Breaking; ಗುಡ್ಡ ಕುಸಿತ, ಆಗುಂಬೆ ಘಾಟ್ ರಸ್ತೆ ಬಂದ್
ಶಿವಮೊಗ್ಗ, ಜುಲೈ 10; ಮಲೆನಾಡಿನಲ್ಲಿ ಮಳೆಯ ಆರ್ಭಟ ಜೋರಾಗಿದೆ. ಕರಾವಳಿ, ಮಲೆನಾಡು ಸಂಪರ್ಕಿಸುವ ಆಗುಂಬೆ ಘಾಟ್ ರಸ್ತೆಯಲ್ಲಿ ಗುಡ್ಡ ಕುಸಿದಿದ್ದು, ಶಿವಮೊಗ್ಗ-ಉಡುಪಿ ನಡುವಿನ ವಾಹನಗಳ ಸಂಚಾರ ಘಾಟ್ ರಸ್ತೆಯಲ್ಲಿ ಸಂಪೂರ್ಣ ಬಂದ್ ಆಗಿದೆ.
ಭಾನುವಾರ ಸೋಮೇಶ್ವರ ಕಡೆಯಿಂದ ಬರುವ ಮಾರ್ಗದ 3ನೇ ತಿರುವಿನಲ್ಲಿ ಗುಡ್ಡ ಕುಸಿದಿದೆ. ಮರಗಳು ಸಹ ರಸ್ತೆ ಮೇಲೆ ಉರುಳಿದೆ. ಇದರಿಂದಾಗಿ ವಾಹನ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ತೀರ್ಥಹಳ್ಳಿ-ಹೆಬ್ರಿ ನಡುವಿನ ಹೆದ್ದಾರಿ ಸಂಪೂರ್ಣ ಬಂದ್ ಆಗಿದ್ದು, ಸೋಮೇಶ್ವರ ಬಳಿಯೇ ಈ ಕುರಿತು ವಾಹನ ಸವಾರರಿಗೆ ಮಾಹಿತಿ ನೀಡಲಾಗುತ್ತಿದೆ. ತೀರ್ಥಹಳ್ಳಿ ಕಡೆಯಿಂದ ಬರುವ ವಾಹನಗಳನ್ನು ಆಗುಂಬೆ ಘಾಟ್ ಚೆಕ್ ಪೋಸ್ಟ್ ಬಳಿಯೇ ತಡೆಯಲಾಗುತ್ತಿದೆ.

ಅರಣ್ಯ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಎಷ್ಟು ಪ್ರಮಾಣದ ಮಣ್ಣು ರಸ್ತೆಯ ಮೇಲೆ ಬಿದ್ದಿದೆ ಎಂಬ ಮಾಹಿತಿ ಸಿಕ್ಕಿಲ್ಲ. ಮಣ್ಣು, ಮರಗಳನ್ನು ತೆರವು ಮಾಡಿದ ಬಳಿಕ ವಾಹನ ಸಂಚಾರ ಮತ್ತೆ ಆರಂಭಿಸುವ ಕುರಿತು ಮಾಹಿತಿ ಲಭ್ಯವಾಗಲಿದೆ.
ಕಳೆದ ಒಂದು ವಾರದಿಂದ ಆಗುಂಬೆಯಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಸ್ಥಳೀಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಶನಿವಾರ ಒಂದೇ ದಿನ ಆಗುಂಬೆಯಲ್ಲಿ 164.5 ಮಿ. ಮೀ. ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿಯೇ ಅತ್ಯಧಿಕ ಪ್ರಮಾಣದ ಮಳೆ ಶನಿವಾರ ಆಗುಂಬೆಯಲ್ಲಿ ಸುರಿದಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದೆ. ತುಂಗಾ ನದಿ ಅಪಾಯಮಟ್ಟದಲ್ಲಿ ಹರಿಯುತ್ತಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಮಳೆ ಅವಾಂತರವನ್ನೇ ಸೃಷ್ಟಿ ಮಾಡಿದೆ.
ಆಗುಂಬೆ ಘಾಟಿಯಲ್ಲಿ ಗುಡ್ಡಕುಸಿತ,
— Karnataka Rains⛈️ (@Karnatakarains) July 10, 2022
ಶಿವಮೊಗ್ಗ-ಉಡುಪಿ ವಾಹನಗಳ ರಸ್ತೆ ಸಂಚಾರ ಬಂದ್. #Agumbe #WesternGhats #Landslides #SaveAgumbe #Karnatakarains pic.twitter.com/ukB5ilbevZ
ತೀರ್ಥಹಳ್ಳಿ ಶಾಸಕ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮಣ್ಣು ತೆರವು ಕಾರ್ಯಾಚರಣೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications