇಶ 145 ರನ್ಗಳಿಸಿ 5 ರನ್ಗಳಿಂದ ಸೋಲು ಕಂಡಿತ್ತು.
ಕೊಹ್ಲಿ ಮೇಲೆ ಫೇಕ್ ಫೀಲ್ಡೀಂಗ್ ಆರೋಪ; ಪಂದ್ಯ ಮುಗಿಯುತ್ತಿದ್ಧಂತೆ ಮಾತನಾಡಿದ ಬಾಂಗ್ಲಾದೇಶದ ವಿಕೆಟ್ಕೀಪರ್-ಬ್ಯಾಟರ್ ನೂರುಲ್ ಹಸನ್ , ವಿರಾಟ್ ಕೊಹ್ಲಿ ನಕಲಿ ಫೀಲ್ಡಿಂಗ್ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಆನ್-ಫೀಲ್ಡ್ ಅಂಪೈರ್ಗಳ ಗಮನಕ್ಕೆ ಬರಲಿಲ್ಲ. ಹೀಗಾಗಿ ನಮಗೆ ಸಿಗಬೇಕಾಗಿದ್ದ ಐದು ಪೆನಾಲ್ಟಿ ರನ್ಗಳು ಕೂಡ ಸಿಗಲಿಲ್ಲ ಎಂದು ನೂರುಲ್ ಆರೋಪ ಮಾಡಿದ್ದಾರೆ.

16 ಓವರ್ಗಳಲ್ಲಿ 151 ರನ್ಗಳ ಪರಿಷ್ಕೃತ ಗುರಿಯನ್ನು ನೀಡಲಾಗಿತ್ತು.ಆದರೆ ನಾವು ಆಟವನ್ನು ಪುನರಾರಂಭಿಸಿದಾಗ ಔಟ್ಫೀಲ್ಡ್ ಒದ್ದೆಯಾಗಿತ್ತು, ಇದು ಪಂದ್ಯದ ಮೇಲೆ ಪ್ರಭಾವ ಬೀರಿತು. ಇದೇ ವೇಳೆ ಕೊಹ್ಲಿ ಫೇಕ್ ಫೀಲ್ಡಿಂಗ್ ಮಾಡಿದ್ದನ್ನು ಆನ್ ಫೀಲ್ಡ್ ಅಂಪೈರ್ಗಳ ಗಮನಿಸದಿದ್ದರಿಂದ ನಮಗೆ ಸಿಗಬೇಕಿದ್ದ ಐದು ಹೆಚ್ಚುವರಿ ರನ್ ಕೈತಪ್ಪಿದೆ. ನುರುಲ್ ಬೇಸರ ಹೊರ ಹಾಕಿದ್ದಾರೆ.
ಈ ಘಟನೆ ಚೇಸಿಂಗ್ ವೇಳೆ 7ನೇ ಓವರ್ನಲ್ಲಿ ನಡೆದಿತ್ತು. ಅರ್ಶ್ದೀಪ್ ಡೀಪ್ನಿಂದ ಚೆಂಡನ್ನು ಥ್ರೋ ಮಾಡಿದರು. ಈ ವೇಳೆ ಕೊಹ್ಲಿ ಚೆಂಡನ್ನು ಪಡೆದು ನಾನ್ಸ್ಟ್ರೈಕರ್ನತ್ತ ಥ್ರೋ ಮಾಡಿದಂತೆ ನಟಿಸಿದರು. ಆದರೆ ಚೆಂಡು ನೇರವಾಗಿ ಕೀಪರ್ಗೆ ಸೇರಿತ್ತು. ಕೊಹ್ಲಿ ಫೇಕ್ ಫೀಲ್ಡಿಂಗ್ ಮಾಡಿದ್ದು ಕ್ರೀಸ್ ನಲ್ಲಿದ್ದ ನಮ್ಮ ಬ್ಯಾಟರ್ಗಳಾದ ಲಿಟ್ಟನ್ ದಾಸ್ ಮತ್ತು ನಜ್ಮುಲ್ ಹೊಸೈನ್ ಶಾಂಟೊ ಗಮನಿಸಲಿಲ್ಲ ಎಂದಿದ್ದಾರೆ.
ಐಸಿಸಿ ನಿಯಮವೇನು?; ಐಸಿಸಿ ನಿಯಮದ ಪ್ರಕಾರ ನಿಯಮ 41.5, ಇದು ಅನ್ಯಾಯದ ಅಥವಾ ಮೋಸದ ಆಟಕ್ಕೆ ಸಂಬಂಧಿಸಿದೆ. ಯಾರಾದರೂ ನಿಯಮವನ್ನು ಉಲ್ಲಂಘಿಸಿದ್ದಾರೆಂದು ಅಂಪೈರ್ ಕಂಡುಕೊಂಡರೆ, ಅವರು ಅದನ್ನು ಡೆಡ್ ಬಾಲ್ ಎಂದು ಘೋಷಣೆ ಮಾಡಿ ಎದುರಾಳಿ ತಂಡಕ್ಕೆ ದಂಡವಾಗಿ 5 ರನ್ ಗಳನ್ನು ನೀಡಬಹುದು.

ಅಂಪೈರ್ಗಳ ವಿರುದ್ಧ ಬಿಸಿಬಿ ಗರಂ; ಮಳೆಯ ನಡುವೆ ಪಂದ್ಯವನ್ನು ತಡವಾಗಿ ಪುನಾರಂಭ ಮಾಡುವ ಬಾಂಗ್ಲದೇಶದ ನಾಯಕ ಶಕಿಬ್ ಅಲ್ ಹಸನ್ ಮನವಿಯನ್ನು ತಿರಸ್ಕರಿಸಿದ್ದಕ್ಕೆ ಹಾಗೂ ಕೊಹ್ಲಿ ನಕಲಿ ಕ್ಷೇತ್ರರಕ್ಷಣೆಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ್ದಕ್ಕೆ ಅಂಪೈರ್ ನಡೆಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದು, ಈ ವಿಷಯವನ್ನು ಐಸಿಸಿ ಮುಂದಿಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.












Click it and Unblock the Notifications