ಶಿವಮೊಗ್ಗ; ಹರ್ಷ ಹತ್ಯೆ, 25 ಲಕ್ಷ ರೂ. ಪರಿಹಾರದ ಚೆಕ್ ಹಸ್ತಾಂತರ
ಶಿವಮೊಗ್ಗ, ಮಾರ್ಚ್ 06: ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ನಡೆದಿತ್ತು. ಕರ್ನಾಟಕ ಸರ್ಕಾರ ಹರ್ಷ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿತ್ತು.ಇಂದು ಪರಿಹಾರದ ಚೆಕ್ ಹಸ್ತಾಂತರ ಮಾಡಲಾಗಿದೆ.
ಭಾನುವಾರ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷ ಮನೆಗೆ ಇಂದು ಭೇಟಿ ನೀಡಿ, ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ರಾಜ್ಯ ಸರ್ಕಾರದ ವತಿಯಿಂದ 25 ರೂ. ಲಕ್ಷ ಮೊತ್ತದ ಚೆಕ್ ಹಸ್ತಾಂತರಿಸಿದರು.
ಫೆಬ್ರವರಿ 20ರಂದು ರಾತ್ರಿ ಹರ್ಷ ಕೊಲೆಯಾಗಿತ್ತು. ಹತ್ಯೆಯ ಬಳಿಕ ಶಿವಮೊಗ್ಗ ನಗರ ಪ್ರಕ್ಷುಬ್ಧಗೊಂಡಿತ್ತು. ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕರ್ಫ್ಯೂ ಹೇರಿ, ಭಾರೀ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿತ್ತು.

ಶಿವಮೊಗ್ಗದ ಕ್ಲಾರ್ಕ್ ಪೇಟ್ ನಿವಾಸಿ ಮೊಹಮ್ಮದ್ ಖಾಸಿಫ್ ಹರ್ಷ ಹತ್ಯೆ ಪ್ರಕರಣದ ಪ್ರಮುಖ ಆರೋಪಿ. ಹರ್ಷ ಮತ್ತು ಖಾಸಿಫ್ ಆಗಾಗ ಜಗಳವಾಡುತ್ತಿದ್ದರು. ಇಸ್ಲಾಂ ಕುರಿತು ಹರ್ಷ ಹಾಕುತ್ತಿದ್ದ ಫೇಸ್ಬುಕ್ ಪೋಸ್ಟ್ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದಿತ್ತು.
ಹಳೇ ದ್ವೇಷದ ಹಿನ್ನಲೆಯಲ್ಲಿ ಮೊಹಮ್ಮದ್ ಖಾಸಿಫ್ ಸ್ನೇಹಿತರ ಜೊತೆ ಸೇರಿ ಹರ್ಷ ಕೊಲೆಗೆ ಸಂಚು ರೂಪಿಸಿದ್ದ. ಫೆಬ್ರವರಿ 20ರ ರಾತ್ರಿ ಹರ್ಷ ಹೋಟೆಲ್ಗೆ ಊಟಕ್ಕೆ ಹೋಗುವಾಗ ಕಾರಿನಲ್ಲಿ ಆಗಮಿಸಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು.
Koo Appಮಾಜಿ ಮುಖ್ಯಮಂತ್ರಿ ಶ್ರೀ ಬಿ. ಎಸ್. ಯಡಿಯೂರಪ್ಪ ಅವರು ಶಿವಮೊಗ್ಗದಲ್ಲಿ ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷ ಅವರ ಮನೆಗೆ ಇಂದು ಭೇಟಿ ನೀಡಿ, ಹರ್ಷ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿ, ರಾಜ್ಯ ಸರ್ಕಾರದ ವತಿಯಿಂದ ನೀಡಲಾದ ರೂ. 25 ಲಕ್ಷ ಮೊತ್ತದ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಕೆ. ಎಸ್. ಈಶ್ವರಪ್ಪ, ಸಂಸದರಾದ ಶ್ರೀ ಬಿ. ವೈ. ರಾಘವೇಂದ್ರ ಮತ್ತು ಪ್ರಮುಖರು ಉಪಸ್ಥಿತರಿದ್ದರು - BJP KARNATAKA (@BJP4Karnataka) 6 Mar 2022
ಹರ್ಷನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ. ಹರ್ಷ ಶವವನ್ನು ಆಸ್ಪತ್ರೆಯಿಂದ ಸೀಗೆಹಟ್ಟಿ ನಿವಾಸಕ್ಕೆ ತೆಗೆದುಕೊಂಡು ಹೋಗುವಾಗ, ಪಾರ್ಥಿವ ಶರೀರದ ಮೆರವಣಿಗೆ ವೇಳೆ ಗಲಭೆ ನಡೆದಿತ್ತು.
ಹರ್ಷ ಹತ್ಯೆ ಬಗ್ಗೆ ಎನ್ಐಎ ತನಿಖೆ; ಹರ್ಷ ಕೊಲೆ ಪ್ರಕರಣದ ತನಿಖೆಯನ್ನು ಸ್ಥಳೀಯ ಪೊಲೀಸರು ನಡೆಸುತ್ತಿದ್ದಾರೆ. ಪ್ರಕರಣದ ತನಿಖೆಯನ್ನು ಎನ್ಐಗೆ ವಹಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಒಂದು ವಾರದೊಳಗೆ ಈ ಕುರಿತು ಆದೇಶ ಪ್ರಕಟವಾಗುವ ನಿರೀಕ್ಷೆ ಇದೆ.
ಶನಿವಾರ ಕೇಂದ್ರ ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹರ್ಷ ಮನೆಗೆ ಭೇಟಿ ನೀಡಿದ್ದರು. "ಹರ್ಷ ಕೊಲೆ ಪ್ರಕರಣವನ್ನು ಇನ್ನೊಂದು ವಾರದೊಳಗೆ ಎನ್ಐಎ ತನಿಖಾ ತಂಡಕ್ಕೆ ಒಪ್ಪಿಸಲಾಗುವುದು" ಎಂದು ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಸಚಿವರು, "ಸಾವು ಕೇವಲ ಕುಟುಂಬಕ್ಕೆ ದುಃಖ ತಂದಿಲ್ಲ. ಬದಲಿಗೆ ಇಡೀ ದೇಶಕ್ಕೆ ನೋವು ತಂದಿದೆ. ಹರ್ಷನ ಸಾವಿನ ಹಿಂದೆ ಅಂತರಾಷ್ಟ್ರೀಯ ಷಡ್ಯಂತ್ರ ಅಡಗಿದೆ ಎಂಬ ಶಂಕೆ ಇದೆ. ಕೇಂದ್ರ ಸರ್ಕಾರ ಈ ಪ್ರಕರಣವನ್ನು ಎನ್ಐಗೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಹೇಳಿದೆ. ಹಾಗಾಗಿ ಒಂದು ವಾರದೊಳಗೆ ಎನ್ಐಎಗೆ ಈ ಪ್ರಕರಣ ಹಸ್ತಾಂತರಗೊಳ್ಳುವ ನಿರೀಕ್ಷೆ ಇದೆ" ಎಂದರು.
"ಹರ್ಷನ ಕೊಲೆ ಮಾಡಿರುವುದನ್ನು ನೋಡಿದರೆ ತಾಲಿಬಾನ್ ಸಂಸ್ಕೃತಿ ಎದ್ದು ತೋರುತ್ತದೆ. ಕೊಲೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಾರೆ ಎಂದರೆ ಅವರ ಮಾನಸಿಕತೆ ಎಷ್ಟಿದೆ ಎಂದು ತಿಳಿದುಬರುತ್ತದೆ" ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಮುಖ್ಯಮಂತ್ರಿಗಳ ಹೇಳಿಕೆ; ಹರ್ಷ ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಜನರನ್ನು ಬಂಧಿಸಲಾಗಿದೆ. ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ತನಿಖೆ ತೀವ್ರವಾಗಿ ನಡೆಯುತ್ತಿದೆ. ಅದರ ಆಧಾರದ ಮೇಲೆ ಮುಂದಿನ ತನಿಖೆಯನ್ನು ಯಾವ ಸಂಸ್ಥೆಗೆ ನೀಡಬೇಕೆನ್ನುವುದು ನಿರ್ಧಾರವಾಗುತ್ತದೆ" ಎಂದು ಹೇಳಿದ್ದರು.
ಮಾಧ್ಯಮಗಳ ಜೊತೆ ಮಾತನಾಡಿದ್ದ ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಶಾಸಕ, ಸಚಿವ ಕೆ. ಎಸ್. ಈಶ್ವರಪ್ಪ, "ಹಿಂದೂ ಸಂಘಟನೆಯ ಹರ್ಷ ಕಗ್ಗೊಲೆ ಆಗುವ ಕಲ್ಪನೆ ನಮಗ್ಯಾರಿಗೂ ಇರಲಿಲ್ಲ. ಕಗ್ಗೊಲೆ ಆದ ತಕ್ಷಣ ಕೊಲೆಗಡುಕ ಗೂಂಡಾಗಳನ್ನು ರಾಜ್ಯ ಸರ್ಕಾರ ಬಂಧಿಸಿದೆ" ಎಂದು ತಿಳಿಸಿದ್ದರು.
"ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್ಕುಮಾರ್ ಕಟೀಲ್ ಇಲ್ಲಿಗೆ ಬಂದು ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಸಹಕಾರದ ಭರವಸೆ ನೀಡಿದ್ದಾರೆ. ಕೊಲೆಗಡುಕರು ಮತ್ತು ಘಟನೆಯ ಹಿಂದಿರುವ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ" ಎಂದು ಹೇಳಿದ್ದರು.












Click it and Unblock the Notifications