ನೊವಾಕ್ ಜೊಕೊವಿಕ್ ವೀಸಾ 2ನೇ ಬಾರಿಗೆ ರದ್ದುಗೊಳಿಸಿದ ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ಸರ್ಕಾರವು ಶುಕ್ರವಾರದಂದು ಟೆನಿಸ್ ತಾರೆ ನೊವಾಕ್ ಜೋಕೋವಿಕ್ ಅವರ ವೀಸಾವನ್ನು ಎರಡನೇ ಬಾರಿಗೆ ರದ್ದುಗೊಳಿಸಿದೆ. ಸೆರ್ಬಿಯಾದ ಟೆನಿಸ್ ಆಟಗಾರ ಜೋಕೋವಿಕ್ ಅವರು ಕೊವಿಡ್ 19 ಲಸಿಕೆ ಹಾಕಿಸಿಕೊಂಡಿಲ್ಲದ ಕಾರಣ ಅವರಿಂದ ಸಮುದಾಯಕ್ಕೆ ಅಪಾಯವನ್ನುಂಟು ಮಾಡಬಹುದು ಎಂದು ಕಾರಣ ನೀಡಲಾಗಿದೆ
ವಲಸೆ ಖಾತೆ ಸಚಿವ ಅಲೆಕ್ಸ್ ಹಾಕ್ ತನ್ನ ವಿವೇಚನಾ ಅಧಿಕಾರವನ್ನು ಬಳಸಿಕೊಂಡು ಜೋಕೋವಿಕ್ ಅವರ ವೀಸಾವನ್ನು ರದ್ದುಗೊಳಿಸಿದರು. ಕೆಲ ದಿನಗಳ ಹಿಂದೆ ನ್ಯಾಯಾಲಯವು ಅವರ ವೀಸಾದ ಹಿಂದಿನ ರದ್ದತಿಯನ್ನು ರದ್ದುಗೊಳಿಸಿತು ಮತ್ತು ಮೆಲ್ಬೋರ್ನ್ನಲ್ಲಿ ವಲಸೆ ಬಂಧನದಿಂದ ಬಿಡುಗಡೆ ಮಾಡಲು ಆದೇಶಿಸಿತ್ತು.
"ಇಂದು ನಾನು ವಲಸೆ ಕಾಯಿದೆಯ ಸೆಕ್ಷನ್ 133 ಸಿ (3) ಅಡಿಯಲ್ಲಿ ನನ್ನ ಅಧಿಕಾರವನ್ನು ಆರೋಗ್ಯ ಮತ್ತು ಉತ್ತಮ ಸುವ್ಯವಸ್ಥೆಯ ಆಧಾರದ ಮೇಲೆ ನೊವಾಕ್ ಜೋಕೋವಿಕ್ ಹೊಂದಿದ್ದ ವೀಸಾವನ್ನು ರದ್ದುಗೊಳಿಸಲು ಸಾರ್ವಜನಿಕ ಹಿತಾಸಕ್ತಿ ಆಧಾರದ ಮೇಲೆ ಕಾರ್ಯನಿರ್ವಹಿಸಿದ್ದೇನೆ" ಎಂದು ಸಚಿವರು ಅಧಿಕೃತ ಹೇಳಿಕೆ ನೀಡಿದ್ದಾರೆ.

ನೊವಾಕ್ ಜೋಕೋವಿಕ್ ಅವರ ವೀಸಾವನ್ನು ಮತ್ತೆ ತೆಗೆದುಹಾಕಿದ ನಂತರ ಈ ವಾರಾಂತ್ಯದಲ್ಲಿ ಅವರನ್ನು ಬಂಧಿಸುವುದಾಗಿ ಆಸ್ಟ್ರೇಲಿಯಾ ಶುಕ್ರವಾರ ಹೇಳಿದೆ. ಕಾನೂನು ಸಮರ ಮುಂದುವರೆಯುವ ತನಕ ನೊವಾಕ್ ಆಸ್ಟ್ರೇಲಿಯಾದಲ್ಲೇ ಇರಬೇಕಾಗುತ್ತದೆ ಎಂದು ಕಾನೂನು ತಜ್ಞರು ಹೇಳಿದ್ದಾರೆ. ವಿಚಾರಣೆ ಮುಗಿಯುವವರೆಗೆ 34 ವರ್ಷದ ಸೆರ್ಬಿಯಾದ ಟೆನಿಸ್ ತಾರೆಯನ್ನು ಗಡೀಪಾರು ಮಾಡದಿರಲು ಸರ್ಕಾರ ಒಪ್ಪಿಕೊಂಡಿದೆ ಎಂದು ಬ್ಯಾರಿಸ್ಟರ್ ಸ್ಟೀಫನ್ ಲಾಯ್ಡ್ ಫೆಡರಲ್ ಸರ್ಕ್ಯೂಟ್ ಕೋರ್ಟ್ನ ತುರ್ತು ತಡರಾತ್ರಿ ವಿಚಾರಣೆ ವೇಳೆ ತಿಳಿಸಿದರು.
ಆಸ್ಟ್ರೇಲಿಯಾದ ಸರ್ಕಾರವು ಹಟಕ್ಕೆ ಬಿದ್ದು ಈ ರೀತಿ ಕ್ರಮ ಜರುಗಿಸುತ್ತಿದೆ ಎಂದು ಟೆನಿಸ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಮ್ಮೆ ನ್ಯಾಯಾಲಯದಲ್ಲಿ ಸರ್ಕಾರ ಹಿನ್ನಡೆ ಅನುಭವಿಸಿದರೂ ಈ ಬಾರಿ ಸಾರ್ವಜನಿಕ ಹಿತಾಸಕ್ತಿಯ ಆಧಾರದ ಮೇಲೆ ಮತ್ತೊಮ್ಮೆ ತನ್ನ ವೀಸಾವನ್ನು ನೀಡದೆ ಸತಾಯಿಸಿ, ತನ್ನ ಅಸಾಮಾನ್ಯ ಕಾರ್ಯನಿರ್ವಾಹಕ ಅಧಿಕಾರವನ್ನು ಪ್ರಯೋಗಿಸಿದೆ.
ಜೋಕೋವಿಕ್ಗೆ 'ನೋ ಎಂಟ್ರಿ' ಏಕೆ?
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಮೆಂಟ್ ಜನವರಿ 17 ರಿಂದ ಜನವರಿ 30 ರವರೆಗೆ ನಡೆಯಲು ನಿರ್ಧರಿಸಲಾಗಿದೆ. ಸಂಪೂರ್ಣವಾಗಿ ಲಸಿಕೆ ಪಡೆದ ಆಟಗಾರರು ಅಥವಾ ಅಧಿಕೃತ ವೈದ್ಯಕೀಯ ವಿನಾಯಿತಿ ಹೊಂದಿರುವವರಿಗೆ ಮಾತ್ರ ಈ ಪಂದ್ಯಾವಳಿಯಲ್ಲಿ ಆಡಲು ಅವಕಾಶ ನೀಡಲಾಗುವುದು ಎಂದು ಸಂಘಟಕರು ಷರತ್ತು ವಿಧಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಕಟ್ಟುನಿಟ್ಟಾದ ಕೋವಿಡ್-ಸಂಬಂಧಿತ ಪ್ರವೇಶ ನಿಯಮಗಳನ್ನು ಜಾರಿಗೊಳಿಸಲಾಗಿದೆ. ದೇಶಕ್ಕೆ ಭೇಟಿ ನೀಡಲು ಬಯಸುವವರು ವೈರಸ್ ವಿರುದ್ಧ ಮಾನ್ಯತೆ ಪಡೆದ ಲಸಿಕೆ(ಫುಲ್ ಡೋಸ್)ಯನ್ನು ಹೊಂದಿರಬೇಕು ಎಂದು ಷರತ್ತು ವಿಧಿಸಿದೆ.
ಟೆನಿಸ್ ಆಸ್ಟ್ರೇಲಿಯಾದ ಮುಖ್ಯಸ್ಥ ಕ್ರೇಗ್ ಟೈಲೆ ಅವರ ಪ್ರಕಾರ, ಅಸಾಧಾರಣ ಸಂದರ್ಭಗಳಲ್ಲಿ ಕೆಲವು ವ್ಯಕ್ತಿಗಳು ದೇಶವನ್ನು ಪ್ರವೇಶಿಸಲು ಅವಕಾಶ ಮಾಡಿಕೊಡಲಾಗಿದೆ, ಉದಾಹರಣೆಗೆ ಕಳೆದ ಆರು ತಿಂಗಳಲ್ಲಿ ವೈರಸ್ನಿಂದ ಚೇತರಿಸಿಕೊಂಡವರು ಅಥವಾ ತೀವ್ರವಾದ ವೈದ್ಯಕೀಯ ಸ್ಥಿತಿಯನ್ನು ಹೊಂದಿದ್ದು, ಲಸಿಕೆ ಪಡೆಯಲು ಸಾಧ್ಯವಾಗದೆ ಇರುವವರು ಮುಂತಾದವರಿಗೆ ವಿನಾಯತಿ ನೀಡಲಾಗಿದೆ.
ಜೋಕೋವಿಕ್ ಅವರು ವೈದ್ಯಕೀಯ ಕಾರಣಗಳಿಗಾಗಿ ಲಸಿಕೆಯನ್ನು ಪಡೆದುಕೊಂಡಿಲ್ಲ ಎಂಬುದಕ್ಕೆ "ಸ್ವೀಕಾರಾರ್ಹ ಪುರಾವೆಗಳನ್ನು ಒದಗಿಸಬೇಕಾಗಿದೆ" ಎಂದು ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. "ಆ ಪುರಾವೆಗಳು ಸಾಕಷ್ಟಿಲ್ಲದಿದ್ದರೆ, ಆತ ಬೇರೆಯವರಿಗಿಂತ ಭಿನ್ನವಾಗಿ ಪರಿಗಣಿಸಲ್ಪಡುವುದಿಲ್ಲ ಮತ್ತು ಆತ ಮುಂದಿನ ವಿಮಾನದ ಮೂಲಕ ತನ್ನ ಮನೆಗೆ ಹೋಗುತ್ತಾನೆ" ಎಂದು ಮಾರಿಸನ್ ಹೇಳಿದರು.
ಈ ಮೊದಲು ಜೊಕೊವಿಕ್ಗೆ ವಿನಾಯಿತಿ ನೀಡಿ ಮೆಲ್ಬೋರ್ನ್ನಲ್ಲಿ ಪ್ರವೇಶಕ್ಕೆ ಅನುಮತಿ ನೀಡಲು ಮುಂದಾಗಿದ್ದ ಆಸ್ಟ್ರೇಲಿಯಾ ಸರ್ಕಾರದ ನಿರ್ಧಾರದ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಸಾಂಕ್ರಾಮಿಕ ರೋಗದ ಕಳೆದ ಎರಡು ವರ್ಷಗಳಲ್ಲಿ ವಿಶ್ವದಲ್ಲಿ ಅನೇಕ ಕಡೆ ಲಾಕ್ಡೌನ್ ಕ್ರಮಗಳನ್ನು ಜಾರಿಗೊಳಿಸಲಾಗಿತ್ತು. ಮತ್ತು ನಿರ್ದಿಷ್ಟವಾಗಿ ಮೆಲ್ಬೋರ್ನ್ನಲ್ಲಿ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಇಂದಿಗೂ ಪಾಲಿಸಿಕೊಂಡು ಬರಲಾಗುತ್ತಿದೆ.
20ಕ್ಕೂ ಅಧಿಕ ಪ್ರಮುಖ ಟೂರ್ನಮೆಂಟ್ ಗೆದ್ದಿರುವ ಜೋಕೋವಿಕ್ ಪರ ಸೆರ್ಬಿಯಾದ ಅಧ್ಯಕ್ಷ ಅಲೆಕ್ಸಾಂಡರ್ ವುಸಿಕ್ ಅವರು ಸ್ವಲ್ಪ ತಡವಾಗಿಯಾದರೂ ದನಿಯೆತ್ತಿದ್ದರು. "ನೊವಾಕ್ ಜೋಕೋವಿಕ್ ಅವರ ಕಿರುಕುಳವನ್ನು ತಕ್ಷಣವೇ ಅಂತ್ಯಗೊಳಿಸಲು ಸೆರ್ಬಿಯಾ ಎಲ್ಲ ರೀತಿ ಯತ್ನಿಸುತ್ತಿದೆ" ಎಂದು ವುಸಿಕ್ ಹೇಳಿದ್ದರು.(Reuters, AFP, dpa)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications