ಶಿರಸಿ ಮಾರಿಕಾಂಬಾ ಜಾತ್ರೆಗೆ ಅದ್ಧೂರಿ ಚಾಲನೆ; ಗದ್ದುಗೆಯಲ್ಲಿ ವಿರಾಜಮಾನಳಾದ ದೇವಿ
ಶಿರಸಿ, ಮಾರ್ಚ್ 16: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆ ಆರಂಭವಾಗಿದ್ದು, ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆಯಾಗಿದೆ. ಮಾರ್ಚ್ 15ರಿಂದ ಶಿರಸಿ ಮಾರಿಕಾಂಬಾ ಜಾತ್ರೆ ಆರಂಭವಾಗಿದ್ದು, 9 ದಿನಗಳ ಕಾಲ ನಡೆಯುವ ಅದ್ಧೂರಿ ಜಾತ್ರಾ ಮಹೋತ್ಸವ ಮಾರ್ಚ್ 23ರಂದು ಸಂಪನ್ನಗೊಳ್ಳುತ್ತದೆ.
ಬುಧವಾರ ಮಧ್ಯಾಹ್ನ ಶಿರಸಿಯ ಬಿಡಕಿ ಬೈಲಿನ ಗದ್ದುಗೆಯಲ್ಲಿ ರಥದ ತಾಯಿ ಮಾರಿಕಾಂಬೆಯನ್ನು ತಂದು ಪ್ರತಿಷ್ಠಾಪನೆ ಮಾಡಲಾಯಿತು. ದೇವಿಯ ಕಲ್ಯಾಣ ಮಹೋತ್ಸವ ಮಂಗಳವಾರ (ಮಾರ್ಚ್ 15) ರಾತ್ರಿ ಜರುಗಿದ್ದು, ಇಂದು ಮಾರಿಕಾಂಬಾ ದೇವಿಯ ರಥ ದೇವಾಲಯದ ಆವರಣದಿಂದ ಹೊರಟು ಮಧ್ಯಾಹ್ನ ಗದ್ದುಗೆಗೆ ಬಂದು ಆಸೀನಳಾದಳು.
ರಾಜ್ಯದ ಶಕ್ತಿ ಪೀಠಗಳಲ್ಲೊಂದಾಗಿರುವ ಶಿರಸಿಯ ಮಾರಿಕಾಂಬಾ ದೇವಿಯ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದ್ದು, ಜಾತ್ರಾ ಮಹೋತ್ಸವದ ಎರಡನೇ ದಿನವಾದ ಇಂದು ಲಕ್ಷಾಂತರ ಭಕ್ತರ ನಡುವೆ ದೇವಿ ಮಾರಿಗುಡಿಯಿಂದ ರಥವನ್ನೇರಿ ಗದ್ದುಗೆಗೆ ಬಂದು ವಿರಾಜಮಾನಳಾದಳು.

ಎರಡು ವರ್ಷಕ್ಕೊಮ್ಮೆ ನಡೆಯುವ ಶಿರಸಿ ಮಾರಿಕಾಂಬಾ ಜಾತ್ರೆ ಒಂಬತ್ತು ದಿನಗಳ ಕಾಲ ಅದ್ಧೂರಿಯಾಗಿ ಜರುಗುತ್ತದೆ. ರಾಜ್ಯದಿಂದಷ್ಟೇ ಅಲ್ಲದೆ, ದೇಶದ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಹರಕೆ ಸಲ್ಲಿಸುತ್ತಾರೆ. ಈ ಬಾರಿಯ ಜಾತ್ರಾ ಮಹೋತ್ಸವವು ಮಂಗಳವಾರದಂದು ಮಾರಿಗುಡಿಯಲ್ಲಿ ಮಾರಿಕಾಂಬೆಯ ಕಲ್ಯಾಣೋತ್ಸವದ ಮೂಲಕ ಅಧಿಕೃತವಾಗಿ ಆರಂಭಗೊಂಡಿತು.
ಮಾರಿಕಾಂಬಾ ಜಾತ್ರೆ ಹಿನ್ನೆಲೆ
ಶಿರಸಿ ಜಾತ್ರೆಯನ್ನು ಸ್ಥಳೀಯರು ಮಾರಿ ಜಾತ್ರೆ ಎಂದೇ ಕರೆಯುತ್ತಾರೆ. ಬೇರೆ ಜಾತ್ರೆಗಳಲ್ಲಿ ಮೂಲ ವಿಗ್ರಹವನ್ನು ದೇವಾಲಯದಲ್ಲಿಯೇ ಬಿಟ್ಟು ಉತ್ಸವ ಮೂರ್ತಿಯನ್ನು ರಥ ಅಥವಾ ಪಲ್ಲಕ್ಕಿಯಲ್ಲಿಟ್ಟು ಧಾರ್ಮಿಕ ವಿಧಿವಿಧಾನ ಮಾಡಲಾಗುತ್ತದೆ. ಆದರೆ ಶಿರಸಿ ಜಾತ್ರೆಯಲ್ಲಿ ದೇವಾಲಯದಲ್ಲಿನ 7 ಅಡಿ ವಿಗ್ರಹವನ್ನೇ ಅಲಂಕಾರ ಸಮೇತ ಮದುವೆ ಮಾಡಿ ಮೆರವಣಿಗೆಯಲ್ಲಿ ಬಿಡಕಿ ಬೈಲಿಗೆ ತರಲಾಗುತ್ತದೆ.

ಭಕ್ತರಿಗೆ ನಿಕಟ ದರ್ಶನ ನೀಡುವ ತಾಯಿಯನ್ನು ಭಕ್ತರು ಕಣ್ತುಂಬಿಕೊಳ್ಳುತ್ತಾರೆ. 7 ಅಡಿ ವಿಗ್ರಹ, ವಜ್ರ, ನವರತ್ನ ಖಚಿತ ಸ್ವರ್ಣರತ್ನ, ಹಾರ, ನೂಪುರ, ಬೆಳ್ಳಿ, ಕಡಗಗಳು, 8 ಕೈಗಳು. ಒಂದೊಂದು ಕೈಗಳಲ್ಲೂ ಒಂದೊಂದು ವಿಶಿಷ್ಟ ಆಭರಣ ಹಿಡುದು ಗದ್ದುಗೆಯಲ್ಲಿ ವಿರಾಜಮಾನಳಾಗಿರುತ್ತಾಳೆ.
9 ದಿನಗಳ ಅದ್ಧೂರಿ ಆಚರಣೆ, ಧಾರ್ಮಿಕ ವಿಧಿವಿಧಾನಗಳ ಬಳಿಕ ದೇವಿಯನ್ನು ವಾಪಸ್ ಕೊಂಡೊಯ್ದು ಚಪ್ಪರಕ್ಕೆ ಬೆಂಕಿ ಹಚ್ಚಲಾಗುತ್ತದೆ. ಇದಕ್ಕೆ ಕಾರಣ ಎಂದರೆ ಮಹಿಷಾಸುರ ಸುಳ್ಳು ಹೇಳಿ ಆಕೆಯನ್ನು ವಿವಾಹವಾಗುತ್ತಾನೆ. ಇದನ್ನು ತಿಳಿದ ಆಕೆ, ಮಹಿಷನನ್ನು ವಧಿಸಲು ತಯಾರಾಗುತ್ತಾಳೆ. ಇದರಿಂದ ಆತ ಕೋಣದ ದೇಹದ ಒಳಗೆ ಸೇರಿಕೊಳ್ಳುತ್ತಾನೆ. ಕೋಣನ ಕತ್ತನ್ನು ಕಡಿದು ರೋಷಾವೇಶದಿಂದ ತಾಯಿ ಮಾರಿಕಾಂಬೆ ಮಹಿಷಾಸುರನ ಮರ್ಧನ ಮಾಡುತ್ತಾಳೆ. ಇದರ ಸಾಂಕೇತಿಕ ಆಚರಣೆಯೇ ಮಾರಿಕಾಂಬಾ ಜಾತ್ರೆಯಾಗಿದೆ.

40 ದಿನಗಳವರೆಗೆ ದೇವಸ್ಥಾನ ಬಾಗಿಲು ಬಂದ್
ಜಾತ್ರೆ ಮುಗಿದು 40 ದಿನಗಳವರೆಗೆ ಮಾರಿಕಾಂಬಾ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗುತ್ತದೆ. ಆಗ ಭಕ್ತರಿಗೆ ದೇವಿಯ ದರ್ಶನವಿರುವುದಿಲ್ಲ. ವಿಗ್ರಹವನ್ನು ಧಾರ್ಮಿಕ ಆಚರಣೆಯ ಮೂಲಕ ನೀರಿನಲ್ಲಿ ಮುಳುಗಿಸಿಡಲಾಗುತ್ತದೆ. 40 ದಿನಗಳ ಬಳಿಕ ಸೂತಕ ಕಳೆದ ಮೇಲೆ ಮತ್ತೆ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ.












Click it and Unblock the Notifications