ಮಹಾರಾಷ್ಟ್ರ ರಾಜಕೀಯ: ಸಂಸದ ಅನಂತ್ಕುಮಾರ್ ಹೆಗಡೆ ಹೇಳಿದ ಸುಳ್ಳು ಕತೆ
ಶಿರಸಿ, ನವೆಂಬರ್ 29: ಮಹಾರಾಷ್ಟ್ರ ರಾಜಕೀಯದಲ್ಲಿ ಭಾರಿ ಸ್ಥಿತ್ಯಂತರ ಸಂಭವಿಸಿ, ಅಧಿಕಾರಕ್ಕೇರಿದ ಕೇವಲ 80 ಗಂಟೆಗಳಲ್ಲಿ ಬಿಜೆಪಿ ಅಧಿಕಾರ ತೊರೆಯಬೇಕಾಯಿತು. ಬಿಜೆಪಿಗೆ ಆದ ಈ ರಾಜಕೀಯ ಹಿನ್ನಡೆಯನ್ನು ಒಪ್ಪಿಕೊಳ್ಳಲು ತಯಾರಿಲ್ಲದ ಬಿಜೆಪಿಯ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಈ ಬೆಳವಣಿಗೆ ಕುರಿತು ಸುಳ್ಳು ಸುದ್ದಿಯೊಂದನ್ನು ಹರಡಿಸುತ್ತಿದ್ದಾರೆ. ಅದನ್ನೇ ಸಂಸದ ಅನಂತ್ಕುಮಾರ್ ಹೆಗಡೆ ನಿಜವೇನೋ ಎಂಬಂತೆ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ತಾಲೂಕಿನ ಬಂಕನಾಳ ಗ್ರಾಮದಲ್ಲಿ ಬಿಜೆಪಿ ಪ್ರಚಾರದಲ್ಲಿ ಮಾತನಾಡಿದ ಅವರು, 'ಮಹಾರಾಷ್ಟ್ರದಲ್ಲಿ ಬಿಜೆಪಿ ಬಹುಮತ ಇಲ್ಲದಿದ್ದರೂ 80 ತಾಸು ನಮ್ಮವರು ಮುಖ್ಯಮಂತ್ರಿ ಆದರು. ಬಹುಮತ ಇಲ್ಲದಿದ್ದರೂ ಏಕೆ ಸಿಎಂ ಆದರು ಅನ್ನುವ ಪ್ರಶ್ನೆ ಎಲ್ಲರದ್ದಾಗಿತ್ತು. ಇದಕ್ಕೆ ಕಾರಣ ಮುಖ್ಯಮಂತ್ರಿ ನಿಯಂತ್ರಣದಲ್ಲಿದ್ದ 40 ಸಾವಿರ ಕೋಟಿ ಹಣ. ಕಾಂಗ್ರೆಸ್, ಎನ್ಸಿಪಿ, ಶಿವಸೇನಾ ಅಧಿಕಾರಕ್ಕೆ ಬಂದರೆ ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರು. ಅದಕ್ಕಾಗಿಯೇ ನಾಟಕ ಮಾಡಿಯಾದರೂ ಅಧಿಕಾರಕ್ಕೆ ಬಂದು ಹಣ ತಲುಪಿಸುವ ಜಾಗದಲ್ಲಿ ತಲುಪಿಸಿದ್ದೇವೆ. ಸಂಪೂರ್ಣ ಹಣವನ್ನು ಕೇಂದ್ರಕ್ಕೆ ವಾಪಸ್ ಕಳುಹಿಸಲಾಗಿದೆ' ಎಂದು ಹೇಳಿದರು.

'ಜನರಿಗೆ ಬೇಕಾದ ಸರ್ಕಾರ ಕಾಂಗ್ರೆಸ್ಗೆ ಬೇಕಾಗಿರುವುದಿಲ್ಲ. ಇಲ್ಲೂ ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕು ಎಂದು ಹೆಚ್ಚಿನ ಸ್ಥಾನವನ್ನು ಬಿಜೆಪಿಗೆ ಕೊಟ್ಟರೂ ಕಾಂಗ್ರೆಸ್ ಅಧಿಕಾರವನ್ನು ತಪ್ಪಿಸುವ ಪ್ರಯತ್ನ ಮಾಡಿತ್ತು. ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ. ಕಾಂಗ್ರೆಸ್ ನಿಂದ ಬಂದವರನ್ನು ಬಿಜೆಪಿಗರು ಸೇರಿಸಿಕೊಂಡು ಕೆಲಸ ಮಾಡಿ' ಎಂದು ಸಲಹೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ, ಪ್ರಮುಖರಾದ ಕೃಷ್ಣ ಎಸಳೆ ಹಾಗೂ ಮತ್ತಿತರರು ಈ ವೇಳೆ ಇದ್ದರು.












Click it and Unblock the Notifications