ಹುಣಸೋಡು ಸ್ಪೋಟ; ಹಾನಿಯಾದ ಮನೆಗಳಿಗೆ ಸಿಕ್ಕಿಲ್ಲ ಪರಿಹಾರ
ಶಿವಮೊಗ್ಗ, ಫೆಬ್ರವರಿ 03: ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದ ಬಳಿಯ ಕಲ್ಲು ಕ್ರಷರ್ನಲ್ಲಿ ಜನವರಿ 21 ಸ್ಫೋಟ ಸಂಭವಿಸಿತ್ತು. ಸ್ಫೋಟದ ತೀವ್ರತೆಗೆ 6 ಕಾರ್ಮಿಕರು ಮೃತಪಟ್ಟಿದ್ದರು.
ಸ್ಪೋಟದಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆ ವತಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಜಲ್ಲಿ ಕ್ರಶರ್, ಕಲ್ಲುಕ್ವಾರಿ ಸಮೀಪದಲ್ಲೇ ಇರುವ ಹುಣಸೋಡು, ಹೊಸೂರು, ಅಬ್ಬಲಗೆರೆ, ಬಸವನಗಂಗೂರು, ಗೆಜ್ಜೇನಹಳ್ಳಿ, ಹನುಮಂತ ನಗರ, ಜಕಾತಿಕೊಪ್ಪ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಮನೆಗಳ ಗೋಡೆಗಳು ಬಿರುಕುಬಿಟ್ಟಿವೆ.

ಕೆಲ ಮನೆಗಳ ಛಾವಣಿ ಹಾಳಾಗಿದ್ದು, ಕೆಲವು ಮನೆಗಳ ಟೀವಿ, ಎಲೆಕ್ಟ್ರಾನಿಕ್ ಉಪಕರಣ ಸ್ಪೋಟದಿಂದ ಹಾನಿಗೊಳಗಾಗಿವೆ ಎಂದು ಪ್ರತಿಭಟನಾನಿರತರು ಆರೋಪಿಸಿದರು. ಜಿಲ್ಲಾಡಳಿತ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ಲಕ್ಷ್ಯದಿಂದ ತಮ್ಮದಲ್ಲದ ತಪ್ಪಿನಿಂದ, ನೂರಾರು ಗ್ರಾಮಸ್ಥರು, ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ.
ಸ್ಪೋಟ ಸಂಭವಿಸಿ 10 ರಿಂದ 12 ದಿನಗಳಾದರೂ ಅಧಿಕಾರಿಗಳು ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿಲ್ಲ. ಗ್ರಾಮಸ್ಥರಿಗಾದ ನಷ್ಟದ ಬಗ್ಗೆ ಪರಿಶೀಲಿಸುವುದಾಗಲೀ, ಪರಿಹಾರ ನೀಡುವುದಾಗಲೀ ಮಾಡಿಲ್ಲ ಎಂದುಆರೋಪಿಸಿದರು.
ಅಧಿಕಾರಿಗಳು ಕೂಡಲೇ ಈ ಗ್ರಾಮಗಳಿಗೆ ಭೇಟಿ ನೀಡಿ ಹಾನಿಗೊಳಗಾದ ಮನೆಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ನವ ಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಗೋ. ರಮೇಶ್ ಗೌಡ, ಸಂತೋಷ್, ದೇವೇಂದ್ರಪ್ಪ, ನಾಗರಾಜ್, ನಯನಾ, ಶಿವಣ್ಣ, ರಾಜು ಗುಜ್ಜರ್, ಹೆಚ್.ಲೋಕೇಶ, ಪರಶುರಾಮಪ್ಪ, ಲಕ್ಷ್ಮಣ ಮೊದಲಾದವರು ಪಾಲ್ಗೊಂಡಿದ್ದರು.












Click it and Unblock the Notifications