ಮಗಳ ಹುಟ್ಟುಹಬ್ಬಕ್ಕೆ ಸರ್ಕಾರಿ ಲೆಟರ್ ಹೆಡ್ನಲ್ಲಿ ಸುತ್ತೋಲೆ ಹೊರಡಿಸಿದ ಕುವೆಂಪು ವಿವಿ ಕುಲಪತಿ
ಶಿವಮೊಗ್ಗ, ಮೇ 22: ಸುತ್ತೋಲೆ ಹೊರಡಿಸುವ ಮಾದರಿಯಲ್ಲೇ ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿಗಳು ತಮ್ಮ ಮಗಳ ಹುಟ್ಟುಹಬ್ಬಕ್ಕೆ ಅತಿಥಿಗಳಿಗೆ ಆಹ್ವಾನ ನೀಡಿದ್ದು, ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಕುವೆಂಪು ವಿವಿ ಕುಲಪತಿಗಳ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಖಾಸಗಿ ಕಾರ್ಯಕ್ರಮಗಳಿಗೆ ಯಾವುದೇ ಸಚಿವರಾಗಿರಲಿ, ಶಾಸಕರಾಗಲಿ ಅಥವಾ ಸರ್ಕಾರಿ ಉನ್ನತ ಅಧಿಕಾರಿಯೇ ಆಗಿರಲಿ ಖಾಸಗಿಯಾಗಿಯೇ ಆಹ್ವಾನಿಸುತ್ತಾರೆ. ಸರ್ಕಾರದ ಲೆಟರ್ಹೆಡ್ನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ.

ಆದರೆ, ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ತಮ್ಮ ಮಗಳ ಹುಟ್ಟುಹಬ್ಬಕ್ಕೆ ಸರ್ಕಾರದ ಲೆಟರ್ಹೆಡ್ನಲ್ಲಿ ಸುತ್ತೋಲೆ ಹೊರಡಿಸಿ ಅತಿಥಿಗಳಿಗೆ ಆಹ್ವಾನ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಕುವೆಂಪು ವಿಶ್ವವಿದ್ಯಾನಿಲಯ ಕುಲಪತಿ ಹೊರಡಿಸಿರುವ ಸುತ್ತೋಲೆ ಪತ್ರ ಎಲ್ಲೆಡೆ ವೈರಲ್ ಆಗಿದ್ದು, ಪರ-ವಿರೋಧಗಳ ಮಾತು ಕೇಳಿಬರುತ್ತಿದೆ. ಅಲ್ಲದೆ ಈ ಮೂಲಕ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಎಡವಟ್ಟು ಮಾಡಿದ್ದಾರೆ ಎಂಬ ದೂರು ಕೇಳಿಬಂದಿದೆ.

ಕುವೆಂಪು ವಿಶ್ವವಿದ್ಯಾನಿಲಯದ ಲೋಗೋ ಇರುವ ಸರ್ಕಾರಿ ಲೆಟರ್ನಲ್ಲಿ ಸುತ್ತೋಲೆ ಹೊರಡಿಸಿರುವ ಅವರು, "ನನ್ನ ಮಗಳು ಆಕಾಂಕ್ಷಾ ಬಿ.ವಿ ಜನ್ಮದಿನದ ಪ್ರಯುಕ್ತ ದಿನಾಂಕ 28-5-2023ರ ಮಧ್ಯಾಹ್ನ 12.30ಕ್ಕೆ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಕುಲಪತಿಗಳ ಗೃಹದಲ್ಲಿ ಸಂತೋಷಕೂಟ ಏರ್ಪಡಿಸಿದೆ".
"ಎಲ್ಲಾ ಅಧ್ಯಾಪಕರು, ಅಧ್ಯಾಪಕೇತರರು, ಅತಿಥಿ ಉಪನ್ಯಾಸಕರು, ಏಜೆನ್ಸಿ ನೌಕರರು ತಪ್ಪದೇ ಹಾಜರಾಗಬೇಕೆಂದು ಕೋರಲಾಗಿದೆ. ಇದನ್ನು ವೈಯಕ್ತಿಕ ಆಹ್ವಾನವೆಂದು ಭಾವಿಸಿ ಎಲ್ಲರೂ ಈ ಸಂತೋಷಕೂಟದಲ್ಲಿ ಭಾಗವಹಿಸಬೇಕೆಂದು ಕೋರಲಾಗಿದೆ". ಇದು ಫರ್ಮಾನು ಹೊರಡಿಸಿದ ರೀತಿಯಲ್ಲಿದೆ ಎಂಬ ಟೀಕೆ ವ್ಯಕ್ತವಾಗಿದೆ.












Click it and Unblock the Notifications