ಐಎಂಎ ಪ್ರಕರಣ : ಶಿವಮೊಗ್ಗದಲ್ಲಿ ಸುಮಾರು 60 ಲಕ್ಷ ವಂಚನೆ
ಶಿವಮೊಗ್ಗ, ಜೂನ್ 14 : ಐಎಂಎ ವಂಚನೆ ಪ್ರಕರಣ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿಲ್ಲ. ಶಿವಮೊಗ್ಗ ಜಿಲ್ಲೆಯ ಹಲವು ಜನರು ಸಹ ಇದರಲ್ಲಿ ಹೂಡಿಕೆ ಮಾಡಿದ್ದು, ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ.
ಶಿವಮೊಗ್ಗ ನಗರದಲ್ಲಿ ಐಎಂಎನಿಂದ ವಂಚನೆ ನಡೆದಿದೆ ಎಂದು 10ಕ್ಕೂ ಅಧಿಕ ದೂರುಗಳು ದಾಖಲಾಗಿವೆ. ಇದುವರೆಗೂ ಬಂದ ದೂರುಗಳ ಆಧಾರದ ಮೇಲೆ ಸುಮಾರು 60 ಲಕ್ಷ ಹಣ ವಂಚನೆಯಾಗಿದೆ ಎಂದು ಅಂದಾಜಿಸಲಾಗಿದೆ.
ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗುತ್ತಿದೆ. ಆದ್ದರಿಂದ, ಪೊಲೀಸರು ಕೋಟೆ ಪೊಲೀಸ್ ಠಾಣೆಯಲ್ಲಿ ವಿಶೇಷ ಡೆಸ್ಕ್ ಆರಂಭಿಸಿದ್ದಾರೆ. ನಗರದಲ್ಲಿ ಐಎಂಎ ವಂಚನೆ ಬಗ್ಗೆ ದೂರು ಕೊಡುವವರು ಇಲ್ಲಿಗೆ ಆಗಮಿಸಿ ದೂರು ನೀಡುವಂತೆ ಮನವಿ ಮಾಡಲಾಗಿದೆ.

ಶಿವಮೊಗ್ಗದ ಟಿಪ್ಪುನಗರದ ನಿವಾಸಿ ಅತಾವುಲ್ಲಾ ಬೇಗ್ ಅವರು ಸುಮಾರು 15 ಲಕ್ಷ ಬಂಡವಾಳವನ್ನು ಹೂಡಿಕೆ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹಲವು ಜನರು ವಂಚನೆಗೊಳಗಾಗಿದ್ದೇವೆ ಎಂದು ದೂರು ನೀಡುತ್ತಿದ್ದಾರೆ.
ಕರ್ನಾಟಕ ಸರ್ಕಾರ ಐಎಂಎ ವಂಚನೆ ಕುರಿತು ತನಿಖೆ ನಡೆಸಲು ಬಿ.ಆರ್.ರವಿಕಾಂತೇಗೌಡ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಿದೆ. ಜನರು ನೀಡಿದ ದೂರಗಳ ಅನ್ವಯ ಐಪಿಸಿ ಸೆಕ್ಷನ್ 406 ಮತ್ತು 420 ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗುತ್ತಿದೆ.
ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ 7 ನಿರ್ದೇಶಕರನ್ನು ಎಸ್ಐಟಿ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದೆ. ಬೆಂಗಳೂರಿನಲ್ಲಿ ಕಂಪನಿಯ ಆಡಿಟರ್ನನ್ನು ಶುಕ್ರವಾರ ಬಂಧಿಸಲಾಗಿದೆ.












Click it and Unblock the Notifications