ನಳಿನ್ ಕುಮಾರ್ ಕಟೀಲ್ ಒಬ್ಬ ಜೋಕರ್; ಶಿವಮೊಗ್ಗದಲ್ಲಿ ಸಿದ್ದರಾಮಯ್ಯ ವ್ಯಂಗ್ಯ
ಶಿವಮೊಗ್ಗ, ಅಕ್ಟೋಬರ್, 29; ನಳಿನ್ ಕುಮಾರ್ ಕಟೀಲ್ ಒಬ್ಬ ಜೋಕರ್ ಆಗಿದ್ದಾರೆ. ಅವರ ಮಾತಿಗೆಲ್ಲ ಉತ್ತರ ಕೊಡುತ್ತಾ ಸಮಯ ವ್ಯರ್ಥ ಮಾಡಲು ನಾನು ಸಿದ್ಧನಿಲ್ಲ ಎಂದು ಸಿದ್ದರಾಮಯ್ಯ ಶಿವಮೊಗ್ಗದಲ್ಲಿ ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಸಿದ್ದರಾಮಯ್ಯ ಮಾತನಾಡಿದ್ದು, ''ಪರೇಶ್ ಮೇಸ್ತಾ ಸಾವು ಸಂಭವಿಸಿದಾಗ ಬಿಜೆಪಿಯವರು ಸದನದಲ್ಲಿ ಗಲಾಟೆ ಮಾಡಿದ್ದರು. ಉತ್ತರ ಕನ್ನಡದಲ್ಲೂ ಗಲಭೆ ಮಾಡಿಸಿದ್ದರು'' ಎಂದು ವಾಗ್ದಾಳಿ ನಡೆಸಿದರು.
ಈ ಪ್ರಕರಣವನ್ನು ನಾನು ಸಿಬಿಐಗೆ ವಹಿಸಿದ್ದೆ. ಆಗಲೂ ನರೇಂದ್ರ ಮೋದಿ ಅವರೇ ಪ್ರಧಾನಿ ಆಗಿದ್ದರು. ಈಗ ಸಿಬಿಐ ವರದಿಯಲ್ಲಿ ಇದು ಆಕಸ್ಮಿಕ ಸಾವು ಎಂದು ಬಂದಿದೆ. ಅದಕ್ಕೆ ಬಿಜೆಪಿಯವರು ಸಿದ್ದರಾಮಯ್ಯನವರು ಸಾಕ್ಷ್ಯ ನಾಶ ಮಾಡಿದರು ಎನ್ನುತ್ತಿದ್ದಾರೆ. "ಇವರ ಯೋಗ್ಯತೆಗೆ 2008 ರಿಂದ 2013ರವರಗೆ ಅಥವಾ ಈಗ ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ಪ್ರಕರಣವನ್ನು ಸಿಬಿಐಗೆ ವಹಿಸಿದ್ದಾರ? ಇದೇ ಬಿಜೆಪಿಯವರು ಹಿಂದೆ ಸಿಬಿಐ ಎಂದರೆ ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಎನ್ನುತ್ತಿದ್ದರು. ಜೆಡಿಎಸ್ನವರು ಚೋರ್ ಬಚಾವೋ ಇನ್ಸ್ಟಿಟ್ಯೂಟ್ ಎನ್ನುತ್ತಿದ್ದರು. ಈಗ ಸಿಬಿಐಗೆ ಏನಂತ ಕರೀಬೇಕು ನೀವೇ ಹೇಳಿ ನೋಡೋಣ? ಬಿಜೆಪಿ ಅವರ ಕೆಲಸ ಅಪಪ್ರಚಾರ ಮತ್ತು ಸುಳ್ಳು ಹೇಳುವುದಾಗಿದೆ," ಎಂದು ಕುಹಕವಾಡಿದರು.

ಬೆಲೆ ಏರಿಕೆ ವಿರುದ್ಧ ಐಕ್ಯತಾ ಯಾತ್ರೆ
ಭಾರತ ಐಕ್ಯತಾ ಯಾತ್ರೆಯ ಉದ್ದೇಶ ದ್ವೇಷ ರಾಜಕಾರಣದಿಂದ ಒಡೆದುಹೋಗಿರುವ ಮನಸುಗಳನ್ನು ಒಂದುಗೂಡಿಸುವುದು. ಬೆಲೆ ಏರಿಕೆ, ನಿರುದ್ಯೋಗ, ರೈತರ ಸಮಸ್ಯೆಗಳು ಹಾಗೂ ಭ್ರಷ್ಟಾಚಾರ ಇವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಾಗಿದೆ. ಆದರೆ ಬಿಜೆಪಿಯವರು ರಾಹುಲ್ ಗಾಂಧಿ ಅವರ ಬಗ್ಗೆ ಅಪಪ್ರಚಾರ ಮಾಡಿ ನಮ್ಮ ಯಾತ್ರೆಯ ಬಗ್ಗೆ ತಪ್ಪು ಮಾಹಿತಿ ನೀಡಲು ಕುತಂತ್ರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಈಶ್ವರಪ್ಪ ವಿರುದ್ಧ ಗುಡುಗಿದ ಸಿದ್ದರಾಮಯ್ಯ
ಶಿವಮೊಗ್ಗದಲ್ಲಿ ಗಲಾಟೆ ಮಾಡಿಸುವುದು ಈಶ್ವರಪ್ಪನವರೇ ಆಗಿದ್ದಾರೆ. ಜನರನ್ನು ಎತ್ತಿಕಟ್ಟಿ ಜಗಳ ಮಾಡುವಂತೆ ಪ್ರೇರೆಪಿಸುತ್ತಿದ್ದಾರೆ. ಹರ್ಷ ಕೊಲೆ ಆದಾಗ ಆತನ ಹೆಣ ಇಟ್ಟುಕೊಂಡು ಮೆರವಣಿಗೆ ಮಾಡಿದ್ದರು. ಆಗ 144 ಸೆಕ್ಷನ್ ಇದ್ದರು ಕೂಡ ಮೆರವಣಿಗೆ ಮಾಡಿದ್ದರು. ಸರ್ಕಾರವೂ ಇವರದ್ದೇ ಇದ್ದು, ಒಬ್ಬ ಮಂತ್ರಿ ಆಗಿ ಈ ರೀತಿ ಮೆರವಣಿಗೆ ಮಾಡಿದ್ದರು. ಇತಿಹಾಸದಲ್ಲಿ ಎಲ್ಲೂ ಹೀಗೆ ನಡೆದಿಲ್ಲ. ಈಶ್ವರಪ್ಪ ಅಂತಹವರಿಂದಲೇ ಸಮಾಜದಲ್ಲಿ ಅಶಾಂತಿ ನಿರ್ಮಾಣವಾಗುತ್ತಿದೆ ಎಂದರು ಆಕ್ರೋಶವನ್ನು ವ್ಯಕ್ತಪಡಿಸಿದರು.

ಪೆದ್ದ ಎಂದು ರಾಮುಲು ಹೇಳಿಕೊಂಡಿದ್ದಾರೆ
ಶ್ರೀರಾಮುಲು ಅವರು ನಾವು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ವರದಿ ಜಾರಿ ಮಾಡುತ್ತೇವೆ. ಇದನ್ನು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಹೇಳಿದ್ದರು. ಅಧಿಕಾರಕ್ಕೆ ಬಂದು 24 ಗಂಟೆಯೊಳಗೆ ವರದಿಯನ್ನು ಜಾರಿ ಮಾಡಿದ್ದಾರಾ? ಶ್ರೀರಾಮುಲು ಸಚಿವರಾಗಿರಲಿಲ್ಲವಾ? ನಾನು ರಾಮುಲು ಅವರನ್ನು ಪೆದ್ದ ಎನ್ನಲು ಕಾರಣ ಅವರೇ ಒಮ್ಮೆ ತಮ್ಮನ್ನು ತಾವು ಪೆದ್ದ ಎಂದು ಕರೆದುಕೊಂಡಿದ್ದರು. ಕೆಲವು ದಿನಗಳ ಹಿಂದೆ ಅವರು ಮಾತನಾಡುವಾಗ "ನಾನು ಉದ್ದವಿದ್ದೇನೆ ಆದರೂ ಪೆದ್ದ, ಆದರೆ ಬಸವರಾಜ ಬೊಮ್ಮಾಯಿ ಕುಳ್ಳ ಇದ್ದರೂ ಬುದ್ದಿವಂತ" ಎಂದು ಹೇಳಿದ್ದರು. ಅವರ ಮಾತನ್ನೇ ನಾನು ನೆನಪು ಮಾಡಿದ್ದೇನೆ ಅಷ್ಟೆ ಎಂದು ವ್ಯಂಗ್ಯವಾಡಿದರು.

ಸಮಿತಿ ರಚನೆ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
ಸಮ್ಮಿಶ್ರ ಸರ್ಕಾರ ಇದ್ದಾಗ ನಮ್ಮ ಪಕ್ಷದ ಪ್ರಿಯಾಂಕ್ ಖರ್ಗೆ ಅವರು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದರು. ಆಗ ನಾಗಮೋಹನ್ ದಾಸ್ ಅವರ ಸಮಿತಿ ರಚನೆ ಆಗಿದ್ದು. ಈ ಸಮಿತಿ ವರದಿ ನೀಡಿದ್ದು 2-7-2020ರಲ್ಲಿ. ಮೊನ್ನೆ ಸರ್ವಪಕ್ಷಗಳ ಸಭೆ ಕರೆದು ಚರ್ಚೆ ಮಾಡಿದ ಮೇಲೆ ಅದನ್ನು ಜಾರಿ ಮಾಡಿದ್ದಾರೆ. ವಾಲ್ಮೀಕಿ ಸಮಾಜದ ಸ್ವಾಮೀಜಿಗಳು 257 ದಿನಗಳ ಧರಣಿ ಮಾಡಿದ್ದರಿಂದ ಜಾರಿ ಮಾಡಿದ್ದರು. ಈ ವಿಚಾರವನ್ನು ನಾನು ಹಿಂದೆ ಹಲವು ಬಾರಿ ಸದನದಲ್ಲಿ ಪ್ರಸ್ತಾಪ ಮಾಡಿದ್ದೇನೆ. ನಮ್ಮ ಪಕ್ಷದ ಎಸ್ಸಿ, ಎಸ್ಟಿ ಶಾಸಕರು ನಾಗಮೋಹನ್ ದಾಸ್ ವರದಿ ಜಾರಿ ಮಾಡಿ ಎಂದು ಸದನದಲ್ಲಿ ಧರಣಿ ಮಾಡಿದ್ದರು. ಆಗ ಒಬ್ಬ ಬಿಜೆಪಿ ಶಾಸಕ ನಮ್ಮ ಜೊತೆ ಭಾಗಿಯಾಗಿದ್ದರಾ? ಹೀಗಿರುವಾಗ ಅವರಿಗೆ ಈ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ? ನಾಗಮೋಹನ್ ದಾಸ್ ಸಮಿತಿಯನ್ನು ನಾವು ರಚನೆ ಮಾಡಿದ್ದೇವೆ. ಅವರು ನೀಡಿರುವ ವರದಿಯನ್ನು ಜಾರಿ ಮಾಡಿದ್ದು ಮಾತ್ರ ಬಿಜೆಪಿ ಎಂದು ವಾಗ್ದಾಳಿ ನಡೆಸಿದರು.

ಶ್ರೀರಾಮುಲು ವಿರುದ್ಧ ಮತ್ತೆ ಸಿದ್ದು ಗರಂ
ಸಾಮಾಜಿಕ ನ್ಯಾಯದ ಬಗ್ಗೆ ಬಿಜೆಪಿಗೆ ಯಾವ ಬದ್ಧತೆ ಇದೆ? ಮಂಡಲ್ ಕಮಿಷನ್ ವರದಿ ವಿರೋಧಿಸಿದವರು ಯಾರು? ಉನ್ನತ ಶಿಕ್ಷಣದಲ್ಲಿ ಮೀಸಲಾತಿ ನೀಡಿದಾಗ ಅದನ್ನು ವಿರೋಧ ಮಾಡಿದ್ದು ಯಾರು? ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿ ಮಾಡಿ ಹಿಂದುಳಿದವರು ಮತ್ತು ಮಹಿಳೆಯರಿಗೆ ಮೀಸಲಾತಿ ನೀಡಿದಾಗ ಅದನ್ನು ವಿರೋಧ ಮಾಡಿ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನೆ ಮಾಡಿದವರು ಯಾರು? ಬಿಜೆಪಿಯ ಉಪಾಧ್ಯಕ್ಷರು ಮತ್ತು ರಾಜ್ಯಸಭಾ ಸದಸ್ಯರು ಆಗಿದ್ದ ರಾಮಾ ಜೋಯಿಸ್ ಅವರಲ್ವಾ? ಈ ರಾಮುಲು ಆಗ ಎಲ್ಲಿದ್ದರು? ರಾಹುಲ್ ಗಾಂಧಿ ಅವರ ತಂದೆ ರಾಜೀವ್ ಗಾಂಧಿ ಅವರು ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ಮಾಡಿದ್ದರು. ಹಿಂದುಳಿದ ವರ್ಗ, ಮಹಿಳೆಯರಿಗೆ ಮೀಸಲಾತಿ ನೀಡಿದ್ದು ಬಿಜೆಪಿನಾ? ವಿ.ಪಿ ಸಿಂಗ್ ಮತ್ತು ನರಸಿಂಹರಾಯರು ಮಂಡಲ್ ಕಮಿಷನ್ ವರದಿ ಜಾರಿ ಮಾಡಿದ್ದರು. ಇವರು ಬಿಜೆಪಿಯವರಾ? ಸುಮ್ಮನೆ ಮೀಸಲಾತಿ ಹೆಚ್ಚು ಮಾಡಿದ್ದೇವೆ ಎಂದು ಹೇಳುವುದಲ್ಲ, ಇವರು ಯಾವಾಗ ಮೀಸಲಾತಿ ಪರ ಇದ್ದರು ಹೇಳಲಿ ಎನ್ನುವ ಮೂಲಕ ಬಿಜೆಪಿ ಸರ್ಕಾರಕ್ಕೆ ಪ್ರಶ್ನೆಗಳ ಸರಮಾಲೆಯನ್ನೇ ಹಾಕಿದ್ದಾರೆ.
ಈಗ ಬಿಜೆಪಿಗೆ ಸಂಪೂರ್ಣ ಬಹುಮತ ಇದೆ. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 8 ವರ್ಷಗಳು ಆಗಿದೆ. ಇನ್ನು ಯಾಕೆ ಮಹಿಳಾ ಮೀಸಲಾತಿ ಬಿಲ್ ಅನ್ನು ಪಾಸ್ ಮಾಡಿಲ್ಲ? ರಾಮುಲು ಅವರಿಗೆ ಮೀಸಲಾತಿ, ಸಂವಿಧಾನದ ಬಗ್ಗೆ ಗೊತ್ತಿಲ್ಲ. ಯಾರೋ ಬರೆದು ಕೊಟ್ಟಿದ್ದನ್ನು ಓದುವುದು ಮಾತ್ರ ಅವರಿಗೆ ಗೊತ್ತು. ಮೀಸಲಾತಿ ಹೆಚ್ಚಳವಾದರೆ ಅದರಿಂದ ಲಾಭವಾಗುವುದು ಕಾಂಗ್ರೆಸ್ ಪಕ್ಷಕ್ಕೆ. ಕಾರಣ ನಾವು ಯಾವಾಗಲೂ ಮೀಸಲಾತಿಯ ಪರ ಇದ್ದೇವೆ ಎಂದರು.

ಜನಸಂಕಲ್ಪ ಯಾತ್ರೆಗೆ ಸಿದ್ದರಾಮಯ್ಯ ಟಾಂಗ್
ಬಿಜೆಪಿಯ ಜನಸಂಕಲ್ಪ ಯಾತ್ರೆಯಲ್ಲಿ ಜನ ಅರ್ಧಕ್ಕೆ ಎದ್ದು ಹೋಗುತ್ತಿದ್ದಾರೆ. ಜನರ ಸಂಕಲ್ಪವೇ ಬೇರೆ ಇದೆ. ಬಿಜೆಪಿಯನ್ನು ಅಧಿಕಾರದಿಂದ ತೊಲಗಿಸಬೇಕು ಎಂಬುದು ಜನರ ಸಂಕಲ್ಪವಾಗಿದೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಜನ ಸಂಕಲ್ಪ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಎಲ್ಲಿಂದ ಸ್ಪರ್ಧೆ ಮಾಡಬೇಕು ಎಂಬುದನ್ನು ಇನ್ನೂ ತೀರ್ಮಾನ ಮಾಡಿಲ್ಲ. ನವೆಂಬರ್ ತಿಂಗಳ ಕೊನೆಯಲ್ಲಿ ತೀರ್ಮಾನ ಮಾಡುತ್ತೇನೆ. ಬಾದಾಮಿ ಜನ ಕಳೆದ ಬಾರಿ ನನ್ನನ್ನು ಗೆಲ್ಲಿಸಿದ್ದಾರೆ. ಅವರು ಇಲ್ಲಿಂದಲೇ ಸ್ಪರ್ಧೆ ಮಾಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಕೋಲಾರ, ಹುಣಸೂರು, ಕೊಪ್ಪಳ, ಚಾಮರಾಜನಗರ ಹೀಗೆ ಹಲವು ಕಡೆಯಿಂದ ಸ್ಪರ್ಧೆ ಮಾಡಿ ಎಂದು ಒತ್ತಾಯ ಮಾಡುತ್ತಿದ್ದಾರೆ. ವರುಣಾ ಕ್ಷೇತ್ರದಲ್ಲೂ ನಿಲ್ಲುವಂತೆ ಒತ್ತಡ ಇದೆ. ನನಗೆ ಕ್ಷೇತ್ರಕ್ಕೆ ಕೊರತೆ ಇಲ್ಲವೇ ಇಲ್ಲ. ಹೆಚ್ಚು ಕಡೆಯಿಂದ ಒತ್ತಡ ಇದೆ ಹೀಗಾಗಿ ಎಲ್ಲಿ ನಿಲ್ಲಬೇಕು ಎಂದು ನಿರ್ಧಾರ ಮಾಡುವುದು ಕಷ್ಟ ಆಗಿದೆ ಎಂದರು.
ನರೇಂದ್ರ ಮೋದಿ ಅವರು ವಾರಣಾಸಿಯಿಂದ ಸ್ಪರ್ಧೆ ಮಾಡಿಲ್ಲವಾ? ಮೋದಿ ಅವರಿಗೆ ಒಂದು ವ್ಯಾಖ್ಯಾನ, ಸಿದ್ದರಾಮಯ್ಯ ಅವರಿಗೆ ಒಂದು ವ್ಯಾಖ್ಯಾನವೇ? ಗುಜರಾತ್ನ ನರೇಂದ್ರ ಮೋದಿ ಉತ್ತರ ಪ್ರದೇಶದಲ್ಲಿ ಚುನಾವಣೆಗೆ ನಿಂತರೆ ಒಂದು ವ್ಯಾಖ್ಯಾನ, ದೇಶದ ಪ್ರಖ್ಯಾತ ವ್ಯಕ್ತಿ ಎಂದು ಹೊಗಳಿಕೆ ಇದೆ. ನಾನು ಬೇರೆ ಕಡೆ ನಿಂತರೆ ಇನ್ನೊಂದು ರೀತಿ ವ್ಯಾಖ್ಯಾನ ಯಾಕೆ? ಎಂದು ಪ್ರಶ್ನಿಸುವ ಮೂಲಕ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ನಮ್ಮ ಸರ್ಕಾರದ ಅವಧಿಯಲ್ಲಿ ಪೊಲೀಸರ ವರ್ಗಾವಣೆಗೆ ಒಂದು ಪೈಸೆಯನ್ನು ತೆಗೆದುಕೊಂಡಿಲ್ಲ. ಈಗ ಒಳ್ಳೆ ಕಮಾಯಿ ಆಗುವ ಸ್ಟೇಷನ್ಗೆ ವರ್ಗಾವಣೆ ಸಿಗಬೇಕು ಎಂದರೆ 60 - 70 ಲಕ್ಷ ಲಂಚ ಕೊಡಬೇಕು. ಇಷ್ಟು ಲಂಚ ಕೊಟ್ಟು ನ್ಯಾಯವಾಗಿ ಕೆಲಸ ಮಾಡಿ ಎಂದರೆ ಹೇಗೆ? ಅಪರಾಧಗಳು ನಡೆಯದಂತೆ ಕೆಲಸ ಮಾಡಿ ಎಂದರೆ ಆಗುತ್ತಾ? ಗುತ್ತಿಗೆದಾರರ ಸಂಘದ ಕೆಂಪಣ್ಣನವರೇ ಈ ಸರ್ಕಾರವನ್ನು 40% ಕಮಿಷನ್ ಸರ್ಕಾರ ಎಂದಿದ್ದಾರೆ. ಅವರು ಪ್ರಧಾನಿಗಳಿಗೆ 6-7-2021ರಲ್ಲಿ ಪತ್ರ ಬರೆದು ದೂರಿದ್ದರು. ನರೇಂದ್ರ ಮೋದಿ ಅವರು ಏನಾದರೂ ಕ್ರಮ ಕೈಗೊಂಡಿದ್ದಾರಾ? ನ ಖಾವೂಂಗಾ, ನಾ ಖಾನೆದೂಂಗ ಎನ್ನುವ ಮೋದಿ ಅವರು ಎಲ್ಲಿದ್ದಾರೆ?












Click it and Unblock the Notifications