'ಸಮೀಕ್ಷೆಗೆ ತಲೆಕೆಡಿಸಿಕೊಳ್ಳಬೇಡಿ, ಬಿಜೆಪಿ ಅಧಿಕಾರಕ್ಕೆ ಬರುತ್ತದೆ'
ಶಿವಮೊಗ್ಗ, ಡಿಸೆಂಬರ್. 08 : 'ಕರ್ನಾಟಕದಲ್ಲಿ ಟಿವಿ ಮಾಧ್ಯಮಗಳಲ್ಲಿ ಬರುವ ಸಮೀಕ್ಷೆಗಳ ಬಗ್ಗೆ ಬಿಜೆಪಿಯ ಕಾರ್ಯಕರ್ತರು ತಲೆ ಕೆಡಿಸಿಕೊಳ್ಳಬೇಡಿ. ನರೇಂದ್ರ ಮೋದಿ ಅವರ ಆಡಳಿತವನ್ನು ಮೆಚ್ಚಿ ಜನರು ಬೆಂಬಲ ನೀಡುತ್ತಾರೆ. ಪಕ್ಷ ಅಧಿಕಾರಕ್ಕೆ ಬರುತ್ತದೆ' ಎಂದು ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಹೇಳಿದರು.
ಶುಕ್ರವಾರ ಶಿವಮೊಗ್ಗ ನಗರದ ಶುಭ ಮಂಗಳ ಸಭಾಂಗಣದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡದ ಬೂತ್ ಸಶಕ್ತೀಕರಣ ಪತಿಶೀಲನಾ ಸಭೆಯನ್ನು ಉದ್ಘಾಟಿಸಿ ಕರ್ನಾಟಕ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಮಾತನಾಡಿದರು.
'2014ರ ಲೋಕ ಸಭಾ ಚುನಾವಣೆಯಲ್ಲಿ ಸಮೀಕ್ಷೆಗಳು 180ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಗೆಲ್ಲುವುದಿಲ್ಲ ಎಂದು ಹೇಳಿತ್ತು. ಆದರೆ, ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 282 ಕ್ಷೇತ್ರಗಳಲ್ಲಿ ಜಯಗಳಿಸಿದೆವು' ಎಂದರು.

'ಹಿಮಾಚಲ ಪ್ರದೇಶ ಮತ್ತು ಗುಜರಾತ್ನಲ್ಲಿಯೂ ಜಯಗಳಿಸಲಿದ್ದೇವೆ. ಗುಜರಾತ್ ರಾಜ್ಯದಲ್ಲಿ ಯಾರು ಬಿಜೆಪಿಗೆ ಪ್ರತಿಸ್ಪರ್ಧಿ ಎಂದು ತಿಳಿಯಬೇಕಿದೆ. ರಾಹುಲ್ ಗಾಂಧಿ ಅವರು ಬಿಜೆಪಿಗೆ ಪ್ರತಿಸ್ಪರ್ಧಿಯಂತೆ ಕಾಣುತ್ತಿಲ್ಲ' ಎಂದರು.
'ಕರ್ನಾಟಕದ ಟಿವಿ ಮಾದ್ಯಮಗಳಲ್ಲಿ ಬರುವ ಸಮೀಕ್ಷೆಗಳ ಬಗ್ಗೆ ಬಿಜೆಪಿಯ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬೇಡಿ. ಕಾರ್ಯಕರ್ತರು ಹೇಗೆ ಬೂತ್ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ? ಎಂದು ತಿಳಿದುಕೊಂಡರೆ ಸಾಕು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ' ಎಂದು ತಿಳಿಸಿದರು.
'ಪಕ್ಷದ ಪರಿವರ್ತನಾ ಯಾತ್ರೆಗೆ ಉತ್ತಮ ಜನ ಬೆಂಬಲ ಸಿಕ್ಕಿದೆ. ಕಾರ್ಯಕರ್ತರಲ್ಲಿ ಚುನಾವಣೆಗೆ ಹುರುಪು ತುಂಬಲು ಪರಿವರ್ತನಾ ಯಾತ್ರೆ ನಡೆಸಲಾಗುತ್ತಿದೆ. ಈ ಭಾರೀ ಬಿಜೆಪಿ 150ಸೀಟು ಪಡೆಯುವುದರಲ್ಲಿ ಸಂಶಯವಿಲ್ಲ' ಎಂದು ಹೇಳಿದರು.












Click it and Unblock the Notifications