ಮಂಗನಕಾಯಿಲೆಗೆ ಕಾರಣಗಳು, ಮುಂಜಾಗ್ರತಾ ಕ್ರಮಗಳು
ಶಿವಮೊಗ್ಗ, ಜನವರಿ 07 : ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಂಗನಕಾಯಿಲೆ ಕಾಣಿಸಿಕೊಂಡಿದೆ. ಸಾಗರ ತಾಲೂಕಿನಲ್ಲಿ 6 ಜನರು ಕಾಯಿಲೆಯಿಂದಾಗಿ ಮೃತಪಟ್ಟಿದ್ದಾರೆ. ಆರೋಗ್ಯ ಇಲಾಖೆ ಕಾಯಿಲೆ ಹರಡದಂತೆ ತಡೆಯಲು ಕ್ರಮಗಳನ್ನು ಕೈಗೊಂಡಿದೆ.
ಸಾಗರ ತಾಲೂಕಿನ ಅರಳಗೋಡು ಗ್ರಾಮದಲ್ಲಿ ಮಂಗನಕಾಯಿಲೆಯಿಂದಾಗಿ 18 ವರ್ಷದ ಶ್ವೇತಾ ಎಂಬುವವರು ಶನಿವಾರ ಮೃತಪಟ್ಟಿದ್ದಾರೆ. ಇದೇ ಗ್ರಾಮದಲ್ಲಿಇದುವರೆಗೂ 6 ಜನರು ಮೃತಪಟ್ಟಿದ್ದು, ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಗ್ಯ ಸಚಿವ ಶಿವರಾಜ್ ಪಾಟೀಲ್ ಮಂಗನಕಾಯಿಲೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದರು. 'ಮಂಗನಕಾಯಿಲೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಒಟ್ಟು 12 ಜನರಿಗೆ ಕಾಯಿಲೆ ತಗುಲಿದೆ. ಈಗಾಗಲೇ 2 ಬಾರಿ ಲಸಿಕೆ ಹಾಕಲಾಗಿದೆ' ಎಂದು ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಸಹ ಸಾಗರದ ಅರಳಗೋಡು ಗ್ರಾಮಕ್ಕೆ ಭೇಟಿ ನೀಡಿ ಜನರ ಜೊತೆ ಸಭೆ ನಡೆಸಿದ್ದಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕಾಯಿಲೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಮಂಗನಕಾಯಿಲೆ ಹರಡದಂತೆ ತಡೆಯುವುದು ಹೇಗೆ? ಇಲ್ಲಿದೆ ಮಾಹಿತಿ...

ಮಂಗನಕಾಯಿಲೆ ಎಂಬ ಹೆಸರು ಏಕೆ?
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರು ಕಾಡಿನಲ್ಲಿ 1956ರಲ್ಲಿ ಈ ಕಾಯಿಲೆ ಪತ್ತೆ ಆಯಿತು. ಆದ್ದರಿಂದ, ಇದಕ್ಕೆ ಕ್ಯಾಸನೂರು ಕಾಯಿಲೆ ಎಂಬ ಹೆಸರು ಇದೆ. ಮಂಗನಿಂದ ಈ ಕಾಯಿಲೆ ಬರುವುದರಿಂದ ಮಂಗನಕಾಯಿಲೆ ಎಂದು ಕರೆಯಲಾಗುತ್ತದೆ.
ಇದು ಕಾಡಿನಲ್ಲಿರುವ ಉಣ್ಣೆಗಳು ಕಚ್ಚುವುದರಿಂದ ಮಾತ್ರ ಬರುತ್ತದೆ. ಈ ಕಾಯಿಲೆಯು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಕಾಡಿನಲ್ಲಿ ಮಂಗಗಳು ಸಾಯುವುದೇ ಈ ಕಾಯಿಲೆಯ ಮುನ್ಸೂಚನೆಯಾಗಿದೆ.

ರೋಗದ ಲಕ್ಷಣಗಳು
* ಸತತ ಎಂಟು-ಹತ್ತು ದಿನಗಳ ತನಕ ಬಿಡದೇ ಬರುವ ಜ್ವರ
* ವಿಪರೀತ ತಲೆನೋವು, ಸೋಂಟ ನೋವು, ಕೈಕಾಲು ನೋವು, ನಿಶ್ಯಕ್ತಿ, ಕಣ್ಣು ಕೆಂಪಾಗುವುದು
* ಜ್ವರ ಬಂದ 2 ವಾರದ ನಂತರ ಮೂಗು, ಬಾಯಿ, ಗುದದ್ವಾರದಿಂದ ರಕ್ತಸ್ರಾವವಾಗಬಹುದು
* ಸನ್ನಿವಾತ/ಮೆದುಳಿನ ಹೊದಿಕೆಯ ಜ್ವರ ಲಕ್ಷಣಗಳು
* ರೋಗದ ತೀವ್ರತೆಯು ರೋಗಿಯ ಪ್ರತಿರೋಧಕ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ

ಮುಂಜಾಗ್ರತಾ ಕ್ರಮಗಳು
* ವಾಸ ಸ್ಥಳದ ಸುತ್ತಮುತ್ತ/ಮನೆ ಸಮೀಪದ ಕಾಡಿನಲ್ಲಿ ಮಂಗ ಸತ್ತಿರುವುದು ತಿಳಿದೊಡನೆ ಸ್ಥಳೀಯ ಆರೋಗ್ಯಾಧಿಕಾರಿಗಳು/ ಆರೋಗ್ಯ ಕಾರ್ಯಕರ್ತರಿಗೆ ತಿಳಿಸುವುದು.
* ಮಂಗ ಸಾಯುತ್ತಿರುವ ಕಾಡಿನಲ್ಲಿ ಸಂಚಾರ ಮಾಡುವಾಗ ಮೈತುಂಬಾ ಬಟ್ಟೆ ಧರಿಸಿರಬೇಕು. ಆರೋಗ್ಯ ಇಲಾಖೆಯಿಂದ ಉಚಿತವಾಗಿ ವಿತರಣೆ ಮಾಡುವ ಡಿ.ಎಂ.ಪಿ ತೈಲವನ್ನು ಕೈ-ಕಾಲುಗಳಿಗೆ ಲೇಪಿಸಿಕೊಂಡು ಕಾಡಿಗೆ ಹೋಗಬೇಕು.
* ಕಾಡಿನಿಂದ ಬಂದ ನಂತರ ಬಿಸಿ ನೀರಿನಿಂದ ಸೋಪು ಹಚ್ಚಿ ಸ್ನಾನ ಮಾಡಬೇಕು. ಬಟ್ಟೆಗಳನ್ನು ಬಿಸಿ ನೀರಿನಿಂದ ಸೋಪು ಹಚ್ಚಿ ತೊಳೆಯಬೇಕು.
* ಸತ್ತ ಮಂಗದ ಮರಣೋತ್ತರ ಪರೀಕ್ಷೆಗಾಗಿ ವಿ.ಡಿ.ಎಲ್ ಕಳಿಸುವುದು. ಕಳೆ ಬರದ ಸುತ್ತಮುತ್ತ ಇರುವ ಉಣ್ಣೆಗಳ ಸಂಗ್ರಹಣೆ ಮಾಡುವುದು. ಸತ್ತ ಮಂಗವನ್ನು ಸುಡುವುದು ಹಾಗೂ 50 ಮೀಟರ್ ಪರಿಧಿಯಲ್ಲಿ ಮೆಲಾಥಿಯನ್ ದ್ರಾವಣ ಸಿಂಪಡಿಸಲು ಆರೋಗ್ಯ ಇಲಾಖೆಗೆ ಮನವಿ ಮಾಡುವುದು.

ಚಿಕಿತ್ಸೆಯ ಕ್ರಮ ಹೇಗೆ?
* ಮಂಗನ ಕಾಯಿಲೆಗೆ ಔಷಧಿ ಇದೆ
* ಈ ಲಸಿಕೆಯಿಂದ ದುಷ್ಪರಿಣಾಮವಿಲ್ಲ
* ಲಸಿಕೆಯನ್ನು ಆರೋಗ್ಯವಂತನಾದ ವ್ಯಕ್ತಿ ಸರಿಯಾದ ಪ್ರಮಾಣದಲ್ಲಿ ಆಗಸ್ಟ್ ಮೊದಲ ಮತ್ತು ಒಂದು ತಿಂಗಳ ಅಂತರದಲ್ಲಿ 2 ಸಲ ಪಡೆಯುವುದು. 2ನೇ ಚುಚ್ಚುಮದ್ದು ಪಡೆದ 30 ದಿನಗಳ ನಂತರ ನಿರೋಧಕ ಶಕ್ತಿ ಬರುತ್ತದೆ.
* ಪ್ರತಿ ವರ್ಷ ವರ್ಧಕ booster ಬಲ ವರ್ಧಕ ಲಸಿಕೆಯನ್ನು ಹಾಕಿಸಿಕೊಳ್ಳಬೇಕು
* ಗರ್ಭಿಣಿ ಸ್ತ್ರಿಯರು ಈ ಚುಚ್ಚುಮದ್ದು ಹಾಕಿಸಿಕೊಳ್ಳಬಾರದು.

ಗಮನಿಸಬೇಕಾದ ಅಂಶಗಳು
* ಈ ಕಾಯಿಲೆಗೆ ಲಸಿಕೆ ಹೊರತು ಪಡಿಸಿ ನಿರ್ಧಿಷ್ಟವಾದ ಔಷಧಿ ಇರುವುದಿಲ್ಲ
* ಕಾಯಿಲೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹರಡುತ್ತದೆ. ಆದ್ದರಿಂದ ನಿರ್ಧಿಷ್ಟ ಸ್ಥಳಕ್ಕೆ ಕಾಯಿಲೆ ಬರುವುದಾಗಿ ಹೇಳುವುದು ಅಸಾಧ್ಯ. ಆದ್ದರಿಂದ, ಎಲ್ಲರೂ ಚುಚ್ಚು ಮದ್ದು ಹಾಕಿಸಿಕೊಳ್ಳಬೇಕು.












Click it and Unblock the Notifications