ಶಿವಮೊಗ್ಗ ಜಿಲ್ಲೆಯಲ್ಲಿ ನಿರಂತರ ಮಳೆ, ಹಲವು ಮನೆಗಳಿಗೆ ಹಾನಿ
ಶಿವಮೊಗ್ಗ, ಜುಲೈ 8: ಜಿಲ್ಲೆಯಾದ್ಯಂತ ನಿರಂತರ ಮಳೆ ಸುರಿಯುತ್ತಿದೆ. ಹಳ್ಳಗಳು, ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಕೃಷಿ ಚಟುವಟಿಕೆಯು ಬಿರುಸು ಪಡೆದುಕೊಂಡಿದೆ. ಈ ಮಧ್ಯೆ ಹಲವು ಕಡೆ ಮಳೆಯಿಂದ ಹಾನಿ ಉಂಟಾಗಿದೆ. ಹೊಸನಗರ, ಸಾಗರ, ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಜೋರು ಮಳೆ ಆಗುತ್ತಿದ್ದು, ಮೂರು ದಿನಗಳಿಂದ ಈ ತಾಲ್ಲೂಕುಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯಾದ್ಯಂತ ಐದು ದಿನ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಎರಡು ದಿನ ಆರೆಂಜ್ ಅಲರ್ಟ್ ನೀಡಲಾಗಿದೆ. ಉಳಿದ ಮೂರು ದಿನ ಹಳದಿ ಅಲರ್ಟ್ ಘೋಷಿಸಲಾಗಿದೆ.
ರಾಯಚೂರು: 'ಮಹಾ'ಮಳೆ, ನಾರಾಯಣಪುರ ಜಲಾಶಯ ಭಾಗದ ನಿವಾಸಿಗಳಿಗೆ ಪ್ರವಾಹ ಭೀತಿ
ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಜಲಾಶಯಗಳ ಒಳ ಹರಿವು ಹೆಚ್ಚಾಗಿದ್ದು ನೀರಿನ ಮಟ್ಟವು ಏರಿಕೆ ಆಗುತ್ತಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಪ್ರಸ್ತುತ 56 ಸಾವಿರ ಕ್ಯೂಸೆಕ್ ಒಳಹರಿವು ಇದ್ದು, ನೀರಿನ ಮಟ್ಟ 1772.60 ಅಡಿಗೆ ಏರಿಕೆಯಾಗಿದೆ. ಭದ್ರಾ ಜಲಾಶಯಕ್ಕೆ 29 ಸಾವಿರ ಕ್ಯೂಸೆಕ್ ಒಳ ಹರಿವು ಇದ್ದು, ನೀರಿನ ಮಟ್ಟ 166 ಅಡಿಗೆ ತಲುಪಿದೆ. ತುಂಗಾ ಜಲಾಶಯಕ್ಕೆ 48209 ಕ್ಯೂಸೆಕ್ ಒಳಹರಿವಿದ್ದು, 54065 ಕ್ಯೂಸೆಕ್ ಹೊರಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 588.24 ಅಡಿ ಇದ್ದು, ಇಂದಿನ ಮಟ್ಟ 586.51 ಅಡಿಯಿದೆ.
ಶಿಕಾರಿಪುರ ಅಂಜನಾಪುರ ಜಲಾಶಯ ಭರ್ತಿ ಆಗಿದ್ದು, ಈಗಾಗಲೇ ಕೊಡಿ ಬಿದ್ದಿದೆ. ಇದು ಶಿಕಾರಿಪುರದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಇನ್ನು, ತುಂಗಾ ಜಲಾಶಯ ಭರ್ತಿಯಾಗಿದ್ದು, ಒಳ ಹರಿವಿನಷ್ಟೆ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಪ್ರಸ್ತುತ, 55 ಸಾವಿರ ಕ್ಯೂಸೆಕ್ ನೀರನ್ಕು ಹೊಳೆಗೆ ಹರಿಸಲಾಗುತ್ತಿದೆ.
ತೀರ್ಥಹಳ್ಳಿಯ ಪ್ರಸಿದ್ಧ ಮಂಟಪಗಳ ಮುಳುಗಡೆ
ತುಂಗಾ ನದಿಯಲ್ಲಿ ನಿರಿನ ಹರಿವು ಹೆಚ್ಚಳವಾದ ಹಿನ್ನೆಲೆ ಶಿವಮೊಗ್ಗ ಮತ್ತು ತೀರ್ಥಹಳ್ಳಿಯ ಪ್ರಸಿದ್ಧ ಮಂಟಪಗಳು ಬಹುತೇಕ ಮುಳುಗಿವೆ. ಶಿವಮೊಗ್ಗದಲ್ಲಿ ತುಂಗಾ ನದಿ ದಂಡೆ ಮೇಲಿರುವ ಕೋರ್ಪಲಯ್ಯ ಛತ್ರ ಮಂಟಪ ಬಹುತೇಕ ಮುಳುಗಿದೆ. ಜನರು ಮಂಟಪ ಮುಳುಗಿರುವುದನ್ನು ನೋಡುವುದಕ್ಕೆ ಹೊಳೆ ದಂಡೆಗೆ ಆಗಮಿಸುತ್ತಿದ್ದಾರೆ. ಇನ್ನು, ತೀರ್ಥಹಳ್ಳಿಯಲ್ಲಿ ತುಂಗಾ ನದಿ ಮಧ್ಯದಲ್ಲಿರುವ ರಾಮ ಮಂಟಪದ ಮೇಲ್ಭಾಗದವರೆಗೂ ನೀರು ಬಂದಿದೆ.
ಜುಲೈ 13ರವೆರೆಗೆ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಎಚ್ಚರಿಕೆ
ಜಿಲ್ಲೆಯ ವಿವಿಧಡೆ ಮನೆಗಳಿಗೆ ಹಾನಿ
ಭಾರಿ ಮಳೆಯಿಂದ ಶಿವಮೊಗ್ಗ ಜಿಲ್ಲೆಯ ವಿವಿಧಡೆ ಮನೆಗಳಿಗೆ ಹಾನಿ ಉಂಟಾಗಿದೆ. ಶಿವಮೊಗ್ಗದ ಅಮೀರ್ ಅಹಮದ್ ಕಾಲೋನಿಯಲ್ಲಿ ಮನೆಯೊಂದರ ಗೋಡೆ ಕುಸಿದಿದೆ. ಶಿಕಾರಿಪುರದ ಶೀರಳ್ಳಿ ತಾಂಡದ ಸೋಮುನಾಯ್ಕ ಎಂಬುವವರ ಮನೆ ಛಾವಣಿ ಕುಸಿದಿದೆ. ಸಾಗರದ ನೆಹರೂ ನಗರದಲ್ಲಿ ನೂರ್ ಜಾನ್ ಮತ್ತು ಪರ್ವೀಜ್ ಎಂಬುವವರ ಮನೆ ಕುಸಿದಿವೆ. ಶಾಸಕ ಹರತಾಳು ಹಾಲಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಪರಿಹಾರದ ಭರವಸೆ ನೀಡಿದ್ದಾರೆ. ಜಿಲ್ಲೆಯ ವಿವಿಧೆಡೆ ಮನೆಗಳು, ಕಟ್ಟಡಗಳಿಗೆ ಹಾನಿ ಉಂಟಾಗಿದ್ದು, ಜಿಲ್ಲಾಡಳಿತ ನಷ್ಟದ ಅಂದಾಜು ಮಾಡುತ್ತಿದೆ.
ಆಸ್ತಿಪಾಸ್ತಿಗೆ ಹಾನಿ ಉಂಟಾಗುವ ಭೀತಿ
ಭಾರಿ ಮಳೆಗೆ ಮರಗಳು ಧರೆಗುರುಳಿದ ವರದಿಯಾಗಿದೆ. ತೀರ್ಥಹಳ್ಳಿಯ ಆಗುಂಬೆಯಲ್ಲಿ ವಿವ್ ಪಾಯಿಂಟ್ನ ಕೆಳ ಭಾಗದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಹಾಗಾಗಿ ವಾಹನ ಸಂಚಾರಕ್ಕೆ ಯಾವುದೆ ಅಡ್ಡಿ ಆಗಿಲ್ಲ. ಆದರೆ ಜಿಲ್ಲೆಯಲ್ಲಿ ಮಳೆ ಪ್ರಮಾಣ ಇನ್ನಷ್ಟು ಹೆಚ್ಚಳವಾಗಬಹುದೆಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ್ದು, ಜಿಲ್ಲೆಯಲ್ಲಿ ಮತ್ತಷ್ಟು ಆಸ್ತಿಪಾಸ್ತಿಗೆ ಹಾನಿ ಉಂಟಾಗುವ ಭೀತಿ ಎದುರಾಗಿದೆ.
ವಿವಿಧ ಜಿಲ್ಲೆಗಳಲ್ಲಿ ಮಳೆ
ಶಿವಮೊಗ್ಗ ಅಲ್ಲದೆ, ಕರಾವಳಿ ಕರ್ನಾಟಕದ ಎಲ್ಲಾ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಉತ್ತರ ಒಳನಾಡಿನ ಬೀದರ್, ಕಲ್ಬುರ್ಗಿ, ವಿಜಯಪುರ, ಯಾದಗಿರಿ ಮತ್ತು ಬೆಳಗಾವಿ ಜಿಲ್ಲೆಗಳು, ದಕ್ಷಿಣ ಒಳನಾಡಿನ ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಕರ್ನಾಟಕ ಮತ್ತು ಉತ್ತರ ಒಳ ಕರ್ನಾಟಕದಲ್ಲಿ ಮಿಂಚು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.