ಭಾರತ-ಸೌತ್ ಆಫ್ರಿಕಾ ಸರಣಿ: ಹೂಡಾ ಔಟ್; ಅಯ್ಯರ್, ಶಾಹಬಾಜ್, ಉಮೇಶ್ ಆಯ್ಕೆ
ನವದೆಹಲಿ, ಸೆ. 28: ಆಸ್ಟ್ರೇಲಿಯಾ ವಿರುದ್ಧದ ಸರಣಿ ಕ್ಲೀನ್ ಸ್ವೀಪ್ ಮಾಡಿದ ಖುಷಿಯಲ್ಲಿರುವ ಟೀಮ್ ಇಂಡಿಯಾ ಇವತ್ತಿನಿಂದ ಸೌತ್ ಆಫ್ರಿಕಾ ಸವಾಲನ್ನು ಎದುರಿಸುತ್ತಿದೆ. ಮೊದಲಿಗೆ ನಡೆಯಲಿರುವ ಟಿ20 ಸರಣಿಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗಿದೆ.
ಆಸ್ಟ್ರೇಲಿಯಾ ಸರಣಿಯಲ್ಲಿ ಆಡಿದ ತಂಡದಲ್ಲಿ ಈಗ ಕೆಲ ಬದಲಾವಣೆ ಮಾಡಲಾಗಿದೆ. ಶ್ರೇಯಸ್ ಅಯ್ಯರ್, ಶಹಬಾಜ್ ಅಹ್ಮದ್ ಮತ್ತು ಉಮೇಶ್ ಯಾದವ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಆಲ್ರೌಂಡರ್ ದೀಪಕ್ ಹೂಡಾ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದಾರೆ. ಅವರ ಬದಲು ಶ್ರೇಯಸ್ ಅಯ್ಯರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಇನ್ನು, ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ಕೂಡ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗಿದ್ದಾರೆ. ಅವರ ಸ್ಥಾನಕ್ಕೆ ಶಹಬಾಜ್ ಅಹ್ಮದ್ ಮತ್ತು ಉಮೇಶ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿದೆ.
ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ಈ ಮೂವರೂ ಕೂಡ ಬೆಂಗಳೂರಿನ ಎನ್ಸಿಎ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ದೀಪಕ್ ಹೂಡಾ ಟಿ20 ವಿಶ್ವಕಪ್ನ ಭಾರತ ತಂಡದಲ್ಲಿದ್ದಾರೆ. ಹೀಗಾಗಿ ಅವರ ಗಾಯದ ಸಮಸ್ಯೆ ಬಗ್ಗೆ ತಂಡ ಹೆಚ್ಚು ತಲೆ ಕೆಡಿಸಿಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ವೇಎ ಅವರಿಗೆ ಬ್ಯಾಕ್ ಇಂಜುರಿ ಆಗಿತ್ತು. ಸರಣಿಯ ಕೊನೆಯ ಪಂದ್ಯದಲ್ಲಿ ಅವರು ಆಡಿರಲಿಲ್ಲ.
ಸೌತ್ ಆಫ್ರಿಕಾ ಟಿ20 ಸರಣಿಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್ (ವಿ ಕೀ), ರಿಷಭ್ ಪಂತ್ (ವಿ ಕೀ), ಶಾಹಬಾಜ್ ಅಹ್ಮದ್, ಅಕ್ಷರ್ ಪಟೇಲ್, ಆರ್ ಅಶ್ವಿನ್, ಯುಜವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್.
ಭಾರತ-ಸೌತ್ ಆಫ್ರಿಕಾ ಸರಣಿ ವೇಳಾಪಟ್ಟಿ
ಭಾರತ ಮತ್ತು ಸೌತ್ ಆಫ್ರಿಕಾ ನಡುವೆ 3 ಟಿ20 ಪಂದ್ಯಗಳ ಸರಣಿ ಮತ್ತು 3 ಒಡಿಐ ಪಂದ್ಯಗಳ ಸರಣಿ ನಡೆಯಲಿದೆ. ಸೆಪ್ಟೆಂಬರ್ 28, ಇಂದು ತಿರುವನಂತಪುರಂನಲ್ಲಿ ಮೊದಲ ಪಂದ್ಯ ನಡೆಯಲಿದೆ. ಅಕ್ಟೋಬರ್ 2 ಮತ್ತು 4ರಂದು ಇನ್ನೆರಡು ಟಿ20 ಪಂದ್ಯಗಳು ನಡೆಯಲಿವೆ. ಗುವಾಹಟಿ ಮತ್ತು ಇಂದೋರ್ನಲ್ಲಿ ಈ ಪಂದ್ಯಗಳು ನಡೆಯಲು ನಿಗದಿಯಾಗಿವೆ.

ಇದಾದ ಬಳಿಕ ಏಕದಿನ ಕ್ರಿಕೆಟ್ ಸರಣಿ ನಡೆಯುತ್ತದೆ. ಅಕ್ಟೋಬರ್ 6, 9 ಮತ್ತು 11ರಂದು ಈ ಮೂರು ಪಂದ್ಯಗಳು ಲಕ್ನೋ ರಾಂಚಿ ಮತ್ತು ದೆಹಲಿಯಲ್ಲಿ ನಡೆಯಲಿವೆ.
ಟಿ20 ವಿಶ್ವಕಪ್
ಅಕ್ಟೋಬರ್ 11ರಂದು ಈ ಸರಣಿ ಆದ ಬಳಿಕ ಟೀಮ್ ಇಂಡಿಯಾ ನೇರವಾಗಿ ಆಸ್ಟ್ರೇಲಿಯಾಗೆ ಹೋಗಲಿದೆ. ಅಲ್ಲಿ ಅಕ್ಟೋಬರ್ 16ರಿಂದ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಆಡಲಿದೆ. ಅದಕ್ಕೆ ಮುನ್ನ ಎರಡು ವಾರ್ಮಪ್ ಮ್ಯಾಚ್ಗಳು ಭಾರತಕ್ಕೆ ಲಭ್ಯ ಇವೆ.
ಇನ್ನು ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾದ ಭಾಗವಾಗಿರುವ ಮೊಹಮ್ಮದ್ ಶಮಿ ಕೂಡ ಆಟಕ್ಕೆ ಲಭ್ಯವಾಗಿಲ್ಲ. ಕೋವಿಡ್ ಸೋಂಕಿತರಾಗಿರುವ ಶಮಿ ಆಸ್ಟ್ರೇಲಿಯಾ ಸರಣಿಯಲ್ಲಿ ಆಡಿರಲಿಲ್ಲ. ಈಗಲೂ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಸೌತ್ ಆಫ್ರಿಕಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ.
ಸೌತ್ ಆಫ್ರಿಕಾ ವಿರುದ್ಧ ಮುಂದೆ ಏಕದಿನ ಕ್ರಿಕೆಟ್ ಸರಣಿ ನಡೆಯುವುದು ಇದೆಯಾದರೂ ಎಲ್ಲರ ಚಿತ್ತ ಟಿ20 ಸರಣಿಯತ್ತ ನೆಟ್ಟಿದೆ. ಟಿ20 ವಿಶ್ವಕಪ್ಗೆ ಮುನ್ನ ಭಾರತ ತಂಡ ಆಡುವ ಕೊನೆಯ ಟಿ20 ಸರಣಿ ಇದಾಗಿರಲಿದೆ. ಹೀಗಾಗಿ, ಭಾರತ ತಂಡ ಯಾವ ಪ್ರಯೋಗ ಬಾಕಿ ಉಳಿಯದಂತೆ ಸರ್ವಸನ್ನದ್ಧ ಸ್ಥಿತಿಗೆ ಬರಲು ಈ ಸರಣಿ ಬಹಳ ಮಹತ್ವದ್ದಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications