ಶಿವಮೊಗ್ಗ; ಹುಣಸೋಡು ಸ್ಪೋಟದ ತನಿಖೆಗೆ ಜಿಲ್ಲಾ ಸಚಿವರೇ ಅಡ್ಡಿ!
ಶಿವಮೊಗ್ಗ, ಮಾರ್ಚ್ 19: "ಹುಣಸೋಡು ಸ್ಫೋಟ ಪ್ರಕರಣದ ತನಿಖೆಗೆ ಜಿಲ್ಲಾ ಉಸ್ತುವಾರಿ ಸಚಿವರೇ ಅಡ್ಡಿಪಡಿಸುತ್ತಿದ್ದಾರೆ. ಆದ್ದರಿಂದ ನಿಷ್ಪಕ್ಷಪಾತ ತನಿಖೆಯಾಗುತ್ತಿಲ್ಲ" ಎಂದು ಶಿವಮೊಗ್ಗದ ಮಾಜಿ ಶಾಸಕ, ಕಾಂಗ್ರೆಸ್ ನಾಯಕ ಕೆ. ಬಿ. ಪ್ರಸನ್ನ ಕುಮಾರ್ ಆರೋಪಿಸಿದರು.
ಶುಕ್ರವಾರ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಶಾಸಕರು, "ಕೂಡಲೇ ಪ್ರಕರಣವನ್ನು ಹೈಕೋರ್ಟ್ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ತನಿಖೆಗೆ ವಹಿಸಬೇಕು" ಎಂದು ಒತ್ತಾಯಿಸಿದರು.
ಹುಣಸೋಡು ಸ್ಪೋಟ; ಹಾನಿಯಾದ ಮನೆಗಳಿಗೆ ಸಿಕ್ಕಿಲ್ಲ ಪರಿಹಾರ
"ಈ ಜಿಲ್ಲಾ ಮಂತ್ರಿ ಇರುವ ತನಕ ಪ್ರಕರಣದ ನಿಷ್ಪಕ್ಷಪಾತ ತನಿಖೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಅಥವಾ ಹೈಕೋರ್ಟ್ ನ್ಯಾಯಮೂರ್ತಿ ಅವರಿಂದ ತನಿಖೆ ನಡೆಸಬೇಕು" ಎಂದು ಆಗ್ರಹಿಸಿದರು.
ಹುಣಸೋಡು ಸ್ಪೋಟದ ಸ್ಥಳಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ
ಸ್ಪೋಟಕ ತರಿಸಿದ್ದು ಯಾರು?: "ಹುಣಸೋಡು ಪ್ರಕರಣದಲ್ಲಿ ನಾಲ್ಕು ವಾಹನಗಳು ಸ್ಪೋಟಗೊಂಡಿವೆ. ಅಷ್ಟೊಂದು ಪ್ರಮಾಣದ ಸ್ಪೋಟಕವನ್ನು ಯಾರೆಲ್ಲ ತರಿಸಿದ್ದರು. ಒಂದೇ ಕ್ವಾರಿಗೆ ಅಷ್ಟೊಂದು ಸ್ಪೋಟಕ ಬಂದಿತ್ತಾ?. ಸ್ಪೋಟಕಗಳಿಗಾಗಿ ಯಾರೆಲ್ಲ ಹಣ ಹೂಡಿಕೆ ಮಾಡಿದ್ದರು? ಎಂಬುದು ಈ ತನಕ ತನಿಖೆಯಾಗಿಲ್ಲ" ಎಂದರು.
"ನರಸಿಂಹ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಇಡೀ ಪ್ರಕರಣಕ್ಕೆ ಇವರಷ್ಟೇ ಕಾರಣವೇ?. ಇದರ ಹಿಂದೆ ಬೇರೆ ಯಾರೂ ಇಲ್ಲವಾ?. ಅಲ್ಲದೆ ಘಟನೆ ಸಂಬಂಧ ಯಾರನ್ನೇ ವಿಚಾರಣೆಗೆ ಕರೆದೊಯ್ದರೂ ಅರ್ಧ ಗಂಟೆಗೆ ಹಿಂತಿರುಗುತ್ತಿದ್ದಾರೆ" ಎಂದು ದೂರಿದರು.
"ಇತ್ತೀಚೆಗೆ ಕಿಂಗ್ ಪಿನ್ ಒಬ್ಬಾತನನ್ನು ವಿಚಾರಣೆಗೆ ಕರೆತರಲಾಗಿತ್ತು. ಆದರೆ ಕೆಲವೇ ಹೊತ್ತಲ್ಲಿ ಆತನ ಬಿಡುಗಡೆ ಮಾಡಲಾಗಿದೆ. ಜಿಲ್ಲಾ ಮಂತ್ರಿ ಫೋನ್ ಮಾಡಿ ಎಲ್ಲರನ್ನು ಬಿಡಿಸುತ್ತಿದ್ದಾರೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ" ಎಂದು ಆರೋಪಿಸಿದರು.
ತಲೆ ತಗ್ಗಿಸುವಂತಾಗಿದೆ; "ಮನೆಯಲ್ಲಿ ನೋಟು ಎಣಿಸುವ ಮೆಷಿನ್ ಸಿಕ್ಕಿದ್ದರಿಂದ ಇಡೀ ಜಿಲ್ಲೆಯ ಜನರು ತಲೆ ತಗ್ಗಿಸುವಂತಾಗಿತ್ತು. ಈಗ ಇನ್ನೂ ಯಾವೆಲ್ಲ ವಿಚಾರಕ್ಕೆ ತಲೆ ತಗ್ಗಿಸಬೇಕಾಗುತ್ತದೋ?" ಎಂದು ಪ್ರಸನ್ನ ಕುಮಾರ್ ಪ್ರಶ್ನಿಸಿದರು.
ಶಿವಮೊಗ್ಗ ತಾಲೂಕಿನ ಹುಣಸೋಡಿನಲ್ಲಿರುವ ಕಲ್ಲು ಕ್ವಾರಿಯಲ್ಲಿ ಜನವರಿ 21ರಂದು ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡಿತ್ತು. ಐವರು ಕಾರ್ಮಿಕರು ಈ ಸ್ಫೋಟದಲ್ಲಿ ಮೃತಪಟ್ಟಿದ್ದರು.