ಭದ್ರಾವತಿ ಎಂಪಿಎಂನಲ್ಲಿ ಮತ್ತೆ ಉತ್ಪಾದನೆ ಆರಂಭ?
ಶಿವಮೊಗ್ಗ, ಜೂನ್ 25 : ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆ ಮತ್ತೆ ಬಾಗಿಲು ತೆರೆಯಲಿದೆ?. 2015ರ ನಂತರ ಕಾರ್ಖನೆಯಲ್ಲಿ ಉತ್ಪಾದನೆ ಸ್ಥಗಿತಗೊಂಡಿದೆ. ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ)ಯನ್ನು ಖಾಸಗಿ ಅವರಿಗೆ ಗುತ್ತಿಗೆ ನೀಡಲು ಆಡಳಿತ ಮಂಡಳಿ ತೀರ್ಮಾನ ಕೈಗೊಂಡಿದೆ. ಜೂನ್ 21ರಂದು ಆಸಕ್ತ ಖಾಸಗಿ ಕಂಪನಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಭದ್ರಾವತಿಯ ವಿಐಎಸ್ಎಲ್ಗೆ ಗಣಿ ಮಂಜೂರು
ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಎಂಪಿಎಂ ಅನ್ನು ಮುನ್ನೆಡಸಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಇದರ ಭಾಗವಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಡಳಿತ ಮಂಡಳಿ ಕೆಲವು ದಿನಗಳ ಹಿಂದೆ ನೌಕರರಿಗಾಗಿ ಸ್ವಯಂ ನಿವೃತ್ತಿ ಯೋಜನೆ ಘೋಷಣೆ ಮಾಡಿದೆ.
ಭದ್ರಾವತಿಯಲ್ಲಿ ಮೈಸೂರು ಕಾಗದ ಮತ್ತು ಸಕ್ಕರೆ ಕಾರ್ಖಾನೆ ಇದೆ. 2015ರ ಬಳಿಕ ಉತ್ಪಾದನೆ ಸ್ಥಗಿತಗೊಂಡು ಕಾರ್ಖಾನೆಗೆ ಬೀಗ ಬಿದ್ದಿದೆ. 2016ರಲ್ಲಿ ಅಂದಿನ ಕೈಗಾರಿಕಾ ಸಚಿವರಾಗಿದ್ದ ಆರ್.ವಿ.ದೇಶಪಾಂಡೆ ಅವರು 'ಕಾರ್ಖಾನೆಯನ್ನು ಖಾಸಗಿ ಅವರಿಗೆ ವಹಿಸಲು ಚಿಂತನೆ ನಡೆಸಲಾಗುತ್ತಿದೆ' ಎಂದು ಹೇಳಿದ್ದರು.
ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 6 ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತದೆ. ಎಂಪಿಎಂನ ಸಕ್ಕರೆ ಕಾರ್ಖಾನೆ ಪ್ರತಿ ದಿನ ಸುಮಾರು 2,500 ಟನ್ ಕಬ್ಬನ್ನು ಅರೆಯುವ ಸಾರ್ಮಥ್ಯ ಹೊಂದಿದೆ.
2010-11ರಲ್ಲಿ ರೈತರಿಂದ ಖರೀದಿ ಮಾಡಿದ ಕಬ್ಬಿನ ಸುಮಾರು 2.92 ಕೋಟಿ ಬಾಕಿ ಹಣವನ್ನು ಇನ್ನೂ ಪಾವತಿ ಮಾಡಬೇಕಾಗಿದೆ. ಕಬ್ಬು ಅರೆಯುವಿಕೆ ಪುನಃ ಆರಂಭವಾದರೆ ಜಿಲ್ಲೆಯ ರೈತರಿಗೆ ಸಹಾಕಯಕವಾಗಲಿದೆ.