ಪಕ್ಷ ಸಂಘಟನೆ: ಹೊಸ ತಂತ್ರ ಪ್ರಯೋಗಿಸಲು ಮುಂದಾದ ಕುಮಾರಸ್ವಾಮಿ
ಜೆಡಿಎಸ್ ಪಕ್ಷ ಎನ್ಡಿಎ ಮೈತ್ರಿಕೂಟದ ಜೊತೆ ಸೇರಿಕೊಳ್ಳಲಿದೆ, ಎಚ್.ಡಿ.ಕುಮಾರಸ್ವಾಮಿ ಕೇಂದ್ರದಲ್ಲಿ ಮಂತ್ರಿಯಾಗಲಿದ್ದಾರೆ ಎನ್ನುವ ವದಂತಿಯಿಂದ ಎಚ್ಚೆತ್ತು ಕೊಂಡಿರುವ ದೇವೇಗೌಡ್ರು, ಗಂಭೀರವಾಗಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ.
ಈಗಾಗಲೇ ಹಲವು ಸುತ್ತಿನ ಮಾತುಕತೆ/ಸಭೆ ನಡೆಸಿರುವ ದೇವೇಗೌಡ್ರು ಮತ್ತು ಕುಮಾರಸ್ವಾಮಿ, ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳನ್ನು ನೇಮಿಸಿದ್ದಾರೆ. ಜೊತೆಗೆ, ರಾಜ್ಯ ಪ್ರವಾಸಕ್ಕೂ ಮುಂದಾಗಿದ್ದಾರೆ.
ಪಕ್ಷದಲ್ಲೇ ಇದ್ದು ಸಂಘಟನಾ ಕಾರ್ಯದಲ್ಲಿ ತೊಡಗಿಸದೇ ಕೊಳ್ಳುತ್ತಿರುವ ಪ್ರಮುಖ ಮುಖಂಡರನ್ನು ಪಾರ್ಟಿಯಿಂದ ಹೊರಗಿಡುವ ನಿರ್ಧಾರಕ್ಕೂ ಜೆಡಿಎಸ್ ಬಂದಿದೆ. ಅದಕ್ಕೆ ಉದಾಹರಣೆ, ಮೈಸೂರು ಭಾಗದ ಹಿರಿಯ ಮುಖಂಡ ಜಿ.ಟಿ.ದೇವೇಗೌಡ.
ಇದರ ಜೊತೆಗೆ, ವಿವಿಧ ಕಾರಣಗಳಿಂದ ಪಕ್ಷದ ಜೊತೆ ಮುನಿಸಿಕೊಂಡಿರುವ ನಾಯಕರನ್ನೂ ಮತ್ತೆ ಕರೆತಂದು ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿರಿಸಲು ಹೊಸ ದಾಳ ಹೂಡಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಬುಧವಾರ (ಜ 20) ಮಧು ಬಂಗಾರಪ್ಪ ಅವರನ್ನು ಭೇಟಿಯಾಗಲಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಶಿವಮೊಗ್ಗದಲ್ಲಿ ತನ್ನದೇ ಆದ ಛಾಪು ಹೊಂದಿರುವ ಮಧು ಬಂಗಾರಪ್ಪ ಅವರು ಈಗಾಗಲೇ, ಜೆಡಿಎಸ್ ನಿಂದ ಒಂದು ಕಾಲು ಹೊರಗಿಟ್ಟಿದ್ದು, ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಪ್ರಮುಖವಾಗಿ, ಎಚ್.ಡಿ.ಕುಮಾರಸ್ವಾಮಿ ಜೊತೆ ಇವರ ಸಂಬಂಧ ಅಷ್ಟಕಷ್ಟೇ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಇತರ ಕಾಂಗ್ರೆಸ್ ಮುಖಂಡರು ಇವರ ಜೊತೆಗೆ ಈಗಾಗಲೇ ಮಾತುಕತೆಯನ್ನು ನಡೆಸಿದ್ದಾರೆ.

ಈಡಿಗ ಸಮುದಾಯದ ಪ್ರಮುಖ ಮುಖಂಡರು
ಮಧು ಬಂಗಾರಪ್ಪನವರನ್ನು ಕಾಂಗ್ರೆಸ್ಸಿಗೆ ಕರೆತರುವುದು ಜೊತೆಗೆ ಬಿಜೆಪಿಯಲ್ಲಿರುವ ಕುಮಾರ್ ಬಂಗಾರಪ್ಪ ಅವರನ್ನೂ ಕಾಂಗ್ರೆಸ್ಸಿಗೆ ಕರೆತರುವ ನಿಟ್ಟಿನಲ್ಲಿ ಈಡಿಗ ಸಮುದಾಯದ ಪ್ರಮುಖ ಮುಖಂಡರೋರ್ವರು ಇಬ್ಬರೂ ಸಹೋದರರ ಜೊತೆಗೆ ಮಾತುಕತೆಗೆ ಮುಂದಾಗಿದ್ದರು. ಆದರೆ, ಕುಮಾರ್ ಈ ಸುದ್ದಿಯನ್ನು ತಳ್ಳಿಹಾಕಿ, ಮಧು ಅವರು ಬಿಜೆಪಿಗೆ ಬರುವುದಿದ್ದರೆ ಬರಲಿ ಎನ್ನುವ ಹೇಳಿಕೆಯನ್ನು ನೀಡಿದ್ದರು.

ಬಸವರಾಜ ಹೊರಟ್ಟಿ
ಈಗ ಮಧು ಬಂಗಾರಪ್ಪ ಅವರನ್ನು ಜೆಡಿಎಸ್ ನಲ್ಲೇ ಉಳಿಸಿಕೊಳ್ಳಲು ವರಿಷ್ಠರು ಮುಂದಾಗಿದ್ದು, ಅವರ ಜೊತೆಗೆ ಮಾತುಕತೆ ನಡೆಸಲು ಬಸವರಾಜ ಹೊರಟ್ಟಿ ಮತ್ತು ಕೋನ ರೆಡ್ಡಿಯವರನ್ನು ಕಳುಹಿಸಲು ತೀರ್ಮಾನಿಸಿದ್ದಾರೆ. ಈ ಇಬ್ಬರು ಮುಖಂಡರು, ಮಧು ಬಂಗಾರಪ್ಪ ಅವರನ್ನು ಬುಧವಾರ ಭೇಟಿಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಕಡಿದು ಹೋಗಿರುವ ಸಂಬಂಧಗಳನ್ನು ಮತ್ತೆ ಬೆಸೆಯುವ ನಿರ್ಧಾರ
ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲೇ ಬೇಕು ಎಂದು ಪಣತೊಟ್ಟಂತಿರುವ ದೇವೇಗೌಡ್ರು ಮತ್ತು ಕುಮಾರಸ್ವಾಮಿ, ಎರಡೂ ರಾಷ್ಟ್ರೀಯ ಪಕ್ಷಗಳ ಜೊತೆ ಅಂತರವನ್ನು ಕಾಯ್ದುಕೊಳ್ಳಲು ಆರಂಭಿಸಿದ್ದಾರೆ. ಕಡಿದು ಹೋಗಿರುವ ಸಂಬಂಧಗಳನ್ನು ಮತ್ತೆ ಬೆಸೆಯಲು ಜೆಡಿಎಸ್ ಪ್ರಮುಖರು ನಿರ್ಧರಿಸಿದ್ದು, ಇದು ಯಾವರೀತಿ ವರ್ಕೌಟ್ ಆಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.












Click it and Unblock the Notifications