ಫೆಬ್ರವರಿ 9 ರಿಂದ ಮಯೂರ ವರ್ಮ ವೇದಿಕೆಯಲ್ಲಿ ಕದಂಬ ಉತ್ಸವ ಸಂಭ್ರಮ
ಶಿರಸಿ, ಜನವರಿ 18: ಇತಿಹಾಸ ಪ್ರಸಿದ್ಧ ಬನವಾಸಿಯ 2019 ನೇ ಸಾಲಿನ ಕದಂಬೋತ್ಸವ ಕಾರ್ಯಕ್ರಮವನ್ನು ಫೆ.9 ಮತ್ತು 10 ರಂದು ಮಯೂರ ವರ್ಮ ವೇದಿಕೆಯಲ್ಲಿ ಆಯೋಜನೆ ಮಾಡಲಾಗಿದ್ದು, ಫೆ.7 ರಿಂದ ಕದಂಬೋತ್ಸವ ಕದಂಬ ಜ್ಯೋತಿ, ಕ್ರೀಡಾಕೂಟ ಕಾರ್ಯಕ್ರಮಗಳು ನಡೆಯಲಿದೆ.
ನಗರದ ತಹಶೀಲ್ದಾರ ಕಚೇರಿಯಲ್ಲಿ ಕದಂಬೋತ್ಸವ ಪೂರ್ವ ತಯಾರಿ ಸಭೆಯಲ್ಲಿ ಭಾಗವಹಿಸಿ ಮಾಹಿತಿ ನೀಡಿದ ,ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಮುಂಬರುವ ಮಾರ್ಚ್ ತಿಂಗಳಿನಲ್ಲಿ ಲೋಕಸಭಾ ಚುನಾವಣಾ ತಯಾರಿ ನಡೆಯಲಿದ್ದು, ಅದಕ್ಕೂ ಮೊದಲು ಕದಂಬೋತ್ಸವ ಆಚರಣೆ ಮಾಡಲು ನಿರ್ಧರಿಸಲಾಗಿದೆ.
ಫೆ.9 ಮತ್ತು 10 ರಂದು ಎರಡನೇ ಶನಿವಾರ ಹಾಗೂ ಭಾನುವಾರ ಆದ ಕಾರಣ ಬ್ಯಾಂಕ್ ಮತ್ತು ಸರ್ಕಾರಿ ಕಚೇರಿಗಳಿಗೂ ರಜೆ ಇರುವ ಕಾರಣ ಅನುಕೂಲವಾಗಲಿದೆ ಎಂದು ದಿನಾಂಕ ನಿಗದಿ ಮಾಡಲಾಗಿದೆ. ಫೆ.7 ರಂದು ಗುಡ್ನಾಪುರದಿಂದ ಕದಂಬ ಜ್ಯೋತಿ ಹೊರಡಲಿದ್ದು, ಎರಡು ಜ್ಯೋತಿಗಳಲ್ಲಿ ಒಂದು ಜಿಲ್ಲೆಯಲ್ಲಿ ಸಂಚಾರ ಹಾಗೂ ಇನ್ನೊಂದು ಹೊರ ಜಿಲ್ಲೆಯಲ್ಲಿ ಸಂಚಾರ ಮಾಡಲಿದೆ. ಅದೇ ದಿನ ಗುಡ್ನಾಪುರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಫೆ.9 ರಂದು ಬನವಾಸಿ ದೇವಸ್ಥಾನದಿಂದ ಕಲಾ ತಂಡಗಳಿಂದ ಮೆರವಣಿಗೆ ನಡೆಯಲಿದ್ದು, ಸಂಜೆ 7.30 ಕ್ಕೆ ಉದ್ಘಾಟನೆ ಕಾರ್ಯಕ್ರಮ ಹಾಗೂ ಪಂಪ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.
ಪಂಪ ಪ್ರಶಸ್ತಿ ಆಯ್ಕೆ ಸರ್ಕಾರ ಮಟ್ಟದಲ್ಲಿ ನಡೆಯಲಿದ್ದು, ಅದನ್ನು ನಮ್ಮ ವೇದಿಕೆಯಲ್ಲಿ ನೀಡಲು ಕೋರಲಾಗುವುದು ಎಂದು ತಿಳಿಸಿದ ಅವರು, ಕದಂಬೋತ್ಸವಕ್ಕೆ ಪ್ರವಾಸೋದ್ಯಮ ಇಲಾಖೆಯ ವತಿಯಿಂದ 40 ಲಕ್ಷ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ 18.75 ಲಕ್ಷ ರೂ. ಸೇರಿ ಒಟ್ಟೂ 58.75 ಲಕ್ಷ ರೂ. ಬಿಡುಗಡೆಯಾಗಿದ್ದು, ಇನ್ನೂ ಹೆಚ್ಚಿನ ಅನುದಾನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು.












Click it and Unblock the Notifications