ಶಿವಮೊಗ್ಗದಲ್ಲಿ ಗೀತಾ ಶಿವಣ್ಣ ಚುನಾವಣಾ ಭಾಷಣ
ಶಿವಮೊಗ್ಗ, ಮಾ 18: ಕುಟುಂಬದ ಆರಾಧ್ಯ ದೈವ ಮಲೆ ಮಹದೇಶ್ವರನ ದರ್ಶನ ಪಡೆದ ನಂತರ, ಮುಂಬರುವ ಲೋಕಸಭಾ ಚುನಾವಣೆಗೆ ಶಿವಮೊಗ್ಗದ ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪ್ರಥಮ ಬಾರಿಗೆ ನಗರದಲ್ಲಿ ನಡೆದ ಜೆಡಿಎಸ್ ಸಾರ್ವಜನಿಕ ಸಭೆಯಲ್ಲಿ ಕಾಣಿಸಿಕೊಂಡಿದ್ದಾರೆ.
ರಾಜಕೀಯ ನನಗೆ ಹೊಸದಲ್ಲ, ಆದರೆ ಅನುಭವ ಕಮ್ಮಿ.ಶಿವಮೊಗ್ಗದ ಜನತೆ ನನ್ನನ್ನು ಆರಿಸಿದ್ದಲ್ಲಿ ಸಂಪೂರ್ಣವಾಗಿ ಕ್ಷೇತ್ರದ ಅಭಿವೃದ್ದಿಗೆ ನನ್ನನ್ನು ತೊಡಗಿಸಿ ಕೊಳ್ಳುತ್ತೇನೆ ಎಂದು ಗೀತಾ ಶಿವರಾಜ್ ಕುಮಾರ್ ಈ ಸಂದರ್ಭದಲ್ಲಿ ಹೇಳಿದರು.
ನಗರದಲ್ಲಿ ಸೋಮವಾರ (ಮಾ 17) ನಡೆದ ಜೆಡಿಎಸ್ ಸಾರ್ವಜನಿಕ ಸಭೆಯಲ್ಲಿ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಗೊಂಡ ನಂತರ ಮಾತನಾಡುತ್ತಿದ್ದ ಗೀತಾ, ರಾಜಕೀಯದಲ್ಲಿ ನನಗೆ ಅನುಭವ ಕಮ್ಮಿಯಿದ್ದರೂ ಹಿರಿಯರಾದ ದೇವೇಗೌಡ ಮತ್ತು ಕುಮಾರಸ್ವಾಮಿಯವರ ಮಾರ್ಗದರ್ಶನದಂತೆ ನಡೆಯುತ್ತೇನೆ ಎಂದು ಹೇಳಲು ಮರೆಯಲಿಲ್ಲ.
ರಾಜ್ ಕುಟುಂಬದ ಸೊಸೆಯಾಗಿರುವ ನನಗೆ ನನ್ನ ಪತಿಯ ಕುಟುಂಬದಿಂದ ಸಂಪೂರ್ಣ ಬೆಂಬಲವಿದೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಕ್ಕೆ ನನ್ನ ಪತಿ ಕೂಡಾ ಬೆಂಬಲಿಸಿದ್ದಾರೆಂದು ಗೀತಾ ಶಿವರಾಜ್ ಕುಮಾರ್ ಈ ಸಂದರ್ಭದಲ್ಲಿ ಮತ್ತೊಮ್ಮೆ ಸ್ಪಷ್ಟಪಡಿಸಿದರು.
ನನ್ನ ತಂದೆಯ ಕೊನೆಯ ಕಾಲದಲ್ಲಿ ಅವರ ಕೈಹಿಡಿದಿದ್ದು ಜೆಡಿಎಸ್ ಪಕ್ಷ, ಹಾಗಾಗಿ ನನ್ನ ರಾಜಕೀಯ ಜೀವನದ ಭವಿಷ್ಯವನ್ನು ರೂಪಿಸಿಕೊಳ್ಳಲು ಜೆಡಿಎಸ್ ಪಕ್ಷವನ್ನು ಆರಿಸಿ ಕೊಂಡಿದ್ದೇನೆಂದು ಜೆಡಿಎಸ್ ಸೇರಿದ ತನ್ನ ನಿಲುವನ್ನು ಗೀತಾ ಸಮರ್ಥಿಸಿಕೊಂಡರು.
ಈ ಮಧ್ಯೆ, ಶಿವಮೊಗ್ಗದಲ್ಲಿ ಕಾಂಗ್ರೆಸ್ ಪಕ್ಷ ಮಂಜುನಾಥ್ ಬಂಡಾರಿಗೆ ಟಿಕೆಟ್ ನೀಡಿದ್ದಕ್ಕೆ ಕುಮಾರ್ ಬಂಗಾರಪ್ಪ ಬಣದ ಕಾರ್ಯಕರ್ತರ ಪ್ರತಿಭಟನೆ ಮುಂದುವರಿದಿದೆ. ಕಾಂಗ್ರೆಸ್ ಪ್ರತಿಭಟನೆಯ ಬಿಸಿಯನ್ನು ಹತ್ತಿಕ್ಕಿ ಹೇಗೆ ಒಗ್ಗಟ್ಟಾಗಿ ಚುನಾವಣೆ ಎದುರಿಸಲಿದೆ ಎನ್ನುವುದನ್ನು ಕಾದು ನೋಡ ಬೇಕಾಗಿದೆ.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ (ಮಾ 18) ಗೀತಾ ಶಿವರಾಜ್ ಕುಮಾರ್ ಪತ್ರಿಕಾಗೋಷ್ಠಿ ಆಯೋಜಿಸಲಾಗಿದೆ.
ಗೀತಾ ಶಿವರಾಜ್ ಕುಮಾರ್ ಜೆಡಿಎಸ್ ಸೇರ್ಪಡೆ ಗ್ಯಾಲರಿ
ಸಾರ್ವಜನಿಕ ಸಭೆಯಲ್ಲಿ ಗೀತಾ ಶಿವರಾಜ್ ಕುಮಾರ್ ಭಾಷಣದ ಹೈಲೈಟ್ಸ್ ಸ್ಲೈಡಿನಲ್ಲಿ..
ಜೆಡಿಎಸ್ ಸೇರಲು ಕಾರಣ
ನನ್ನ ತಂದೆಯಂತೆ ನನ್ನ ಸಹೋದರನ ಕೈಹಿಡಿದಿದ್ದು ಜೆಡಿಎಸ್ ಪಕ್ಷ. ನಾನು ಆ ಪಕ್ಷವನ್ನು ಆರಿಸಿ ಕೊಳ್ಳಲು ಇದೇ ಕಾರಣ. ಶಿವಮೊಗ್ಗದಲ್ಲಿ ನನ್ನ ತಾಯಿ ಕಣಕ್ಕಿಳಿಯ ಬೇಕಾಗಿತ್ತು, ಆದರೆ ಕಾರಣಾಂತರದಿಂದ ಅವರು ಸ್ಪರ್ಧಿಸುತ್ತಿಲ್ಲ. ಹಾಗಾಗಿ ನಾನು ಇಲ್ಲಿಂದ ಸ್ಪರ್ಧಿಸ ಬೇಕೆಂದು ನಿರ್ಧರಿಸಿದ್ದೇನೆ.
ನನಗೆ ಅವಕಾಶ ಕೊಡಿ
ನನಗೆ ಶಿವಮೊಗ್ಗದ ಜನತೆ ಅವರ ಸೇವೆ ಮಾಡಲು ಅವಕಾಶ ಕೊಟ್ಟರೆ ಕೆಲಸ ಮಾಡಿ ತೋರಿಸುತ್ತೇನೆ. ಹುಟ್ಟಿ ಬೆಳೆದ ನನ್ನ ತವರು ಮನೆ ಮತ್ತು ಮದುವೆಯಾದ ನಂತರ ನನ್ನ ಗಂಡನ ಮನೆ ನನಗೆ ಉತ್ತಮ ಸಂಸ್ಕಾರ ಕಲಿಸಿ ಕೊಟ್ಟಿದೆ.
ಡಾ. ರಾಜ್ ನೆನಪಿಸಿ ಕೊಂಡ ಗೀತಾ
ಸಭೆಯಲ್ಲಿ ಮಾತನಾಡುತ್ತಿದ್ದ ಗೀತಾ, ಅಪ್ಪಾಜಿಯವರಿಂದ ದಿನಾ ಒಂದೊಂದು ಒಳ್ಳೆಯ ಗುಣವನ್ನು ಕಲಿತಿದ್ದೇನೆ. ಹಿರಿಯರಿಗೆ ಹೇಗೆ ಗೌರವ ಕೊಡ ಬೇಕೆನ್ನುವುದನ್ನು ನಾನು ನನ್ನ ಅಪ್ಪಾಜಿಯವರಿಂದ ಕಲಿತಿದ್ದೇನೆ. 45 ವರ್ಷದ ನನ್ನ ಜೀವನದಲ್ಲಿ ಬಹಳಷ್ಟು ಕಲಿತಿದ್ದೇನೆ. ರಾಜ್ ಹೆಸರು ಪ್ರಸ್ತಾಪಿಸುತ್ತಿದ್ದಂತೆಯೇ ಸಭೆಯಲ್ಲಿ ಭಾರೀ ಕರತಾಡನ ವ್ಯಕ್ತವಾಯಿತು.
ಬಂಗಾರಪ್ಪ ನೆನಪಿಸಿ ಕೊಂಡ ಗೀತಾ
ನನ್ನ ತಂದೆಗೆ ಶಿವಮೊಗ್ಗ ಎಂದರೆ ಉಸಿರು. ಕ್ಷೇತ್ರಕ್ಕಾಗಿ ಅವರು ತನ್ನ ಜೀವವನ್ನೇ ಮುಡಿಪಾಗಿಟ್ಟಿದ್ದರು. ತನ್ನ ಕೊನೆಯ ದಿನಗಳನ್ನು ಅವರು ಶಿವಮೊಗ್ಗದಲ್ಲೇ ಕಳೆಯಲು ಬಯಸಿದ್ದರು. ಅವರ ಮಗಳಾಗಿ, ರಾಜ್ ಕುಟುಂಬದ ಸೊಸೆಯಾಗಿ ಶಿವಮೊಗ್ಗದ ಜನತೆ ಅವಕಾಶ ನೀಡಿದರೆ ಕೆಲಸ ಮಾಡಿ ತೋರಿಸುತ್ತೇನೆ.
ಜೆಡಿಎಸ್ ಸೇರ್ಪಡೆ
ಗೀತಾ ಶಿವರಾಜ್ ಕುಮಾರ್ ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಸಾರ್ವಜನಿಕರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಚ್ ಡಿ ಕುಮಾರಸ್ವಾಮಿ ಶಾಲು ಹಾಕಿ ಗೀತಾ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು.
ತಾಯಿಗೆ ಕ್ಯಾನ್ಸರ್
ನನ್ನ ತಾಯಿಗೆ ಕ್ಯಾನ್ಸರ್ ಇರುವುದರಿಂದ ಅಕ್ಕ ಕಣಕ್ಕಿಳಿಯುತ್ತಿದ್ದಾರೆಂದು ಮಧು ಬಂಗಾರಪ್ಪ ಹೇಳಿದ್ದಾರೆ. ಸಾರ್ವಜನಿಕ ಸಭೆಯಲ್ಲಿ ಕುಮಾರಸ್ವಾಮಿ, ಮಧು ಬಂಗಾರಪ್ಪ ಹೊರತಾಗಿ ವೈ ಎಸ್ ವಿ ದತ್ತಾ, ಧನಂಜಯ್ ಕುಮಾರ್ , ಎ ಕೃಷ್ಣಪ್ಪ ಮುಂತಾದವರು ಭಾಗವಹಿಸಿದ್ದರು.