ಕವಿಶೈಲದಲ್ಲಿ ಕಿಡಿಗೇಡಿಗಳ ಹಸ್ತಾಕ್ಷರ, ಫೇಸ್ಬುಕ್ನಲ್ಲಿ ಖಂಡನೆ
ಶಿವಮೊಗ್ಗ, ಅಕ್ಟೋಬರ್ 10 : ಕುಪ್ಪಳ್ಳಿ ಎಂಬುದು ಕೇವಲ ಊರಿನ ಹೆಸರಲ್ಲ. ರಾಷ್ಟ್ರಕವಿ ಕುವೆಂಪು ಅವರು ಬದುಕಿ ಬಾಳಿದ ಜಾಗ. ಇಂದಿಗೂ ಸಾವಿರಾರು ಜನರಿಗೆ ಅದು ಪ್ರೇರಣೆ ನೀಡುವ ಸ್ಥಳ. ಆದರೆ, ಕೆಲವು ಪ್ರವಾಸಿಗರು ಕುಪ್ಪಳ್ಳಿಯಲ್ಲಿ ಮಾಡಿರುವ ಕೆಲಸದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ ಕುವೆಂಪು ಅವರ ಹುಟ್ಟೂರು. ಕವಿಶೈಲಕ್ಕೆ ನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಕವಿಶೈಲದ ಕಲ್ಲು ಹಾಸಿನ ಮೇಲೆ ಕುಳಿತು ರಾಷ್ಟ್ರಕವಿಯನ್ನು ಮನದಲ್ಲೇ ನೆನಪು ಮಾಡಿಕೊಳ್ಳುತ್ತಾರೆ.

ಕವಿಶೈಲದ ಬಂಡೆಗಳ ಮೇಲೆ ಕುವೆಂಪು, ಬಿಎಂಶ್ರೀ, ಪೂರ್ಣಚಂದ್ರ ತೇಜಸ್ವಿ ಅವರ ಹೆಸರುಗಳಿವೆ. ಸಹ್ಯಾದ್ರಿ ಬೆಟ್ಟದ ತಪ್ಪಲಿನ ಈ ಜಾಗದಲ್ಲಿ ಕ್ಷಣಕಾಲ ಕುಳಿತರೆ ಧನ್ಯತಾಭಾವ ಮೂಡುತ್ತದೆ. ಆದರೆ, ಕೆಲವು ಪ್ರವಾಸಿಗರು ಕವಿಶೈಲದ ಹಲ್ಲು ಹಾಸಿನ ಅಂದವನ್ನು ಹಾಳು ಮಾಡಿದ್ದಾರೆ.
ಭಾನುವಾರ ಕುಪ್ಪಳ್ಳಿಗೆ ಭೇಟಿ ನೀಡಿದ್ದ ಕೆಲವು ಪ್ರವಾಸಿಗರು ಕಲ್ಲು ಹಾಸಿನ ಮೇಲೆ ತಮ್ಮ ಹೆಸರನ್ನು ಕೆತ್ತಿ ಅಂದವನ್ನು ಹಾಳು ಮಾಡಿದ್ದಾರೆ. ಪ್ರವಾಸಿ ಸ್ಥಳವನ್ನು ಸಂರಕ್ಷಣೆ ಮಾಡುವ ಬದಲು ಅದನ್ನು ಹಾಳು ಮಾಡಿದ್ದಾರೆ. ಪ್ರವಾಸಿಗರ ಈ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.
ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿರುವ ಸ್ಥಳವನ್ನು ಉಳಿಸಿಕೊಳ್ಳುವ ಬದಲು ಅದರ ಅಂದವನ್ನು ಹಾಳು ಮಾಡಿದ ಪ್ರವಾಸಿಗರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಕವಿಶೈಲವನ್ನು ಸಂರಕ್ಷಿಸಿ ಎಂದು ನೂರಾರು ಜನರು ಫೇಸ್ಬುಕ್ನಲ್ಲಿ ಮನವಿ ಮಾಡುತ್ತಿದ್ದಾರೆ.
ಕವಿಶೈಲದಲ್ಲಿ ಪ್ರವಾಸಿಗರ ವರ್ತನೆಗೆ ತಡೆ ಹಾಕದಿದ್ದರೆ ಮುಂದೊಂದು ದಿನ ಇಲ್ಲಿ ಮೋಜು-ಮಸ್ತಿ ಮಾಡಲು ಆರಂಭಿಸುತ್ತಾರೆ ಎಂದು ಸಾಹಿತ್ಯಾಸಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications