ಥೈಲ್ಯಾಂಡ್, ಮಹಾರಾಷ್ಟ್ರದಂತೆ ಶಿವಮೊಗ್ಗ ಜಿಲ್ಲೆಯಲ್ಲೊಂದು ಗಣಪತಿ ಮ್ಯೂಸಿಯಂ
ಶಿವಮೊಗ್ಗ, ಆಗಸ್ಟ್, 31: ವಿಶ್ವಾದ್ಯಂತ ಸಾವಿರಾರು ಸ್ವರೂಪದಲ್ಲಿ ಗಣೇಶ ಮೂರ್ತಿಗಳನ್ನು ಪೂಜಿಸಲಾಗುತ್ತಿದೆ. ಹೀಗೆ ಶಿವಮೊಗ್ಗ ಜಿಲ್ಲೆಯಲ್ಲಿಯೂ ಸಹ ವಿವಿಧ ರೂಪದ ಗಣೇಶ ಮೂರ್ತಿಗಳು ಗಮನ ಸೆಳೆದಿವೆ. ಹೊಸನಗರ ತಾಲೂಕಿನ ಕಾರಣಗಿರಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಗಣಪತಿ ಮ್ಯೂಸಿಯಂ ಅನ್ನು ಸಿದ್ಧಪಡಿಸಲಾಗಿದೆ. ದೇಶದಲ್ಲೇ ಇದು ವಿಭಿನ್ನವಾದ ಪ್ರಯೋಗವಾಗಿದೆ. ದೇಶ ವಿದೇಶಗಳಲ್ಲಿರುವ ಸಾವಿರಾರು ರೂಪದ ಗಣಪತಿಗಳನ್ನು ಒಂದೇ ಸೂರಿನಡಿ ನೋಡಬಹುದಾಗಿದೆ.
ಕಾರಣಗಿರಿ ಸಿದ್ಧಿವಿನಾಯಕ ಸ್ವಾಮಿ ದೇವಸ್ಥಾನದ ಆವರಣದಲ್ಲಿ 2017ರಲ್ಲಿ ಗಣಪತಿ ಮ್ಯೂಸಿಯಂ ಸ್ಥಾಪಿಸಲಾಗಿದೆ. ಇಲ್ಲಿ ಮೂರು ಸಾವಿರಕ್ಕೂ ಹೆಚ್ಚು ಗಣಪತಿಯ ಮೂರ್ತಿಗಳು, ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಒಂದಕ್ಕಿಂತಲೂ ಒಂದು ಭಿನ್ನವಾಗಿದ್ದು, ಭಕ್ತರನ್ನು ತನ್ನತ್ತ ಸೆಳೆಯುತ್ತಿವೆ ಈ ಮೂರ್ತಿಗಳು. ಅಷ್ಟೆ ಅಲ್ಲ ದೇಶ, ವಿದೇಶದಿಂದ ಇಲ್ಲಿಗೆ ಪ್ರವಾಸಿಗರು ಆಗಮಿಸಿ ನಾನಾ ರೂಪದ ಮಂಗಳ ಮೂರ್ತಿಯನ್ನು ಕಂಡು ಸಂತೋಷವನ್ನು ವ್ಯಕ್ತಪಡಿಸುತ್ತಾರೆ.
ದೇವಸ್ಥಾನದ ಆವರಣದಲ್ಲಿರುವ ಮ್ಯೂಸಿಯಂನಲ್ಲಿ ನೂರಾರು ಬಗೆಯ ಗಣೇಶ ಮೂರ್ತಿಗಳಿವೆ. ಇವುಗಳಲ್ಲಿ ಕೆಲವು ಮೂರ್ತಿಗಳನ್ನು ದೇಶದ ವಿವಿಧ ಭಾಗಗಳಿಂದ ತರಿಸಲಾಗಿದೆ. ಕೆಲವು ಮೂರ್ತಿಗಳನ್ನು ವಿದೇಶದಿಂದಲೂ ತರಲಾಗಿದೆ. ಮತ್ತೆ ಕೆಲವು ಮೂರ್ತಿಗಳನ್ನು ಇಲ್ಲಿಯೇ ಸಿದ್ಧಪಡಿಸಿ ಇಡಲಾಗಿದೆ.
ಗಣೇಶನ ವಿವರ ತಿಳಿಯಲು ಕಾರಣಗಿರಿಗೆ ಭೇಟಿ ಕೊಡಿ
ದೇಶ, ವಿದೇಶಗಳಲ್ಲಿ ಗಣಪತಿಯ ಮ್ಯೂಸಿಯಂಗಳನ್ನು ಸ್ಥಾಪಿಸಲಾಗಿದೆ. ರಾಜ್ಯದಲ್ಲಿಯೂ ಇಂತಹ ಪ್ರಯೋಗ ಆಗಿರುವುದು ಗಣಪತಿಯ ಭಕ್ತರಿಗೆ ಹೆಮ್ಮೆಯನ್ನು ಉಂಟು ಮಾಡಿದೆ. ಥೈಲ್ಯಾಂಡ್ ದೇಶದಲ್ಲಿ ಗಣಪತಿಯ ಮ್ಯೂಸಿಯಂ ಸ್ಥಾಪಿಸಲಾಗಿದೆ. ಮಹಾರಾಷ್ಟ್ರದ ಪೂಣೆಯಲ್ಲಿ ದೇಶದಲ್ಲಿಯೇ ಮೊದಲ ಗಣಪತಿ ಮ್ಯೂಸಿಯಂ ನಿರ್ಮಿಸಲಾಯಿತು. ಅಮರಾವತಿ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಗಜಮುಖನ ಮ್ಯೂಸಿಯಂ, ಇಂಡಿಯಾ ಬುಕ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದೆ. ಮಧ್ಯಪ್ರದೇಶದ ಇಂಧೋರ್ನಲ್ಲಿ ಈಗ ಗಣೇಶನ ಮ್ಯೂಸಿಯಂ ಆರಂಭಿಸಲಾಗುತ್ತಿದೆ. ಹೊಸನಗರ ತಾಲೂಕು ಕಾರಣಗಿರಿಯಲ್ಲಿ ಸ್ಥಾಪಿಸಲಾಗಿರುವ ಗಣಪತಿ ಮ್ಯೂಸಿಯಂ ದಕ್ಷಿಣ ಭಾರತದಲ್ಲಿಯೇ ವಿಭಿನ್ನವಾಗಿದೆ. ಇಲ್ಲಿಗೆ ಬಂದರೆ ಗಣಪತಿಯ ವಿವಿಧ ರೂಪಗಳನ್ನ ಕಣ್ತುಂಬಿಕೊಳ್ಳಬಹುದು. ಅಷ್ಟೆ ಅಲ್ಲ ಗಣೇಶನ ಕುರಿತ ಪೂರ್ಣ ಮಾಹಿತಿಯು ಲಭಿಸಲಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಕಾರಣಗಿರಿ ಶ್ರೀ ಸಿದ್ಧಿ ವಿನಾಯಕನ ದೇವಸ್ಥಾನವಿದೆ. ಹೊಸನಗರದಿಂದ ನಗರ ಹೋಬಳಿ ಕಡೆಗೆ ತೆರಳುವ ಮಾರ್ಗದಲ್ಲಿನ ರಸ್ತೆಯ ಪಕ್ಕದಲ್ಲಿಯೇ ಗಣಪತಿ ದೇಗುಲ ಇದೆ.