ಪ್ರಣಬ್ ಮುಖರ್ಜಿ ನಿಧನ: ಸಂಸದ ಬಿ.ವೈ ರಾಘವೇಂದ್ರರಿಂದ ಸಂತಾಪ
ಶಿವಮೊಗ್ಗ, ಸೆಪ್ಟೆಂಬರ್ 1: ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
2012 ರಿಂದ 2017 ರವರೆಗೆ ಭಾರತದ 13ನೇ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ್ದ ಪ್ರಣಬ್ ಮುಖರ್ಜಿ ಅವರ ಸೇವೆ ಸ್ಮರಣೀಯವಾಗಿದೆ ಎಂದು ತಿಳಿಸಿದರು.
Breaking News: ಮಾಜಿ ರಾಷ್ಟ್ರಪತಿ, ಪ್ರಣಬ್ ಮುಖರ್ಜಿ ವಿಧಿವಶ
1969ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ಪ್ರಣಬ್ ಮುಖರ್ಜಿ ಅವರು, ಸತತವಾಗಿ ಲೋಕಸಭೆ ಮತ್ತು ರಾಜ್ಯಸಭೆಗೆ ಆಯ್ಕೆಯಾಗಿದ್ದರು ಮಾತ್ರವಲ್ಲ, ವಿದೇಶಾಂಗ, ವಾಣಿಜ್ಯ, ಹಣಕಾಸು ಸೇರಿದಂತೆ ಅನೇಕ ಖಾತೆಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸಿದ್ದರು.
ಶ್ರೀಯುತರಿಗೆ 2018 ರಲ್ಲಿ ಪದ್ಮವಿಭೂಷಣ, 2019ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವ "ಭಾರತರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು ಎಂದು ಸಂಸದರು ನೆನೆದಿದ್ದಾರೆ.
ಪ್ರಣಬ್ ಮುಖರ್ಜಿ ಅವರ ನಿಧನದಿಂದಾಗಿ ಶ್ರೇಷ್ಠ ನೇತಾರರನ್ನು ಕಳೆದುಕೊಂಡ ಭಾರತಕ್ಕೆ ಅನಾಥ ಪ್ರಜ್ಞೆ ಉಂಟಾದಂತಾಗಿದೆ ಎಂದ ರಾಘವೇಂದ್ರ ಅವರು, ತೀವ್ರ ಸಂತಾಪ ಸೂಚಿಸಿ ಮೃತರ ನಿಧನದಿಂದ ಅವರ ಕುಟುಂಬ ವರ್ಗದವರಿಗೆ ನೋವನ್ನು ಭರಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಸಂತಾಪ ಸಂದೇಶದಲ್ಲಿ ಪ್ರಾರ್ಥಿಸಿದ್ದಾರೆ.