ಶಿವಮೊಗ್ಗ; ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ರದ್ದು
ಶಿವಮೊಗ್ಗ, ಜುಲೈ 24 : ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ನಡೆಯುತ್ತಿದ್ದ ರಾಜಬೀದಿ ಉತ್ಸವವನ್ನು ಈ ಬಾರಿ ರದ್ದು ಮಾಡಲಾಗಿದೆ. ಸಾವಿರಾರು ಜನರು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಸಹ ಮಾಡಲಾಗುತ್ತಿತ್ತು.
Recommended Video
ಹಿಂದೂ ಮಹಾಸಭಾ ಗಣಪತಿ ಸಮಿತಿ ಅಧ್ಯಕ್ಷ ಎಂ. ಕೆ. ಸುರೇಶ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ವರ್ಷ ರಾಜಬೀದಿ ಉತ್ಸವ ರದ್ದುಗೊಳಿಸಲಾಗಿದೆ" ಎಂದು ಹೇಳಿದ್ದಾರೆ.
ಸಂಪ್ರದಾಯದಂತೆ ಚೌತಿಯಂದು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಚತುರ್ದಶಿಯಂದು ದೇವಾಲಯದ ಹಿಂಭಾಗದಲ್ಲಿನ ಭೀಮನ ಮಡುವಿನಲ್ಲಿ ಗಣೇಶ ವಿಸರ್ಜನೆ ಮಾಡಲಾಗುತ್ತದೆ. ವಿಸರ್ಜನೆ ವೇಳೆ ನಡೆಯುತ್ತಿದ್ದ ರಾಜಬೀದಿ ಉತ್ಸವ ಈ ಬಾರಿ ಇರುವುದಿಲ್ಲ.

ಈ ಬಾರಿ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ ಬಳಿಕ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಇರುವುದಿಲ್ಲ. ಪ್ರತಿನಿತ್ಯದ ಪೂಜೆ ಮಾತ್ರ ಎಂದಿನಂತೆ ನಡೆಯಲಿದೆ. ನಂಜುಡಪ್ಪ ಅವರ ಮೊಮ್ಮಗ ಗಣೇಶ ಅವರೇ ಗಣೇಶ ಮೂರ್ತಿಯನ್ನು ಸಿದ್ಧಪಡಿಸಲಿದ್ದಾರೆ.
ಶಿವಮೊಗ್ಗ ನಗರದ ಕೋಟೆ ರಸ್ತೆಯಲ್ಲಿ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ಗಣಪತಿ ವಿಸರ್ಜನೆ ವೇಳೆ ನಡೆಯುವ ರಾಜಬೀದಿ ಉತ್ಸವ ಅಕ್ಕಪಕ್ಕದ ಜಿಲ್ಲೆಯ ಜನರನ್ನು ಸಹ ಆಕರ್ಷಿಸುತ್ತದೆ. 11.30ರ ಸುಮಾರಿಗೆ ಆರಂಭವಾಗುವ ರಾಜಬೀದಿ ಉತ್ಸವ ತಡರಾತ್ರಿ ತನಕ ನಡೆಯುತ್ತಿತ್ತು.
ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ಶಿವಮೊಗ್ಗ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಇರುತ್ತದೆ. ನಗರದಲ್ಲಿ ಅಂದು ಅಘೋಷಿತ ಬಂದ್ ವಾತಾವರಣ ಇರುತ್ತದೆ. ಅದರಲ್ಲಿಯೂ ಅಮೀರ್ ಅಮಹದ್ ಸರ್ಕಲ್ನಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರು ಭದ್ರತೆ ಒದಗಿಸಿರುತ್ತಾರೆ.












Click it and Unblock the Notifications