ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗ; ರೈತರ ಪ್ರತಿಭಟನೆ
ಶಿವಮೊಗ್ಗ, ಫೆಬ್ರವರಿ 03: ಒಂದು ಎಕರೆಗೆ ಒಂದು ಕೋಟಿ 25 ಲಕ್ಷ ರೂ. ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಅದೇ ಗ್ರಾಮದಲ್ಲಿ ಪರ್ಯಾಯ ಜಮೀನು ಕೊಡಬೇಕು. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗದಲ್ಲಿ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿರುವ ರೈತರ ಬೇಡಿಕೆ ಇದು.
ಭೂಮಿ ಕಳೆದುಕೊಳ್ಳುವ ರೈತರ ಹೋರಾಟ ಸಮಿತಿ ನೇತೃತ್ವದಲ್ಲಿ ಬುಧವಾರ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಈ ರೈಲ್ವೆ ಮಾರ್ಗಕ್ಕಾಗಿ 1427 ಎಕರೆ ಜಮೀನನ್ನು ಸರ್ಕಾರ ಗುರುತಿಸಿದೆ. ಭೂ ಸ್ವಾಧೀನಪಡಿಸಿಕೊಳ್ಳಲು ಪ್ರಕಟಣೆಯನ್ನು ಹೊರಡಿಸಲಾಗಿದೆ.
ಜಿಲ್ಲಾಧಿಕಾರಿ ಅವರು ಸಭೆ ನಡೆಸಿ ಪ್ರತಿ ಎಕರೆಗೆ 6 ಲಕ್ಷದಿಂದ 14 ಲಕ್ಷದವರೆಗೆ ಪರಿಹಾರ ಕೊಡಿಸುವುದಾಗಿ ತಿಳಿಸಿ ಒಪ್ಪಿಗೆ ಪತ್ರಕ್ಕೆ ಸಹಿ ಹಾಕುವಂತೆ ಹೇಳುತ್ತಿದ್ದಾರೆ ಎಂದು ರೈತರು ಆರೋಪಿಸಿದರು. ಹೆಚ್ಚಿನ ಪರಿಹಾರ ಬೇಕು ಎಂದು ರೈತರು ಸರ್ಕಾರವನ್ನು ಒತ್ತಾಯಿಸಿದರು.

ಕೋಟಿ ಕೊಟ್ಟರೆ ಒಪ್ಪುತ್ತೇವೆ; ರೈಲ್ವೆ ಮಾರ್ಗದ ಜಮೀನಿಗೆ ಪ್ರತಿ ಎಕರೆಗೆ 1.25 ಕೋಟಿ ರೂ. ಪರಿಹಾರ ನೀಡಬೇಕು, ಇಲ್ಲವಾದಲ್ಲಿ ಅದೇ ಗ್ರಾಮದಲ್ಲಿ ಪರ್ಯಾಯ ಜಮೀನು ನೀಡಬೇಕು. ಅಡಕೆ ತೋಟಕ್ಕೆ ಪ್ರತಿ ಎಕರೆಗೆ 2.50 ಕೋಟಿ ರೂ. ಪರಿಹಾರ ಕೊಡಬೇಕು.
ನಿರಾಶ್ರಿತ ರೈತರ ಕುಟುಂಬಕ್ಕೆ ಉದ್ಯೋಗ ಕೊಡಬೇಕು. ರೈತರ ಜಮೀನಿಗೆ ಹೋಗಲು ರಸ್ತೆ ಮಾಡಿಸಿಕೊಡಬೇಕು. ಸರ್ಕಾರಿ ಜಮೀನು, ಬಗರ್ ಹುಕುಂ, ಗ್ರಾಮಠಾಣಗಳಿಗೆ ಸೂಕ್ತ ಜಮೀನು ನಿಗದಿಪಡಿಸಬೇಕು ಎಂದು ರೈತರು ಒತ್ತಾಯಿಸಿದರು. ಈ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ರೈತರ ಸಂಘದ ಕಾರ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ಸಮಿತಿ ಗೌರವಾಧ್ಯಕ್ಷ ಭೋಜಾನಾಯ್ಕ, ಅಧ್ಯಕ್ಷ ಜಗದೀಶ್ವರಯ್ಯ, ಉಪಾಧ್ಯಕ್ಷರಾದ ಹಾಲೇಶ ನಾಯ್ಕ, ನೇಮರಾಜ್, ಯೋಗೇಶ್, ಪ್ರಗತಿಪರ ಹೋರಾಟಗಾರ ಕೆ. ಎಲ್. ಅಶೋಕ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications