ಶಿವಮೊಗ್ಗದಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್, ಇಬ್ಬರಿಗೆ ಕ್ವಾರಂಟೈನ್
ಶಿವಮೊಗ್ಗ, ಡಿಸೆಂಬರ್, 26: ಚೀನಾ ದೇಶದಲ್ಲಿ ಕೊರೊನ ಮತ್ತೆ ಅಬ್ಬರಿಸುತ್ತಿದೆ. ಈ ಹಿನ್ನೆಲೆ ಈಗಾಗಲೇ ಭಾರತದಾದ್ಯಂತ ಕಟ್ಟೆಚ್ಚರ ವಹಿಸಲು ಸರ್ಕಾರ ಸೂಚಿಸಿದೆ. ಈ ನಡುವೆ ಶಿವಮೊಗ್ಗದಲ್ಲಿ ಓರ್ವ ವ್ಯಕ್ತಿಗೆ ಕೊರೊನ ಸೋಂಕು ತಗುಲಿದೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.
ಜಿಲ್ಲಾಡಳಿತ ದೈನಂದಿನ ಕೋವಿಡ್ ವರದಿ ಬಿಡುಗಡೆ ಮಾಡುತ್ತಿದೆ. ವರದಿ ಪ್ರಕಾರ ಓರ್ವ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಪ್ರಸ್ತುತ ಇಬ್ಬರನ್ನು ಹೋಂ ಐಸೊಲೇಷನ್ಗೆ ಒಳಪಡಿಸಲಾಗಿದೆ. ಹಾಗೆಯೇ 34 ಜನರ ಗಂಟಲು ದ್ರವದ ಸ್ಯಾಂಪಲ್ ಪಡೆಯಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ರಾಜ್ಯಕ್ಕೆ ಕೆಲವು ಮಾರ್ಗಸೂಚಿಗಳು ಬಂದಿವೆ
ಕೊರೊನಾ ಉಪತಳಿ ಬಿಎಫ್ 7 ಭಾರತ ಪ್ರವೇಶಿಸಿದ್ದರಿಂದ ರಾಜ್ಯದಲ್ಲಿ ಸಹಜವಾಗೇ ಆತಂಕ ಎದುರಾಗಿದೆ. ಕೇಂದ್ರದಿಂದ ಒಂದಷ್ಟು ಸೂಚನೆಗಳು ಬಂದಿವೆ. ಸೋಮವಾರ ಕೊರೊನಾ ಸ್ಥಿತಿಗತಿ ಬಗ್ಗೆ ಚರ್ಚಿಸಿ ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದರು. ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದ ಅವರು, ಕೊರೊನಾ ಸೋಂಕು, ಉಪತಳಿ ಕುರಿತು ಜನರು ಗಾಬರಿಯಾಗಬೇಕಾಗಿಲ್ಲ. ಆದರೆ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸೇರಿದಂತೆ ಸರ್ಕಾರ ಸೂಚಿಸುವ ನಿಯಮ ಪಾಲನೆ ಮಾಡಬೇಕು ಎಂದು ಅವರು ತಿಳಿಸಿದ್ದರು.

ಕೊರೊನಾ ಬಗ್ಗೆ ಆರೋಗ್ಯ ಸಚಿವರು ಮತ್ತು ವಿಪತ್ತು ನಿರ್ವಹಣಾ ಸಚಿವರು ಹಾಗೂ ತಜ್ಞರು ಚರ್ಚಿಸಲಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದಿಂದ ರಾಜ್ಯಕ್ಕೆ ಕೆಲವು ಮಾರ್ಗಸೂಚಿಗಳು ಬಂದಿದ್ದು, ಈ ಬಗ್ಗೆ ಸೂಚಿಸುವಂತೆ ತಿಳಿಸಲಾಗಿದೆ. ರಾಜ್ಯ ಸರ್ಕಾರದಿಂದಲೂ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು. ಈ ಸಂಬಂಧ ಸೋಮವಾರ ಮಾರ್ಗಸೂಚಿ ಹೊರಡಿಸಲಾಗುವುದು ಎಂದಿದ್ದರು.

ವಿದೇಶಗಳಲ್ಲಿ ಕೊರೊನಾ ರಣಕೇಕೆ
ಚೀನಾ, ಜಪಾನ್, ಅಮೆರಿಕಾದಂತಹ ರಾಷ್ಟ್ರಗಳಲ್ಲಿ ಕೊರೊನಾ ವ್ಯಾಪಿಸುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆದ ಅನಾರೋಗ್ಯದ ಬೆಳವಣಿಗೆಗಳ ಪರಿಣಾಮ ದೇಶ ಹಾಗೂ ರಾಜ್ಯದ ಮೇಲೂ ಆಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರದ (ಡಿಸೆಂಬರ್ 26) ಸಭೆಯಲ್ಲಿ ತಜ್ಞರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದರು.












Click it and Unblock the Notifications