ಶಿವಮೊಗ್ಗ; ಮಾಸ್ಕ್ ದಂಡ ಹಾಕಲು ಬಂದ ಪಾಲಿಕೆ ಅಧಿಕಾರಿಗಳಿಗೆ ಜನರ ತರಾಟೆ!

ಶಿವಮೊಗ್ಗ, ಜನವರಿ 09; ಮಾಸ್ಕ್ ಧರಿಸದವರಿಗೆ ದಂಡ ಹಾಕಲು ಬಂದ ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಜನರು ಕ್ಲಾಸ್ ತೆಗೆದುಕೊಂಡಿದ್ದಾರೆ. ಜನ ರೊಚ್ಚಿಗೇಳುತ್ತಿದ್ದಂತೆ ಪಾಲಿಕೆ ಅಧಿಕಾರಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿ ಇವತ್ತು ಈ ಘಟನೆ ಸಂಭವಿಸಿದೆ.

ಕೋವಿಡ್ ಮೂರನೇ ಅಲೆ, ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಮಾಸ್ಕ್ ಫೈನ್ ಪುನಾರಂಭ ಮಾಡಿದ್ದಾರೆ. ನಗರದ ಪ್ರಮುಖ ಕಡೆಗಳಲ್ಲಿ ಮಾಸ್ಕ್ ಧರಿಸಿದವರನ್ನು ತಡೆದು, ದಂಡ ವಿಧಿಸುತ್ತಿದ್ದಾರೆ. ಇವತ್ತು ಗಾಂಧಿ ಬಜಾರ್‌ನಲ್ಲಿ ಪಾಲಿಕೆ ಅಧಿಕಾರಿಗಳು ದಂಡ ವಿಧಿಸಲು ತೆರಳಿದ್ದಾಗ, ಜನ ತಿರುಗಿ ಬಿದ್ದಿದ್ದಾರೆ.

ಪಾಲಿಕೆ ಅಧಿಕಾರಿಗಳ ತಂಡ ಗಾಂಧಿ ಬಜಾರ್‌ನಲ್ಲಿ ಮಾಸ್ಕ್ ಕಾರ್ಯಾಚರಣೆ ನಡೆಸುತ್ತಿತ್ತು. ತರಕಾರಿ ಮಾರುಕಟ್ಟೆ ಬಳಿ ವ್ಯಕ್ತಿಯೊಬ್ಬರನ್ನು ತಡೆದು ಮಾಸ್ಕ್ ಧರಿಸದ್ದಕ್ಕೆ ದಂಡ ವಸೂಲಿಗೆ ನಿಂತಿದ್ದರು. ಈ ವೇಳೆ ಆತ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ. ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಳ್ಳಲು ಆರಂಭಿಸಿದ.

Shivamogga

"ತರಕಾರಿ ತರಲು ನೂರಿನ್ನೂರು ರುಪಾಯಿ ತಂದಿರುತ್ತೇವೆ. ಅದನ್ನೂ ಇವರು ಕಿತ್ತುಕೊಂಡು ಹೋದರೆ ನಾವೇನು ಮಾಡಬೇಕು?. ರಾಜಕಾರಣಿಗಳೆಲ್ಲ ಆರಾಮಾಗಿ ಓಡಿಕೊಂಡಿದ್ದಾರೆ. ಅವರಿಗೆ ದಂಡ ಹಾಕಿ" ಎಂದು ಏರು ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಗುಂಪುಗೂಡಿದ ಜನರು; ಪಾಲಿಕೆ ಅಧಿಕಾರಿಗಳು ಮತ್ತು ತರಕಾರಿ ಕೊಳ್ಳಲು ಬಂದಿದ್ದ ವ್ಯಕ್ತಿ ನಡುವಿನ ಮಾತಿನ ಚಕಮಕಿ ಹಿನ್ನೆಲೆ, ಜನ ಸೇರಿದರು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಆಮ್ ಆದ್ಮಿ ಪಕ್ಷದ ಮುಖಂಡ ಮನೋಹರ ಗೌಡ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

"ಬಡ ಜನರು ಮಾಸ್ಕ್ ಹಾಕದಿದ್ದರೆ ದಂಡ ಹಾಕುತ್ತೀರಲ್ಲ. ಮೇಯರ್‌ಗೆ ಕೋವಿಡ್ ಬಂದ ವಿಚಾರದಲ್ಲಿ ದೂರು ಕೊಟ್ಟಿದ್ದೇವೆ. ಏನು ಕ್ರಮ ಕೈಗೊಂಡಿದ್ದೀರ. ಅವರಿಗೊಂದು ಕಾನೂನು ಜನ ಸಾಮಾನ್ಯರಿಗೊಂದು ಕಾನೂನು ಇದೆಯಾ?" ಎಂದು ಪ್ರಶ್ನಿಸಿದರು. ಅದಲ್ಲದೆ ಮಾಸ್ಕ್ ಧರಿಸದೇ ಬಂದಿದ್ದ ವ್ಯಕ್ತಿಗೆ ಮಾಸ್ಕ್ ಹಾಕಿಕೊಂಡು ಬರುವಂತೆ ಸಲಹೆ ನೀಡಿ ಕಳುಹಿಸಿದರು.

ಇನ್ನು, ಜನರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಪಾಲಿಕೆ ಅಧಿಕಾರಿಗಳು ಸೈಲೆಂಟಾಗಿ ಕಾಲ್ಕಿತ್ತರು. ತರಕಾರಿ ಮಾರುಕಟ್ಟೆ ಬಳಿ ನಿಲ್ಲುವ ಬದಲು ರಾಮಣ್ಣ ಶ್ರೇಷ್ಠಿ ಪಾರ್ಕ್ ಕಡೆಗೆ ನಡೆದು ಹೋದರು. ಮಹಾನಗರ ಪಾಲಿಕೆಯ ನಾಲ್ವರು ಅಧಿಕಾರಿಗಳ ತಂಡ ಇವತ್ತು ಗಾಂಧಿ ಬಜಾರ್‌ನಲ್ಲಿ ಮಾಸ್ಕ್ ಕಾರ್ಯಾಚರಣೆ ನಡೆಸುತ್ತಿದ್ದರು.

ಶಿವಮೊಗ್ಗದಲ್ಲಿ ಪೊಲೀಸರ ತಪಾಸಣೆ; ವೀಕೆಂಡ್ ಕರ್ಫ್ಯೂ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯಾದ್ಯಂತ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಶಿವಮೊಗ್ಗ ನಗರದ ಪ್ರಮುಖ ಕಡೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳ ತಪಾಸಣೆ ಮಾಡುತ್ತಿದ್ದಾರೆ. ಅನಗತ್ಯವಾಗಿ ರಸ್ತೆಗಿಳಿದ ವಾಹನಗಳನ್ನು ತಡೆದು ಸೀಜ್ ಮಾಡುತ್ತಿದ್ದಾರೆ. ಮಾಸ್ಕ್ ಧರಿಸದೆ ಬಂದವರಿಗೆ ಪೊಲೀಸರು ಕೂಡ ದಂಡ ವಿಧಿಸುತ್ತಿದ್ದಾರೆ.

ಎರಡು ದಿನದ ವೀಕೆಂಡ್ ಕರ್ಫ್ಯೂಗೆ ಶಿವಮೊಗ್ಗದಲ್ಲಿ ಜನ ಉತ್ತಮವಾಗಿ ಸ್ಪಂದಿಸಿದ್ದಾರೆ. ಅಗತ್ಯ ವಸ್ತುಗಳ ಮಾರಾಟ ಮಾಡುವ ಅಂಗಡಿಗಳು, ತಳ್ಳುಗಾಡಿ ವ್ಯಾಪಾರ ಹೊರತು ಬೇರೆಲ್ಲವು ಸ್ಥಬ್ಧವಾಗಿದ್ದವು. ಜಿಲ್ಲೆಯ ಜೀವನಾಡಿಯಾಗಿರುವ ಖಾಸಗಿ ಬಸ್ ಸಂಚಾರವಿತ್ತು. ಸರ್ಕಾರದ ಆದೇಶದ ಅನುಸಾರ ಸರ್ಕಾರಿ ಸಾರಿಗೆ ಬಸ್ಸುಗಳು ಸಂಚರಿಸಿದವು. ತುರ್ತು ಮತ್ತು ಸರ್ಕಾರ ಅವಕಾಶ ಕಲ್ಪಿಸಿದ ಉದ್ದಿಮೆ, ಕಾರ್ಖಾನೆಗಳ ನೌಕರರು, ತುರ್ತು ಸಂದರ್ಭದ ಓಡಾಟ ಹೊರತು ಪ್ರಮುಖ ರಸ್ತೆಗಳಲ್ಲಿ ಜನ ಸಂಚಾರ ಕಡಿಮೆ ಇತ್ತು.

ಮತ್ತೊಂದೆಡೆ ಶಿವಮೊಗ್ಗ ಜಿಲ್ಲೆಯಲ್ಲಿ ಸಂಪೂರ್ಣ ತಗ್ಗಿದ್ದ ಕೋವಿಡ್ ಪ್ರಕರಣಗಳು ನಿಧಾನಗತಿಯಲ್ಲಿ ಏರಿಕೆಯಾಗುತ್ತಿದೆ. ಕಳೆದ ಮೂರು ದಿನದಿಂದ ಸೋಂಕಿತರ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಇದು ಜಿಲ್ಲೆಯ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+