ನಿಲ್ಲದ ಪ್ರಸೂತಿ, ತಲುಪದ ಮಾಹಿತಿ: ಕಾರಿನಲ್ಲೇ ಮಗುವಿಗೆ ಜನ್ಮ
ಶಿವಮೊಗ್ಗ, ಜುಲೈ 20: ಸಕಾಲಕ್ಕೆ ವೈದ್ಯಕೀಯ ಸೇವೆ ಸಿಗದೆ ಗರ್ಭಿಣಿಯೊಬ್ಬರು ದಾರಿ ನಡುವೆ ಕಾರಿನಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪಟ್ಟಣದ ಗಾಂಧಿಚೌಕದಲ್ಲಿ ನಡೆದಿದೆ.
Recommended Video
ಕೋಣಂದೂರು ಸಮೀಪ ಕಂಕಳ್ಳಿಯಲ್ಲಿನ ವ್ಯಕ್ತಿಯೊಬ್ಬರು ತಮ್ಮ ಪತ್ನಿಯನ್ನು ಹೆರಿಗೆಗೆಂದು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಈ ಆಸ್ಪತ್ರೆಯ ಪ್ರಸೂತಿ ತಜ್ಞರಾದ ಡಾ.ಸುಮಾ ಅವರು ಕ್ವಾರಂಟೈನ್ನಲ್ಲಿದ್ದಾರೆ ಎಂಬ ಹಬ್ಬಿದ ತಪ್ಪು ಮಾಹಿತಿಯಿಂದಾಗಿ ಖಾಸಗಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಆದರೆ ಅಲ್ಲಿ ಇವರನ್ನು ದಾಖಲಿಸಿಕೊಳ್ಳಲು ಕೋವಿಡ್ 19 ಮಾರ್ಗಸೂಚಿಗಳೇ ತೊಡಕಾಗಿವೆ. ಆಸ್ಪತ್ರೆಗಾಗಿ ಹುಡುಕಾಡುವ ಸಮಯದಲ್ಲಿ ಗಾಂಧಿಚೌಕದ ಬಳಿ ಕಾರಿನಲ್ಲಿ ಹೆರಿಗೆಯಾಗಿದೆ. ಕೊನೆಗೆ ಜೆಸಿ ಆಸ್ಪತ್ರೆಗೆ ದಾಖಲಿಸಿಕೊಂಡು ವೈದ್ಯಕೀಯ ಸೇವೆ ನೀಡಲಾಗಿದೆ. ಅಂದಹಾಗೆ, ತೀರ್ಥಹಳ್ಳಿಯಲ್ಲಿ ಮೂರು ಖಾಸಗಿ ನರ್ಸಿಂಗ್ ಹೋಂಗಳಿವೆ.
ಹೊನ್ನಾವರದ 108 ಸಿಬ್ಬಂದಿ ಸಮಯ ಪ್ರಜ್ಞೆ; ಉಳಿಯಿತು ತಾಯಿ ಮಗು ಜೀವ
ತೀರ್ಥಹಳ್ಳಿ ಹಾಗೂ ಸುತ್ತಮುತ್ತಲ ಹಳ್ಳಿಗಳಿಗೆ ಹೆರಿಗೆಗಾಗಿ ಜನ ನಂಬಿಕೊಂಡಿರುವುದು 100 ಬೆಡ್ ಸಾಮರ್ಥ್ಯವುಳ್ಳ ಜೆಸಿ ಆಸ್ಪತ್ರೆಯನ್ನು. ಅಲ್ಲಿನ ಪ್ರಸೂತಿ ತಜ್ಞೆ ಡಾ. ಸುಮಾ ವಾರದಲ್ಲಿ ಸರಾಸರಿ 10 ಹೆರಿಗೆ ಮಾಡಿಸುತ್ತಾರೆ. ಕೊರೊನಾ ಲಾಕ್ಡೌನ್ ಸಮಯದಲ್ಲಿಯೂ ಗರ್ಭಿಣಿಯರಿಗೆ ಆರೋಗ್ಯ ಸೇವೆ ಲಭ್ಯವಾಗಿದೆ ಮತ್ತು ಇವತ್ತಿಗೂ ನಡೆದುಕೊಂಡು ಬರುತ್ತಿದೆ.
ಆದರೆ ಕೆಲವು ದಿನಗಳ ಹಿಂದೆ ಜೆಸಿ ಆಸ್ಪತ್ರೆಗೆ ಬಂದ ಗರ್ಭಿಣಿ ಮಹಿಳೆಯೊಬ್ಬರಿಗೆ ಕೊರೊನಾ ದೃಢಪಟ್ಟಿತ್ತು. ನಂತರ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಇದು ಸುದ್ದಿಯಾಗುತ್ತಿದ್ದಂತೆ ಜೆಸಿ ಆಸ್ಪತ್ರೆ ಲಾಕ್ಡೌನ್ ಆಗಿದೆ, ಡಾ. ಸುಮಾ ಕ್ವಾರಂಟೈನ್ನಲ್ಲಿದ್ದಾರೆ ಎಂದು ಸುದ್ದಿ ಹರಡಿತ್ತು.
ಆಸ್ಪತ್ರೆಯನ್ನು ಸ್ಯಾನಿಟೈಸ್ ಮಾಡಿ ಮಕ್ಕಳ ಮತ್ತು ಹೆರಿಗೆ ವಾರ್ಡ್ಗಳ ಪ್ರವೇಶಾತಿಯನ್ನು ಎರಡು ದಿನಗಳ ಮಟ್ಟಿಗೆ ನಿರ್ಬಂಧಿಸಲಾಗಿತ್ತು. ಆದರೆ ಪ್ರಸೂತಿ ಸೇವೆ ಮುಂದುವರಿದಿತ್ತು.
ಕೋವಿಡ್ ಚಿಕಿತ್ಸೆ: ಮಂಡ್ಯದಿಂದ ಬಂತು ಆತ್ಮವಿಶ್ವಾಸ ವೃದ್ಧಿಸುವ ಸುದ್ದಿ!
ಇಷ್ಟೆಲ್ಲಾ ನಡೆದ ನಂತರ ಎಚ್ಚೆತ್ತ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ. ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯ ಯಾವುದೇ ವೈದ್ಯರು ಕ್ವಾರೆಂಟೈನ್ನಲ್ಲಿ ಇಲ್ಲ. ಜನತೆ ಆತಂಕ ಪಡುವ ಅಗತ್ಯವಿಲ್ಲ. ಅಗತ್ಯವಾದ ಎಲ್ಲಾ ಶುಶ್ರೂಷೆಗಳು ಆಸ್ಪತ್ರೆಯಲ್ಲಿ ಲಭ್ಯ ಇವೆ. ಕೊರೊನಾ ಸೋಂಕು ಪತ್ತೆಯಾದ ಗರ್ಭಿಣಿಯ ರಕ್ತ ಪರೀಕ್ಷೆ ನಡೆಸಿದ ಶುಶ್ರೂಷಕಿಯರು ಮಾತ್ರ ಕ್ವಾರೆಂಟೈನ್ ನಲ್ಲಿ ಇದ್ದಾರೆ. ಕೊರೊನಾ ಸಂಬಂಧ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನೂ ಆಸ್ಪತ್ರೆಯಲ್ಲಿ ಕೈಗೊಳ್ಳಲಾಗಿದೆ ಎಂದು ಇಲಾಖೆ ಧೃಡಪಡಿಸಿದೆ.