ಏಷ್ಯಾಕಪ್ 2022: ಗಾಯಗೊಂಡ ರವೀಂದ್ರ ಜಡೇಜಾ ಟೂರ್ನಿಯಿಂದ ಹೊರಕ್ಕೆ, ಅಕ್ಷರ್ ಪಟೇಲ್ಗೆ ಸ್ಥಾನ
ಭಾರತದ ಆಲ್ರೌಂಡರ್ ರವೀಂದ್ರ ಜಡೇಜಾ ಬಲ ಮೊಣಕಾಲಿನ ಗಾಯಕ್ಕೆ ಒಳಗಾಗಿರುವ ಏಷ್ಯಾಕಪ್ನ ಉಳಿದ ಪಂದ್ಯಗಳಿಗೆ ಹೊರಗುಳಿಯಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶುಕ್ರವಾರ ತಿಳಿಸಿದೆ.
ಜಡೇಜಾ ಪ್ರಸ್ತುತ ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ. ಪಂದ್ಯಾವಳಿಯ ಉಳಿದ ಪಂದ್ಯಗಳಿಗೆ ರವೀಂದ್ರ ಜಡೇಜಾ ಬದಲಿಗೆ ಅಕ್ಷರ್ ಪಟೇಲ್ ಸ್ಥಾನ ಪಡೆಯಲಿದ್ದಾರೆ ಎಂದು ಬಿಸಿಸಿಐ ಹೇಳಿದೆ. ಅಕ್ಷರ್ ಪಟೇಲ್ರನ್ನು ಈ ಹಿಂದೆ ತಂಡದಲ್ಲಿ ಸ್ಟ್ಯಾಂಡ್ಬೈ ಆಟಗಾರರೆಂದು ಹೆಸರಿಸಲಾಗಿತ್ತು. ಅಕ್ಷರ್ ಪಟೇಲ್ ಶೀಘ್ರದಲ್ಲೇ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ. ಜಡೇಜಾ ಗ್ರೂಪ್ ಹಂತದಲ್ಲಿ ಪಾಕಿಸ್ತಾನ ಮತ್ತು ಹಾಂಗ್ ಕಾಂಗ್ ವಿರುದ್ಧದ ಪಂದ್ಯಗಳಲ್ಲಿ ಆಡಿದ್ದರು.
ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ: ಗಾಯಗೊಂಡ ದಿನಗಳನ್ನು ನೆನಪಿಸಿಕೊಂಡ ಹಾರ್ದಿಕ್ ಪಾಂಡ್ಯ
"ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿಯು ರವೀಂದ್ರ ಜಡೇಜಾ ಬದಲಿಗೆ ಅಕ್ಸರ್ ಪಟೇಲ್ರನ್ನು ಏಷ್ಯಾ ಕಪ್ನಲ್ಲಿ ಹೆಸರಿಸಿದೆ. ರವೀಂದ್ರ ಜಡೇಜಾ ಬಲ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದಾರೆ ಮತ್ತು ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಜಡೇಜಾ ಪ್ರಸ್ತುತ ಬಿಸಿಸಿಐ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ. ಅವರ ಬದಲಿಗೆ ಅಕ್ಷರ್ ಪಟೇಲ್ರನ್ನು ತಂಡದಲ್ಲಿ ಸ್ಟ್ಯಾಂಡ್ಬೈ ಎಂದು ಹೆಸರಿಸಲಾಗಿತ್ತು ಮತ್ತು ಶೀಘ್ರದಲ್ಲೇ ದುಬೈನಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ" ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಮುಖ ಆಲ್ರೌಂಡರ್ ರವೀಂದ್ರ ಜಡೇಜಾ
ಪಾಕಿಸ್ತಾನದ ವಿರುದ್ಧ, ಜಡೇಜಾ 35 ರನ್ ಗಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬೌಲಿಂಗ್ನಲ್ಲಿ ರವೀಂದ್ರ ಜಡೇಜಾ ಯಾವುದೇ ವಿಕೆಟ್ ಪಡೆದಿರಲಿಲ್ಲ. ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಜಡೇಜಾ ಒಂದು ವಿಕೆಟ್ ಪಡೆದರು, ಬ್ಯಾಟಿಂಗ್ನಲ್ಲಿ ಅವಕಾಶ ಸಿಗಲಿಲ್ಲ. ಆದರೆ, ಫೀಲ್ಡಿಂಗ್ನಲ್ಲಿ ಮಿಂಚಿದ್ದ ಜಡೇಜಾ ಹಾಂಕಾಂಗ್ ಆಟಗಾರನನ್ನು ರನೌಟ್ ಮಾಡಿದ್ದರು.
ಬೌಲಿಂಗ್ನಲ್ಲಿ ಮಾತ್ರವಲ್ಲದೇ ಬ್ಯಾಟಿಂಗ್ನಲ್ಲೂ ಮಿಂಚುವ ಸಾಮರ್ಥ್ಯ ಹೊಂದಿರುವ ಜಡೇಜಾ ಅನುಪಸ್ಥಿತಿ ಮುಂದಿನ ಪಂದ್ಯಗಳಲ್ಲಿ ಭಾರತ ತಂಡಕ್ಕೆ ಕಾಡಲಿದೆ.
ಮುಂದಿನ ಪಂದ್ಯಗಳಲ್ಲಿ ಅವಕಾಶ ಯಾರಿಗೆ?
ಏಷ್ಯಾ ಕಪ್ನಲ್ಲಿ ಪ್ರತಿ ಪಂದ್ಯವೂ ಮಹತ್ವದ್ದಾಗಿರುತ್ತದೆ. ಆದ್ದರಿಂದ ರವೀಂದ್ರ ಜಡೇಜಾ ಗಾಯ ಭಾರತದ ಪಾಳಯಕ್ಕೆ ಕೊಂಚ ಆತಂಕ ಮೂಡಿಸಿದೆ. ಜಡೇಜಾ ಬದಲಾಗ ಅಕ್ಸರ್ ಪಟೇಲ್ ಸ್ಥಾನ ಪಡೆದಿದ್ದು, ಮುಂದಿನ ಪಂದ್ಯಗಳಲ್ಲಿ ಭಾರತ ಅಕ್ಸರ್ ಪಟೇಲ್ರನ್ನು ಕಣಕ್ಕಿಳಿಸುತ್ತಾರಾ ಇಲ್ಲ ಮತ್ತೊಬ್ಬ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ರಿಗೆ ಮಣೆ ಹಾಕುತ್ತಾರಾ ಎಂದು ನೋಡಬೇಕಿದೆ.
ಭಾರತ ತಂಡ ಸೆಪ್ಟೆಂಬರ್ 4 ರ ಭಾನುವಾರದ ಸೂಪರ್ 4 ಹಂತದ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಅಥವಾ ಹಾಂಗ್ ಕಾಂಗ್ ಅನ್ನು ಎದುರಿಸಲಿದೆ.
ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಜಡೇಜಾ ಗೈರು
ಈ ವರ್ಷದಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾಗೆ ಗಾಯದ ಸಮಸ್ಯೆ ಕಾಡುತ್ತಿರುವುದು ಇದೇ ಮೊದಲಲ್ಲ. ಇದೇ ವರ್ಷದ ಜುಲೈ ತಿಂಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪ್ರವಾಸದ ಸಂದರ್ಭದಲ್ಲಿ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದರು. ಗಾಯದ ಸಮಸ್ಯೆಯಿಂದ ವೆಸ್ಟ್ ಇಂಡೀಸ್ ವಿರುದ್ಧದ ಪ್ರವಾಸಕ್ಕೆ ಗೈರಾಗಿದ್ದರು.
ಅವರ ಬದಲಿಗೆ ಅಕ್ಸರ್ ಪಟೇಲ್ ಸ್ಥಾನ ಪಡೆದಿದ್ದರು. ಮೂರು ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿದಿದ್ದರು. ಅಕ್ಸರ್ ಪಟೇಲ್ 25 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು 147 ರನ್ ಗಳಿಸಿದ್ದಾರೆ, 21 ವಿಕೆಟ್ ಪಡೆದಿದ್ದಾರೆ.
ಟ್ವಿಟರ್ ನಲ್ಲಿ ಜಡೇಜಾ ಟ್ರೆಂಡಿಂಗ್
ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದ ಏಷ್ಯಾಕಪ್ ಟೂರ್ನಿಯಿಂದ ಹೊರಬೀಳುತ್ತಿದ್ದಂತೆ ಟ್ವಿಟರ್ ನಲ್ಲಿ ಇದೇ ವಿಚಾರ ಭಾರಿ ಟ್ರೆಂಡಿಂಗ್ ಆಗಿದೆ. ಜಡೇಜಾ ಗಾಯಗೊಂಡಿರುವುದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ತರೇವಾರಿ ಮೀಮ್ಗಳನ್ನು ಹಂಚಿಕೊಂಡರು.
ಏಷ್ಯಾಕಪ್ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್ ಮತ್ತು ಅವೇಶ್ ಖಾನ್