ಮೋದಿ ಭಾಷಣದಲ್ಲಿ ಶೇ.90ರಷ್ಟು ಸುಳ್ಳಿದೆ: ಸಿದ್ದರಾಮಯ್ಯ
ಶಿವಮೊಗ್ಗ, ಮೇ 04: "ನಮ್ಮ ಕರ್ನಾಟಕಕ್ಕೆ ನಮ್ಮ ವಚನ" ಎಂಬ ತಲೆಬರಹದೊಂದಿಗೆ ಬಿಜೆಪಿ ಇಂದು ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದರೆ, ಇತ್ತ ಬಿಜೆಪಿ ಪ್ರಣಾಳಿಕೆಗೆ ಸಿಎಂ ತಿರುಗೇಟು ನೀಡಿದ್ದಾರೆ. ಎಸಿಬಿ ಬ್ಯಾನ್ ಮಾಡುವ ವಿಚಾರವನ್ನು ಕಳೆದ ಚುನಾವಣೆಯಲ್ಲಿ ಬಿಜೆಪಿ ಪ್ರಸ್ತಾಪಿಸಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಸೊರಬ ಕ್ಷೇತ್ರದ ಅಭ್ಯರ್ಥಿ ಪರವಾಗಿ ಮತಯಾಚಿಸಲು ಆಗಮಿಸಿದ್ದ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿ ಇತರೆ ರಾಜ್ಯದಲ್ಲಿ ಜಾರಿಯಲ್ಲಿರುವ ಎಸಿಬಿಯನ್ನು ಬಿಜೆಪಿ ಬ್ಯಾನ್ ಯಾಕೆ ಮಾಡ್ತಿಲ್ಲ ಎಂದು ಪ್ರಶ್ನಿಸಿದರು. ಎಸಿಬಿಯನ್ನ ಬಿಜೆಪಿ ಬ್ಯಾನ್ ಮಾಡುವುದಾಗಿ ಹೇಳಿರುವುದು ಚುನಾವಣೆ ಗಿಮಿಕ್ ಅಷ್ಟೆ ಎಂದು ಟೀಕಿಸಿದರು.
ಆದಿತ್ಯನಾಥ್ ನಿನ್ನೆ ಸಿದ್ಧರಾಮಯ್ಯ ವಿರುದ್ಧ ಸಾಗರದಲ್ಲಿ ಮಾಡಿರುವ ವಾಗ್ದಾಳಿ ಬಗ್ಗೆ ಮಾತನಾಡಿ, ಆದಿತ್ಯನಾಥ ತಮ್ಮ ಎಂಪಿ ಸ್ಥಾನವನ್ನೇ ಗೆಲ್ಲಲು ಸಾಧ್ಯವಾಗಲಿಲ್ಲ. ಇನ್ನು ನನ್ನ ಬಗ್ಗೆ ಏನು ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು. ಪ್ರಧಾನಿ ಮೋದಿ ಅವರ ಭಾಷಣದಲ್ಲಿ ಶೇ.90ರಷ್ಟು ಭಾಗ ಸುಳ್ಳು ಇದೆ. ನಕಲಿ ಭಾಷಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಕರ್ನಾಟಕವನ್ನು ಲೂಟಿ ಮಾಡಿದ್ದಾರೆ ಅಂತ ಹೇಳ್ತಾರೆ.

ಬಳ್ಳಾರಿಯನ್ನು ಲೂಟಿ ಮಾಡಿದವರು ಕಾಂಗ್ರೆಸ್ ನವರು ಅಲ್ಲ, ಬಿಜೆಪಿ ಅವರು. ಜನರಿಗೆ ಇದು ಗೊತ್ತಿದೆ ಎಂದರು. ಮೋದಿ ಕರ್ನಾಟಕದ ನನ್ನ ಆಡಳಿತದ ಬಗ್ಗೆ ಸೀದ ರುಪಯ್ಯ ಸರ್ಕಾರ್ ಎಂದು ಹೇಳಿದ್ದಾರಲ್ಲ, ಇವರೇನು ಮಾಡುತ್ತಿರುವುದು ಎಂದು ಪ್ರಶ್ನಿಸಿದ ಸಿಎಂ ಪ್ರಧಾನಿ ಅವರು ಮಹದಾಯಿ ವಿವಾದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ.
ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ಕೊಡುವುದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಕುಟುಕಿದ್ದಾರೆ. ನೀರವ್ ಮೋದಿ ಸಾವಿರಾರು ಕೋಟಿ ಹೊಡೆದುಕೊಂಡು ಹೋಗಿದ್ದಾನೆ. ಅದು ಬಿಜೆಪಿ ಅಧಿಕಾರದಲ್ಲಿ ಇದ್ದ ಸಮಯದಲ್ಲಿ ನಡೆದಿದೆ. ಚೌಕೀದಾರ್ ಎಂದು ಹೇಳಿಕೊಳ್ಳುವ ಮೋದಿ ಏನು ಮಲಗಿದ್ರಾ ಎಂದು ಸಿಎಂ ಮೋದಿ ಕಾಲೆಳೆದಿದ್ದಾರೆ.












Click it and Unblock the Notifications