ಶಿರಸಿ ತಾಲೂಕಿನ ಟಿಪ್ಪು ನಗರದಲ್ಲಿ ಎನ್ಐಎ ದಾಳಿ: ಓರ್ವ ಎಸ್ಡಿಪಿಐ ಮುಖಂಡ ವಶಕ್ಕೆ
ಕಾರವಾರ, ಸೆಪ್ಟೆಂಬರ್, 22: ರಾಜ್ಯದ ವಿವಿಧೆಡೆ ರಾಷ್ಟ್ರೀಯ ತನಿಖಾ ಪಡೆ (ಎನ್ಐಎ) ದಾಳಿ ನಡೆಸಿದೆ. ಇದರ ಬೆನ್ನಲ್ಲೆ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲೂ ಎನ್ಐಎ ಹಾಗೂ ಐಬಿ ತಂಡ ಬೆಳಂಬೆಳಗ್ಗೆ ದಾಳಿ ನಡೆಸಿ, ಎಸ್ಡಿಪಿಐ ಮುಖಂಡ ಅಝೀಝ್ ಎಂಬಾತನನ್ನು ವಶಕ್ಕೆ ಪಡೆದಿದೆ.

ಶಿರಸಿ ತಾಲೂಕಿನ ಟಿಪ್ಪು ನಗರದಲ್ಲಿ ಸ್ಥಳೀಯ ಪೊಲೀಸರ ಸಹಾಯದಿಂದೊಂದಿಗೆ ಎನ್ಐಎ ಹಾಗೂ ಐಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿಯಲ್ಲಿ ಎಸ್ಡಿಪಿಐ ಮುಖಂಡ ಹಝೀಝ್ ಅಬ್ದುಲ್ ಶುಕುರ್ ಹೊನ್ನಾವರ್ (45) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಬೆಳಗ್ಗೆ 3:30ರ ವೇಳೆಗೆ ಅಝೀಝ್ ಅಬ್ದುಲ್ ಮನೆ ಸುತ್ತ ಪೊಲೀಸರು ನೆರೆದಿದ್ದರು. ಸುಮಾರು 6 ಗಂಟೆ ವೇಳೆಗೆ ಅಝೀಝ್ ಅಬ್ದುಲ್ ಮನೆ ಮೇಲೆ ದಾಳಿ ನಡೆಸಿದ ಎನ್ಐಎ ತಂಡ ಒಂದು ಲ್ಯಾಪ್ಟಾಪ್, 2 ಮೊಬೈಲ್, ಪುಸ್ತಕ ಹಾಗೂ ಒಂದು ಸಿಡಿ ವಶಪಡಿಸಿಕೊಂಡಿದೆ.

ಶಿರಸಿಯಲ್ಲೂ ಎನ್ಐಎ ದಾಳಿ:
ಅಝೀಝ್ ಹೆಂಡತಿ ಹಾಗೂ ಮೂರು ಮಕ್ಕಳನ್ನು ಹೊಂದಿದ್ದಾನೆ. ಅಝೀಝ್ ಸಹೋದರ ಮೌಸಿನ್ ಅಬ್ದುಲ್ ಶುಕುರ್ ಹೊನ್ನಾವರ ಎಸ್ಡಿಪಿಐ ಪ್ರಾಂತೀಯ ಅಧ್ಯಕ್ಷನಾಗಿದ್ದು, ಆತನನ್ನು ವಶಕ್ಕೆ ಪಡೆಯಲು ಯೋಜನೆ ಹಾಕಲಾಗಿತ್ತು. ಆದರೆ ಮನೆಯಲ್ಲಿ ಮೌಸಿನ್ ಇರದ ಕಾರಣ ಆತನ ಅಣ್ಣ ಅಝೀಝ್ನನ್ನು ಮಾತ್ರ ವಶಕ್ಕೆ ಪಡೆದಿದ್ದು, ಖಾಸಗಿ ಕಾರಿನಲ್ಲಿ ಆತನನ್ನು ಗುಪ್ತ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಝೀಝ್ ತನ್ನ ಮನೆಯ ಗೋಡೆಯ ಮೇಲೆ ರಿಜೆಕ್ಟ್ ಸಿಎಎ ಹಾಗೂ ಎನ್ಐಎ ಎಂದು ಬರೆದುಕೊಂಡಿದ್ದ. ಸಹೋದರರಿಬ್ಬರು ರಾಷ್ಟ್ರ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ಹಿನ್ನೆಲೆ ಕೇಂದ್ರ ತನಿಖಾ ದಳದ ಕಣ್ಣು ಅವರ ಮೇಲೆ ಬಿದ್ದಿದೆ ಎನ್ನಲಾಗಿದೆ.












Click it and Unblock the Notifications