23 ತಿಂಗಳು ತಪಸ್ಸು ಮಾಡಿದ ಸ್ವಾಮೀಜಿ; ಮಠಕ್ಕೆ ಭಕ್ತ ಸಾಗರ!
ಶಿವಮೊಗ್ಗ, ಸೆಪ್ಟೆಂಬರ್ 06; 23 ತಿಂಗಳು ಬಾಹ್ಯ ಪ್ರಪಂಚದಿಂದ ದೂರ ಉಳಿದು ತಪಸ್ಸು ನಡೆಸುತ್ತಿದ್ದ ಶ್ರೀ ಸಿದ್ಧಲಿಂಗ ಸ್ವಾಮೀಜಿ ತಪೋನುಷ್ಠಾನ ಪೂರ್ಣಗೊಂಡಿದೆ. ಇದೇ ಮೊದಲ ಭಾರಿಗೆ ಭಕ್ತರಿಗೆ ದರ್ಶನ ನೀಡಿದ್ದಾರೆ. ಶ್ರೀಗಳನ್ನು ಕಣ್ತುಂಬಿಕೊಂಡು, ಪೂಜೆ ಸಲ್ಲಿಸಲು ದೂರದೂರುಗಳಿಂದ ಭಕ್ತರು ಆಗಮಿಸಿದ್ದರು.
ಭದ್ರಾವತಿ ತಾಲೂಕು ಗೋಣಿಬೀಡು ಗ್ರಾಮದ ಶೀಲ ಸಂಪಾದನಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ತಪೋನುಷ್ಠಾನದ ಸಮಾರೋಪ, ದಾಸೋಹ ಮಂದಿರ ಉದ್ಘಟನಾ ಸಮಾರಂಭ ನಡೆಯಿತು. ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಭದ್ರಾವತಿ ನಗರಸಭೆ ಉಪ ಚುನಾವಣೆ: ಜೆಡಿಎಸ್ಗೆ ಭರ್ಜರಿ ಗೆಲುವು
ಶ್ರೀಗಳ ತಪೋನುಷ್ಠಾನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ತುಮಕೂರು ಸಿದ್ಧಗಂಗ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, "ಮನುಷ್ಯನಿಗೆ ಅಂತರ್ಮುಖ ಮತ್ತು ಬಹಿರ್ಮುಖ ಎಂಬ ಎರಡು ಮುಖಗಳಿರುತ್ತವೆ. ಇಂದು ಸಮಾಜದಲ್ಲಿ ಬಹಿರ್ಮುಖ ಜಾಸ್ತಿಯಾಗಿದ್ದು, ವಿಜೃಂಭಣೆಯನ್ನು ಕಾಣುತ್ತಿದ್ದೇವೆ. ಇದರಿಂದ ಅಂತರ್ಮುಖ ದುರ್ಬಲಗೊಳ್ಳುತ್ತಿದೆ. ಅಂತರ್ಮುಖದಲ್ಲಿಯೂ ಮನುಷ್ಯ ಹೆಚ್ಚಿನ ಶ್ರೀಮಂತಿಕೆಯನ್ನು ಹೊಂದಬಹುದು ಎಂಬುದು ಶ್ರೀಗಳ ತಪಸ್ಸಿನ ಒಂದು ಸಂದೇಶವಾಗಿದೆ" ಎಂದರು.
ಬಿಜೆಪಿ ನಾಯಕರಿಗೆ ಎಚ್ಚರಿಕೆ ಕೊಟ್ಟ ದಯಾನಂದ ಪುರಿ ಮಾಹಾ ಸ್ವಾಮೀಜಿ
ಸಮಾರೋಪ ಸಮಾರಂಭದಲ್ಲಿ ಶಿವಮೊಗ್ಗದ ಬಸವಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಗೋಣಿಬೀಡು ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರ ಅನುಗ್ರಹ ಸಂದೇಶ ಓದಿದರು. ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಶ್ರೀ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಗುರುಮೂರ್ತಿ ಸ್ವಾಮೀಜಿ, ಶ್ರೀ ರಾಚೋಟೇಶ್ವರ ಸ್ವಾಮೀಜಿ, ಡಾ. ಬಸವ ಜಯಚಂದ್ರ ಸ್ವಾಮೀಜಿ, ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಚನ್ನಬಸವ ಸ್ವಾಮೀಜಿ ಮುಂತಾವರು ಪಾಲ್ಗೊಂಡಿದ್ದರು.
ಕಲಬುರಗಿಯ ಕಾಳಗಿ ಮಠದ ಶಿವಬಸವಚಾರ್ಯ ಸ್ವಾಮೀಜಿ ನಿಧನ
ಭಕ್ತರಿಗಾಗಿ ದೇಹ ದಂಡಿಸಿಕೊಂಡು ಅನುಷ್ಠಾನ
ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಮಾತನಾಡಿ, "ವೈಜ್ಞಾನಿಕ ಯುಗದಲ್ಲಿ ಶಾಂತಿ, ನೆಮ್ಮದಿ ಕಳೆದುಕೊಂಡಿದ್ದೇವೆ. ಮನಃಶಾಂತಿ ಪುನರ್ ಭರಿಸುವ ಶಕ್ತಿ ಮಠಗಳಿಗೆ ಇದೆ. 23 ತಿಂಗಳು ತಪಸ್ಸು ಕೈಗೊಂಡು ಶ್ರೀಗಳು ತಮ್ಮ ದೇಹವನ್ನು ದಂಡಿಸಿಕೊಂಡಿದ್ದಾರೆ. ಇದೆ ರೀತಿ ಸಾಕಷ್ಟು ಭಾರಿ ಅನುಷ್ಠಾನ ಕೈಗೊಂಡಿದ್ದಾರೆ" ಎಂದರು.
ಹೇಗಿರುತ್ತೆ ಸುದೀರ್ಘ ಅನುಷ್ಠಾನ?
ಗೋಣಿಬೀಡಿನ ಶೀಲ ಸಂಪಾದನಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ತಪೋನುಷ್ಠಾನ ದೇಶಾದ್ಯಂತ ಪ್ರಖ್ಯಾತಿ ಪಡೆದಿದೆ. ಮಠದ 19ನೇ ಗುರುಗಳಾಗಿರುವ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರಿಗೆ ಒಮ್ಮೆ ಋಷಿ ಮುನಿಯಂತಿದ್ದ ಸ್ವಾಮೀಜಿಯೊಬ್ಬರು ಪ್ರತ್ಯಕ್ಷರಾಗಿ ತಪೋನುಷ್ಠಾನ ಕೈಗೊಳ್ಳುವಂತೆ ಸೂಚಿಸಿದ್ದರು. ಮಠದ ಪಕ್ಕದ ತಿಪ್ಪೆಯ ಅಡಿಯಲ್ಲಿ ಯೋಗ ಮಂದಿರವಿದ್ದು, ಅಲ್ಲಿ ಅನುಷ್ಠಾನ ಕೈಗೊಳ್ಳುವಂತೆ ಋಷಿ ಮುನಿ ಹೇಳಿದ್ದರು. ಆ ಋಷಿ ಮುನಿ ಈ ಮಠದ ಹಿಂದಿನ ಗುರುಗಳಾಗಿದ್ದ ಶಿವೈಕ್ಯ ಶ್ರೀ ಸಿದ್ಧವೀರ ಮಹಾಸ್ವಾಮೀಜಿ ಎಂದು ನಂಬಲಾಗಿದೆ.
ಯೋಗ ಮಂದಿರದ ಕುರುಹು ಪತ್ತೆ
ತಿಪ್ಪೆಯನ್ನು ತೆಗೆಸಿ ಶೋಧಿಸಿದಾಗ ನೆಲಮಾಳಿಗೆಯಲ್ಲಿ ಯೋಗ ಮಂದಿರದ ಕುರುಹು ಕಂಡು ಬಂದಿತ್ತು. ಇದನ್ನು ಸ್ವಚ್ಛಗೊಳಿಸಿ, ಅದೇ ಯೋಗ ಮಂದಿರದಲ್ಲಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ತಪೋನುಷ್ಠಾನ ಮಾಡುತ್ತಿದ್ದಾರೆ. ವರ್ಷಾನುಗಟ್ಟಲೆ ಅನುಷ್ಠಾನ ಕೈಗೊಳ್ಳುವ ಶ್ರೀಗಳು ಈ ಅವಧಿಯಲ್ಲಿ ನೆಲಮಾಳಿಗೆಯಿಂದ ಹೊರ ಬರುವುದಿಲ್ಲ. ಸೂರ್ಯನ ಕಿರಣ ಮೈ ಸೋಕದಂತೆ ನೋಡಿಕೊಳ್ಳುತ್ತಾರೆ. ಅನ್ನಾಹಾರ ಸೇವಿಸುವುದಿಲ್ಲ. ಸ್ವಲ್ಪ ತರಕಾರಿ, ಒಣ ಹಣ್ಣುಗಳನ್ನು ಮಾತ್ರ ಸೇವಿಸುತ್ತಾರೆ.
ಯಾವ ಭಕ್ತರನ್ನು ಭೇಟಿ ಮಾಡಲ್ಲ
ಈ ವೇಳೆ ಶ್ರೀಗಳು ಒಬ್ಬಿಬ್ಬರು ಶಿಷ್ಯರ ಹೊರತು ಬೇರಾವುದೆ ಭಕ್ತರನ್ನು ಭೇಟಿಯಾಗುವುದಿಲ್ಲ. ಭಕ್ತರು ಪತ್ರದ ಮೂಲಕ ತಮ್ಮ ನೋವು, ಬೇಡಿಕೆ ಹೇಳಿಕೊಳ್ಳಬಹುದು. ಶ್ರೀಗಳು ಭಕ್ತರ ಬೇಡಿಕೆ ಈಡೇರಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸಿದರೆ ಅವೆಲ್ಲವು ಈಡೇರಲಿದೆ ಎಂಬ ನಂಬಿಕೆ ಇದೆ. ಈ ಬಾರಿ ಶ್ರೀಗಳು 23 ತಿಂಗಳು ಅನುಷ್ಠಾನ ಕೈಗೊಂಡಿದ್ದಾರೆ. ಈ ಹಿಂದೆ ಮೂರು ವರ್ಷ ತಪೋನುಷ್ಠಾನ ಮಾಡಿದ್ದರು.