ದೇವಸ್ಥಾನದಲ್ಲಿ ನಿಧಿ ಶೋಧ ಮಾಡುತ್ತಿದ್ದ ಅರ್ಚಕ ಸಮೇತ ಐವರ ಬಂಧನ
ಶಿವಮೊಗ್ಗ, ಫೆಬ್ರವರಿ 28: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆವಿನಹಳ್ಳಿ ಗ್ರಾಮದ ಬಡಗೋಡಿನ ವೀರಭದ್ರೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ನಿಧಿ ಶೋಧನೆ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ ಗ್ರಾಮಾಂತರ ಠಾಣಾ ಪೊಲೀಸರು ದೇವಸ್ಥಾನ ಅರ್ಚಕ ಸಮೇತ ಐವರನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ.
ಬಡಗೋಡಿಯ ವೀರಭದ್ರೇಶ್ವರ ದೇವಸ್ಥಾನದ ಅರ್ಚಕ ಮಲ್ಲಿಕಾರ್ಜುನಯ್ಯ, ಬರದವಳ್ಳಿಯ ಹಾಲಸ್ವಾಮಿ, ಶಿರಸಿಯ ಸೂರಜ್, ರಘುನಾಥ್ ಮತ್ತು ಸಾಗರದ ಭಾಸ್ಕರ್ ಬಂಧಿತ ಆರೋಪಿಗಳು. ಇದರ ಜೊತೆಗೆ ಆರೋಪಿಗಳು ನಿಧಿ ಶೋಧಕ್ಕೆ ಬಳಸಿದ್ದ ದ್ವಿಚಕ್ರ ವಾಹನ, ಕಾರು, ನೆಲ ಅಗಿಯಲು ತಂದಿದ್ದ ಸಾಮಾಗ್ರಿ, ಲೋಹ ಪತ್ತೆಯ ಯಂತ್ರಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಡಗೋಡಿ ಗ್ರಾಮದ ದೇವಸ್ಥಾನದ ಹಿಂಭಾಗ ನಿಧಿ ಶೋಧ ಕಾರ್ಯದಲ್ಲಿ ಕೆಲವರು ತೊಡಗಿರುವುದನ್ನು ಗ್ರಾಮಸ್ಥರು ಗಮನಿಸಿದ್ದಾರೆ. ಈ ವೇಳೆ ಆರೋಪಿಗಳು ವಾಹನದಲ್ಲಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾರೆ.

ಆದರೆ ಗ್ರಾಮಸ್ಥರು ಆರೋಪಿಗಳನ್ನು ಸ್ಥಳದಲ್ಲಿಯೇ ಹಿಡಿದಿಟ್ಟು ಪೊಲೀಸರಿಗೆ ಒಪ್ಪಿಸಲು ಯಶಸ್ವಿಯಾಗಿದ್ದಾರೆ. ನಿಧಿ ಶೋಧನೆಯಲ್ಲಿ ತೊಡಗಿದ್ದ ಐವರು ಆರೋಪಿಗಳ ವಿರುದ್ಧ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.












Click it and Unblock the Notifications