Abhishek Sharma: ಎಸ್ಆರ್ಎಚ್ ಸ್ಟಾರ್ ಆಟಗಾರ ಅಭಿಷೇಕ್ ಶರ್ಮಾನಿಂದ ಸಹೋದರಿಗೆ ಭಾವನಾತ್ಮಕ ಸಂದೇಶ
Abhishek Sharma: ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 31ನೇ ಪಂದ್ಯದಲ್ಲಿ ಎಸ್ಆರ್ಎಚ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 47 ರನ್ಗಳಿಂದ ಭರ್ಜರಿ ಜಯ ಸಾಧಿಸಿತು. ಈ ಗೆಲುವಿಗೆ ಪ್ರಮುಖ ಕಾರಣವಾಗಿದ್ದೇ ಅಭಿಷೇಕ್ ಶರ್ಮಾ ಸಿಡಿಸಿದ 135 ರನ್ಗಳು. ಪಂದ್ಯದ ನಂತರ ಅವರು ತನ್ನ ತಂಗಿಗೆ ಭಾವನಾತ್ಮಕ ಸಂದೇಶ ಸಂದೇಶ ಕಳುಹಿಸಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಓಪನರ್ ಅಭಿಷೇಕ್ ಶರ್ಮಾ ತಮ್ಮ ಜೀವನದ ಅತ್ಯಂತ ಸ್ಮರಣೀಯ ಇನ್ನಿಂಗ್ಸ್ ಆಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅಜೇಯ 135 ರನ್ ಸಿಡಿಸಿದ ಅವರು, ಈ ಅದ್ಭುತ ಪ್ರದರ್ಶನವನ್ನು ತಮ್ಮ ಸಹೋದರಿಗೆ ಅರ್ಪಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಬೌಲರ್ಗಳನ್ನ ಮನಬಂದಂತೆ ದಂಡಿಸಿದ ಅಭಿಷೇಕ್
ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರು ಡೆಲ್ಲಿ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 68 ಎಸೆತಗಳಲ್ಲಿ 10 ಬೌಂಡರಿ, 10 ಭರ್ಜರಿ ಸಿಕ್ಸರ್ಗಳ ನೆರವಿನಿಂದ ಅಜೇಯ 135 ರನ್ ಕಲೆಹಾಕಿದರು. ಇವರ ಈ ಬಿರುಗಾಳಿಯ ಆಟದ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ತಂಡ 20 ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 242 ರನ್ಗಳ ಬೃಹತ್ ಮೊತ್ತ ಪೇರಿಸಿತು. ಅಂತಿಮವಾಗಿ ಎಸ್ಆರ್ಎಚ್ ತಂಡ 47 ರನ್ಗಳ ಭರ್ಜರಿ ಜಯ ದಾಖಲಿಸಿತು.
ಸಹೋದರಿಗೆ ಭಾವನಾತ್ಮಕ ಸಂದೇಶ
ಪಂದ್ಯ ಮುಗಿದ ನಂತರ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಭಿಷೇಕ್ ಶರ್ಮಾ ಅವರು, "ನನ್ನ ಪೋಷಕರು ಇಂದು ಕ್ರೀಡಾಂಗಣದಲ್ಲಿ ಹಾಜರಿದ್ದಾರೆ, ಇದು ನನಗೆ ತುಂಬಾ ವಿಶೇಷ ಕ್ಷಣ. ಆದರೆ, ನನ್ನ ಸಹೋದರಿ ಇಲ್ಲಿಗೆ ಬರಲು ಸಾಧ್ಯವಾಗಲಿಲ್ಲ. ಆಕೆ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದು, ಅವರು ಬರಲು ಸಾಧ್ಯವಾಗಿಲ್ಲ. ಹಾಗಾಗಿ, ಈ ಇನ್ನಿಂಗ್ಸ್ ಮತ್ತು ಈ ಪ್ರಶಸ್ತಿ ನಿನಗಾಗಿ," ಎಂದು ಹೇಳುವ ಮೂಲಕ ತಮ್ಮ ತಂಗಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದರು.
ಅಭಿಷೇಕ್ ಯಶಸ್ಸಿನ ಹಿಂದಿನ ಹೀರೋ ಯಾರು?
ತಮ್ಮ ಯಶಸ್ಸಿನ ಹಿಂದೆ ತಂದೆಯ ಶ್ರಮ ದೊಡ್ಡದಿದೆ ಎಂದು ಸ್ಮರಿಸಿದ ಅವರು, "ನಾನು ಅಂಡರ್-12 ಆಡುತ್ತಿದ್ದಾಗಿನಿಂದಲೂ ನನ್ನ ತಂದೆ ಸ್ಕ್ರೀನ್ ಎದುರು ಕುಳಿತು ನನ್ನ ಆಟವನ್ನು ಗಮನಿಸುತ್ತಾರೆ. ನಾನು ನಾನ್-ಸ್ಟ್ರೈಕ್ನಲ್ಲಿದ್ದಾಗಲೂ ಅವರು ನನಗೆ ಸೂಚನೆಗಳನ್ನು ನೀಡುತ್ತಿರುತ್ತಾರೆ, ಅದು ನನಗೆ ಇಂದಿಗೂ ಸಹಾಯ ಮಾಡುತ್ತದೆ," ಎಂದು ಹೆಮ್ಮೆಯಿಂದ ಹೇಳಿದರು.
ಇನ್ನೂ ಅಭಿಷೇಕ್ ಅವರ ಈ ಶತಕದ ನೆರವಿನಿಂದ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಯುವ ಆಟಗಾರನ ಈ ಜವಾಬ್ದಾರಿಯುತ ಆಟ ಮತ್ತು ಕುಟುಂಬದ ಮೇಲಿರುವ ಗೌರವಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕ್ರೀಡಾಂಗಣದಲ್ಲಿ ಸಂಭ್ರಮಿಸಿದ ಅಭಿಷೇಕ್
ಸಾಮಾನ್ಯವಾಗಿ 'ಎಲ್' ಸನ್ನೆ ಮಾಡಿ ಹಾಗೂ ಕೈಕಟ್ಟಿ ಸಂಭ್ರಮಿಸುತ್ತಿದ್ದ ಅವರು ಈ ಬಾರಿ ಬದಲಾಗಲು ಕಾರಣವೇನು ಎಂಬ ಕುತೂಹಲ ಮೂಡಿತ್ತು. ಪಂದ್ಯದ ನಂತರ ಈ ಬಗ್ಗೆ ಮಾತನಾಡಿದ ಅವರು ಈ ಕುತೂಹಲಕ್ಕೆ ತೆರೆ ಎಳೆದರು. ತಂಡದ ಬ್ಯಾಟಿಂಗ್ ಕೋಚ್ ಜೇಮ್ಸ್ ಫ್ರಾಂಕ್ಲಿನ್ ಅವರು ಅಭಿಷೇಕ್ಗೆ ಒಂದು ವಿಶೇಷ ಜವಾಬ್ದಾರಿ ನೀಡಿದ್ದರು. ಅದು ಪಂದ್ಯದ ಕೊನೆಯವರೆಗೆ (20ನೇ ಓವರ್ವರೆಗೆ) ಕ್ರೀಸ್ನಲ್ಲಿ ಉಳಿಯುವುದು.
"ನಾನು 20ನೇ ಓವರ್ವರೆಗೆ ಕ್ರೀಸ್ನಲ್ಲಿ ಉಳಿದು ಬ್ಯಾಟ್ ಮಾಡಿದ್ದು ಬಹುಶಃ ಇದೇ ಮೊದಲು. ಕೋಚ್ ಫ್ರಾಂಕ್ಲಿನ್ ಅವರ ಪ್ಲಾನ್ ಪ್ರಕಾರ, ಪಂದ್ಯದ ಅಂತ್ಯದವರೆಗೂ ಅಜೇಯನಾಗಿ ಉಳಿದಿದ್ದಕ್ಕಾಗಿ ಈ ರೀತಿ ಕೈ ಜೋಡಿಸಿ ಸಂಭ್ರಮಿಸಿದೆ," ಎಂದು ಅಭಿಷೇಕ್ ರಿವೀಲ್ ಮಾಡಿದ್ದಾರೆ.












Click it and Unblock the Notifications