ಶಿವಮೊಗ್ಗ : ಹೋರಿ ಬೆದರಿಸುವ ಸ್ಪರ್ಧೆ ತಡೆದ ಪೊಲೀಸರು
ಶಿವಮೊಗ್ಗ, ನವೆಂಬರ್ 09 : ಅನುಮತಿ ಇಲ್ಲದಿದ್ದರೂ ಹೋರಿ ಬೆದರಿಸುವ ಹಾಗೂ ಹೋರಿ ಹಿಡಿಯುವ ಸ್ಪರ್ಧೆ ನಡೆಸಲು ಮುಂದಾದ ಘಟನೆ ತ್ಯಾಗರ್ತಿಯಲ್ಲಿ ನಡೆದಿದೆ. ಪೊಲೀಸರು ಮಧ್ಯೆ ಪ್ರವೇಶಿಸಿ ಸ್ಪರ್ಧೆಗೆ ಕಡಿವಾಣ ಹಾಕಿದರು.
ತ್ಯಾಗರ್ತಿ ಗ್ರಾಮದಲ್ಲಿ ಶುಕ್ರವಾರ ದೀಪಾವಳಿ ಪ್ರಯುಕ್ತ ಪ್ರತಿ ವರ್ಷದಂತೆ ಸಾಂಪ್ರದಾಯಿಕವಾಗಿ ಆಚರಿಸುವ ಹೋರಿ ಬೆದರಿಸುವ ಹಾಗೂ ಹೋರಿ ಹಿಡಿಯುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನೂರಾರು ಸಂಖ್ಯೆಯಲ್ಲಿ ರೈತರು ಸುತ್ತಮುತ್ತಲ ಹಳ್ಳಿಗಳಿಂದ ತಮ್ಮ ಹೋರಿಗಳನ್ನು ಹಿಡಿದುಕೊಂಡು ಆಗಮಿಸಿದ್ದರು.
ಶಿವಮೊಗ್ಗ : ಹೋರಿ ಬೆದರಿಸುವ ಸ್ಪರ್ಧೆ, ಪೊಲೀಸರ ಮೇಲೆ ಕಲ್ಲು ತೂರಾಟ
ಹೋರಿ ಓಡಿಸುವ ಕಾರ್ಯಕ್ರಮಕ್ಕೆ ಸರ್ಕಾರ ವತಿಯಿಂದ ಯಾವುದೇ ಅನುಮತಿ ನೀಡದಿದ್ದರಿಂದ ಪೊಲೀಸರು ಕಾರ್ಯಕ್ರಮ ನಡೆಸದಂತೆ ಸೂಚನೆ ನೀಡಿದರು. ಹೈಕೋರ್ಟ್ ಆದೇಶದ ಪ್ರಕಾರ ಜಿಲ್ಲಾಧಿಕಾರಿಗಳ ಅನುಮತಿ ಇಲ್ಲದೇ ಇಂತಹ ಅಪಾಯಕಾರಿ ಕ್ರೀಡೆಗಳನ್ನು ನೆಡೆಸಲು ಅವಕಾಶ ಇಲ್ಲ ಎಂದು ಗ್ರಾಮಸ್ಥರಿಗೆ ತಿಳಿಸಿದರು.
ಚಿತ್ರಗಳು : ಹಾವೇರಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ
ಕಾರ್ಯಕ್ರಮ ಆರಂಭದ ಸ್ಥಳದಲ್ಲಿ ಮೊದಲು ಇಬ್ಬರು ಪೊಲೀಸರುರ ಮಾತ್ರ ಇದ್ದರು. ಆದ್ದರಿಂದ, ಗ್ರಾಮಸ್ಥರು ಅವರ ಸೂಚನೆಯನ್ನು ನಿರ್ಲಕ್ಷಿಸಿ ನಮ್ಮ ಸಂಪ್ರದಾಯದ ಕ್ರೀಡೆಯನ್ನು ನಿಲ್ಲಿಸಲು ನೀವ್ಯಾರು ಎಂದು ಆಕ್ರೋಶ ವ್ಯಕ್ತಪಡಿಸಿ, ಹೋರಿ ಬೆದರಿಸುವ ಕಾರ್ಯಕ್ರಮ ಪ್ರಾರಂಭಿಸಿದರು.
ಈ ಸಮಯದಲ್ಲಿ ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ಉಂಟಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಯಿತು. ತಕ್ಷಣ ಸಬ್ಇನ್ಸ್ಪೆಕ್ಟರ್ ಬಸವರಾಜ್ ಕಾಮನಬೈಲ್, ಇನ್ಸ್ಪೆಕ್ಟರ್ ಮಂಜುನಾಥ್ ಹೆಚ್ಚುವರಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಹತೋಟಿಗೆ ತಂದರು.
ಹೋರಿ ಬೆದರಿಸಿ, ಹೋರಿ ಹಿಡಿಯುವ ಕಾರ್ಯಕ್ರಮಕ್ಕೆ ತಡೆ ಹಾಕಿದರು. ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಗೆ ನುಗ್ಗಿ ನಮ್ಮ ಸಾಂಪ್ರದಾಯಿಕ ಕ್ರೀಡೆಯನ್ನು ನೆಡೆಸಲು ಅನುಮತಿ ಕೊಡಿಸುವಂತೆ ಒತ್ತಾಯಿಸಿ ಅಧ್ಯಕ್ಷರು ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು.