ಶಿವಮೊಗ್ಗ; ಲಯನ್ ಸಫಾರಿಯಿಂದ ಅಕ್ರಮವಾಗಿ ಮರ ಸಾಗಾಟ?
ಶಿವಮೊಗ್ಗ, ಡಿಸೆಂಬರ್ 19 : ಶಿವಮೊಗ್ಗದ ತ್ಯಾವರೇಕೊಪ್ಪದಲ್ಲಿನ ಲಯನ್ ಸಫಾರಿಯಿಂದ ಟ್ರಾಕ್ಟರ್ ಮೂಲಕ ಮರಗಳನ್ನು ಹೊರಗೆ ಸಾಗಣೆ ಮಾಡಲಾಗಿದೆ. ವಾಚ್ ಮೆನ್ ಲಕ್ಷ್ಮಣ್ ವಿರುದ್ಧ ಈ ಕುರಿತು ದೂರು ದಾಖಲಾಗಿದೆ.
ಲಯನ್ ಸಫಾರಿಯ ಮುಖ್ಯ ಗೇಟ್ ಮೂಲಕವೇ ಮರಗಳನ್ನು ತುಂಬಿದ್ದ ಟ್ರಾಕ್ಟರ್ ಹೊರ ಹೋಗಿದೆ. ಇದು ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ? ಎಂಬುದು ತಿಳಿದುಬಂದಿಲ್ಲ. ಈಗ ಟ್ರಾಕ್ಟರ್ ಮತ್ತು ಮರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಲಯನ್ ಸಫಾರಿಯಿಂದ ಮುರಿದು ಬಿದ್ದಿರುವ ಮರ, ಕೊಂಬೆಗಳನ್ನು ಸಹ ಹೊರಗೆ ಸಾಗಣೆ ಮಾಡಲು ಅವಕಾಶವಿಲ್ಲ. ಇದಕ್ಕೆ ನ್ಯಾಯಾಲಯದ ಅನುಮತಿ ಬೇಕು, ಹಿರಿಯ ಅಧಿಕಾರಿಗಳು ಒಪ್ಪಿಗೆ ಕೊಡಬೇಕು. ಆದರೆ, ಯಾವುದೇ ನಿಯಮ ಪಾಲಿಸದೇ ಮರ ಸಾಗಣೆ ಮಾಡಲಾಗಿದೆ.

ಮರ ಸಾಗಣೆ ಪ್ರಕರಣ ಅನುಮಾನ ಹುಟ್ಟು ಹಾಕಿದ್ದು, ವಾಚ್ ಮೆನ್ ಲಕ್ಷ್ಮಣ್ ವಿರುದ್ಧ ಆಯನೂರು ರೇಂಜ್ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ. ಲಯನ್ ಸಫಾರಿಯ ಡಿಎಫ್ಒ ಮತ್ತು ಅವರ ಕೆಳಗಿನ ಅಧಿಕಾರಿಗಳ ನಡುವಿನ ತಿಕ್ಕಾಟವೇ ಈ ಪ್ರಕರಣಕ್ಕೆ ಕಾರಣ ಎಂಬ ಆರೋಪವೂ ಕೇಳಿ ಬರುತ್ತಿದೆ.
ಆರ್ಎಫ್ಒ ಕಳೆದ ಒಂದು ತಿಂಗಳಿನಿಂದ ವೈದ್ಯಕೀಯ ರಜೆ ಮೇಲೆ ಇದ್ದಾರೆ. ಆರ್ಎಫ್ಒ ಹಾಗೂ ಡಿಎಫ್ಒ ನಡುವಿನ ತಿಕ್ಕಾಟದ ಕಾರಣದಿಂದಾಗಿ ಲಯನ್ ಸಫಾರಿಯಿಂದ ಅಕ್ರಮವಾಗಿ ನಾಟ ಸಾಗಣೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಡಿಎಫ್ಒ ಮುಕುಲ್ ಚಂದ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, "ಲಯನ್ ಸಫಾರಿಯಿಂದ ಮರಗಳು ಹೊರ ಹೋಗಿವೆ. ಭದ್ರತಾ ಸಿಬ್ಬಂದಿಯನ್ನು ಕರೆದು ಈ ಕುರಿತು ಮಾಹಿತಿ ಪಡೆದಿದ್ದೇನೆ. ನೌಕರರ ನಡುವೆ ಯಾವುದೇ ತಿಕ್ಕಾಟವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಲಯನ್ ಸಫಾರಿಯಿಂದ ಬೆಲೆ ಬಾಳುವ ಮರಗಳು ಹೋರ ಹೋಗಿದ್ದು ಹೇಗೆ?, ಇದಕ್ಕೆ ಯಾರು ಕಾರಣ, ಯಾರ ಕೈವಾಡವಿದೆ? ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.












Click it and Unblock the Notifications